Breaking; ಚಿತ್ರದುರ್ಗ, ಜಮೀನಿನಲ್ಲಿ ಸಿಕ್ಕಿದ್ದ ಪುರಾತನ ವಿಗ್ರಹ ಕಳುವು
ಚಿತ್ರದುರ್ಗ, ಡಿಸೆಂಬರ್ 22; ಎರಡು ವರ್ಷಗಳ ಹಿಂದೆ ಜಮೀನಿನಲ್ಲಿ ದೊರೆತಿದ್ದ ಪುರಾತನ ಕಾಲದ ವಿಗ್ರಹವನ್ನು ದೇವಾಲಯದಿಂದ ಕಳ್ಳತನ ಮಾಡಲಾಗಿದೆ. ಸುಮಾರು 800 ವರ್ಷಗಳ ಹಿಂದಿನದ್ದು ಎನ್ನಲಾದ ದೇವರ ವಿಗ್ರಹವನ್ನು ಮಂಗಳವಾರ ತಡರಾತ್ರಿ ಕಳ್ಳರು ಹೊತ್ತೊಯ್ದಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹೂವಿನಹೊಳೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದೇವರ ವಿಗ್ರಹ ಕಳ್ಳತನದಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಗ್ರಾಮಸ್ಥರು ಮುಂಜಾನೆ ನೋಡಿದಾಗ ದೇವಸ್ಥಾನದಲ್ಲಿ ವಿಗ್ರಹ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ.
ಜಮೀನಿನಲ್ಲಿ ಸಿಕ್ಕಿದ್ದ ವಿಗ್ರಹವನ್ನು ಗ್ರಾಮದ ಈಶ್ವರ ದೇವಸ್ಥಾನದಲ್ಲಿ ಇಟ್ಟು ಪ್ರತಿದಿನ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿತ್ತು. ಆದರೆ ಎರಡು ವರ್ಷಗಳ ಬಳಿಕ ಕಳ್ಳರು ದೇವರ ವಿಗ್ರಹ ಮೂರ್ತಿಯನ್ನು ಕಳವು ಮಾಡಿದ್ದಾರೆ.

ದೇವರ ವಿಗ್ರಹ ಕಳುವಾದ ಬಗ್ಗೆ ಪೊಲೀಸರಿಗೆ ಸಹ ಮಾಹಿತಿ ನೀಡಲಾಗಿದೆ. ಅಬ್ಬಿನಹೊಳೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಪೊಲೀಸರು ಸ್ಥಳಕ್ಕೆ ಧಾವಿಸುವ ಸಾಧ್ಯತೆ ಇದೆ. ದೇವಾಲಯದ ಬೀಗ ಒಡೆದು ವಿಗ್ರಹ ಕಳವು ಮಾಡಲಾಗಿದೆ.
ಎಲ್ಲಿ ದೊರೆತಿತ್ತು ವಿಗ್ರಹ?; ಜಮೀನಿನಲ್ಲಿ ಜೆಸಿಬಿಯಿಂದ ಮಣ್ಣು ಹಸನುಗೊಳಿಸುವಾಗ ಹಿರಿಯೂರು ತಾಲೂಕಿನ ಹೂವಿನಹೊಳೆ ಗ್ರಾಮದ ಗಿರಿಸ್ವಾಮಿ ಮತ್ತು ವೆಂಕಟರಮಣಪ್ಪ ಜಮೀನಿನ ಮಧ್ಯದಲ್ಲಿ ಕೆಲವು ವಿಗ್ರಹಗಳು ದೊರೆತಿದ್ದವು.
ಶಂಕ, ಚಕ್ರ, ಗದೆ, ಕೀರಿಟ, ಜನಿವಾರ ಸಹಿತವಿದ್ದ 4 ಅಡಿ ಮೂರ್ತಿ ದೊರೆತಿತ್ತು. ಜಮೀನಿನಲ್ಲಿ ವಿಗ್ರಹ ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಅಚ್ಚರಿ ತಂದಿತ್ತು. ಈ ವಿಗ್ರಹದ ಜೊತೆಗೆ ಎರಡು ಸಣ್ಣ ಲಿಂಗಗಳು, ನಂದಿ ವಿಗ್ರಹ, ಶಿವನ ಪೀಠ ದೊರೆತಿದ್ದವು. ಈ ಸ್ಥಳದಲ್ಲಿಯೇ ಹಳೆಯ ಕಲ್ಲು, ಇಟ್ಟಿಗೆ ಸಿಕ್ಕಿದ್ದವು.
ಈ ದೇವರ ವಿಗ್ರಹ ದೊರೆತ ಸ್ಥಳದಲ್ಲಿ ಗುಡ್ಲೆಕುಂಟೆ ಎಂಬ ಗ್ರಾಮವಿತ್ತು ಎಂಬು ಗ್ರಾಮಸ್ಥರು ಹೇಳುತ್ತಾರೆ. ಹಿಂದೆ ಈ ಜಾಗದಲ್ಲಿ ಕಾಡುಗೊಲ್ಲರು ವಾಸಿಸುತ್ತಿದ್ದು, ಗೊಲ್ಲರಹಟ್ಟಿ ಇದಾಗಿತ್ತು. ಈ ಗುಡ್ಲೆಕುಂಟೆ ಎಂಬ ಗ್ರಾಮ ಹಿರಿಯೂರು ತಾಲೂಕಿನ ಹೂವಿನಹೊಳೆ ಗ್ರಾಮದ ಸುಮಾರು ಎರಡು ಮೂರು ಕಿ. ಮೀ. ದೂರದಲ್ಲಿ ಇತ್ತು.












Click it and Unblock the Notifications