ಚಿತ್ರದುರ್ಗದಿಂದ ವಿಧಾನಸಭೆ ಚುನಾವಣೆಗೆ ಶಶಿಕುಮಾರ್ ಸ್ಪರ್ಧೆ
ಚಿತ್ರದುರ್ಗ, ನವೆಂಬರ್ 29 : ಮಾಜಿ ಸಂಸದ, ನಟ ಶಶಿಕುಮಾರ್ 2018ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧರಾಗುತ್ತಿದ್ದಾರೆ. 'ಯಾವ ಪಕ್ಷದಿಂದ ಸ್ಪರ್ಧಿಸಬೇಕು' ಎಂದು ಇನ್ನೂ ತೀರ್ಮಾನಿಸಿಲ್ಲ ಎಂದು ಅವರು ಹೇಳಿದ್ದಾರೆ.
ಚಳ್ಳಕೆರೆ ಪಟ್ಟಣದಲ್ಲಿ ಮಂಗಳವಾರ ಮಾತನಾಡಿದ ಶಶಿಕುಮಾರ್, 'ಮುಂದಿನ ವಿಧಾನಸಭೆ ಚುನಾವಣೆಗೆ ಚಿತ್ರದುರ್ಗ ಜಿಲ್ಲೆಯ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎಂದು ತೀರ್ಮಾನ ಕೈಗೊಂಡಿಲ್ಲ' ಎಂದು ಹೇಳಿದರು.
'ಸದ್ಯ, ಕುರುಕ್ಷೇತ್ರ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದೇನೆ. ಒಂದು ತಿಂಗಳಿನಲ್ಲಿ ಚಿತ್ರೀಕರಣ ಮುಗಿಯಲಿದೆ. ನಂತರ ಕ್ಷೇತ್ರ ಪ್ರವಾಸ ಕೈಗೊಂಡು, ಚುನಾವಣೆಗೆ ನಿಲ್ಲುವ ಕುರಿತು ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ' ಎಂದು ಶಶಿಕುಮಾರ್ ತಿಳಿಸಿದರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಜೆಡಿಯು ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದ ಶಶಿಕುಮಾರ್ 13ನೇ ಲೋಕಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು. 2004ರಲ್ಲಿ ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ. ಆದ್ದರಿಂದ, ಕಾಂಗ್ರೆಸ್ ಸೇರಿದ್ದರು.
2008ರ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಚಳ್ಳಕೆರೆ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 42,302 ಮತಗಳನ್ನು ಪಡೆದು ಬಿಜೆಪಿಯ ತಿಪ್ಪೇಸ್ವಾಮಿ ಅವರ ವಿರುದ್ಧ ಸೋಲು ಕಂಡಿದ್ದರು. ನ.28ರಂದು ಬಿಜೆಪಿ ನಾಯಕರೊಂದಿಗೆ ಚಳ್ಳಕೆರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ನಿರ್ಮಾಪಕ ಮುನಿರತ್ನ ಅವರು ಬಹುಕೋಟಿ ವೆಚ್ಚದಲ್ಲಿ ಕುರುಕ್ಷೇತ್ರ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಬಹುತಾರಾಗಣದ ಚಿತ್ರದಲ್ಲಿ ಶಶಿಕುಮಾರ್ ಧರ್ಮರಾಯನ ಪಾತ್ರದಲ್ಲಿ ನಟಿಸುತ್ತಿದ್ದಾರೆ.











Click it and Unblock the Notifications