ಮುರುಘಾ ಶರಣರಿಗೆ ನಿಲ್ಲದ ಸಂಕಷ್ಟ: ಶ್ರೀಗಳ ವಿರುದ್ಧ 3ನೇ FIR ದಾಖಲು
ಚಿತ್ರದುರ್ಗ: ಮಠದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಶ್ರೀಗಳ ವಿರುದ್ಧ 3ನೇ ಎಫ್ಐಆರ್ ದಾಖಲಾಗಿದೆ.
ಬಾಲ ನ್ಯಾಯ ಕಾಯ್ದೆ 2015ನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. ಚಿತ್ರದುರ್ಗ ಗ್ರಾಮೀಣ ಪೊಲೀಸರು ಮಂಗಳವಾರ ಶ್ರೀಗಳ ವಿರುದ್ಧ ಮೂರನೇ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ನೀಡಿದ ದೂರಿನ ಮೇರೆಗೆ, ಪೊಲೀಸರು ಮಠಾಧೀಶರು, ಅಂದಿನ ಕಾರ್ಯದರ್ಶಿ ಪರಮಶಿವಯ್ಯ, ಹಾಸ್ಟೆಲ್ ವಾರ್ಡನ್ ರಶ್ಮಿ ಮತ್ತು ಮಡಿಲು ದತ್ತು ಕೇಂದ್ರದ ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲಾಗಿದೆ.

ನಾಲ್ಕೂವರೆ ವರ್ಷದ ಬಾಲಕಿ ಹಾಗೂ 16 ವರ್ಷದ ಮತ್ತೋರ್ವ ಬಾಲಕಿ, ಇಬ್ಬರು ಬಾಲಕಿಯರ ಬಗ್ಗೆ ಮಡಿಲು ಯೋಜನೆಗೆ ಮಾಹಿತಿ ನೀಡಿಲ್ಲ. ಮಹಿಳಾ-ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾ ಘಟಕಕ್ಕೂ ತಿಳಿಸಿಲ್ಲ. ಇದು ಬಾಲ ನ್ಯಾಯ ಕಾಯ್ದೆಯ ಉಲ್ಲಂಘನೆ ಎಂಬ ಆರೋಪ ಮಾಡಿದ್ದು, ಶಿವಮೂರ್ತಿ ಶರಣರ ವಿರುದ್ಧ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ದೂರು ನೀಡಿದ್ದಾರೆ.
ಮಠವು ನಡೆಸುತ್ತಿರುವ ವಸತಿ ನಿಲಯದ ಆವರಣದಲ್ಲಿ ಪತ್ತೆಯಾದ ನಾಲ್ಕೂವರೆ ವರ್ಷದ ಬಾಲಕಿ ಹಾಗೂ 16 ವರ್ಷದ ಬಾಲಕಿಯ ವಿವರಗಳನ್ನು ಮಠವು ಉದ್ದೇಶಪೂರ್ವಕವಾಗಿ ಮರೆಮಾಚಿದೆ ಮತ್ತು ಈ ಮೂಲಕ ಬಾಲನ್ಯಾಯ ಕಾಯ್ದೆಯ ಸೆಕ್ಷನ್ 32 ಅನ್ನು ಉಲ್ಲಂಘಿಸಿದೆ ಎಂದು ಮಕ್ಕಳ ಕಲ್ಯಾಣ ಸಮಿತಿ ದೂರಿನಲ್ಲಿ ಆರೋಪಿಸಿದೆ.
ಅಕ್ಟೋಬರ್ 12 ರಂದು ಮಠದ ಹಾಸ್ಟೆಲ್ ಆವರಣದಲ್ಲಿ ಸುಮಾರು ನಾಲ್ಕೂವರೆ ವರ್ಷದ ಬಾಲಕಿಯೊಬ್ಬಳು ಪತ್ತೆಯಾಗಿದ್ದಳು. ಮಗುವಿನ ಪೋಷಕರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಆದರೆ ಮಗುವನ್ನು ಮಠದಿಂದ ನಡೆಸಲ್ಪಡುವ ವಿಶೇಷ ದತ್ತು ಕೇಂದ್ರದಲ್ಲಿ ನೋಂದಾಯಿಸಲಾಗಿಲ್ಲ ಇದರಿಂದ ಕಾಯ್ದೆಯ ಉಲ್ಲಂಘನೆಯಾಗಿದೆ ಎನ್ನಲಾಗಿದೆ.
ಮುರುಘಾ ಮಠದಲ್ಲಿ ಹಲವು ಮಕ್ಕಳನ್ನು ಅನಧಿಕೃತವಾಗಿ ಇರಿಸಿರುವ ಆರೋಪ ಕೇಳಿಬಂದಿತ್ತು ಈ ಬಗ್ಗೆ ದೂರು ಕೂಡ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ವಸತಿ ಶಾಲೆಯಲ್ಲಿದ್ದ ಮಕ್ಕಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ವಸತಿ ಶಾಲೆಯಲ್ಲಿ ಪತ್ತೆಯಾಗಿರುವ ಹೆಣ್ಣು ಮಗುವಿನ ಪೋಷಕರ ಪತ್ತೆಗಾಗಿ ಪತ್ರಿಕಾ ಜಾಹೀರಾತನ್ನು ನೀಡಲಾಗಿತ್ತು.
ಇತ್ತ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿರುವ ಮುರುಘಾ ಶರಣರ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಮಠದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.












Click it and Unblock the Notifications