ಕೋಟೆನಾಡಿನಲ್ಲಿ ಪುನಃ ಹೊರಗಿನವರಿಗೆ ಟಿಕೆಟ್ ನೀಡಿದ ಬಿಜೆಪಿ!
ಚಿತ್ರದುರ್ಗ, ಮಾರ್ಚ್ 22:ಕೋಟೆ ನಾಡು ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದಿಂದ ಮಾಜಿ ಸಮಾಜ ಕಲ್ಯಾಣ ಸಚಿವ ಎ. ನಾರಾಯಣ ಸ್ವಾಮಿ ಟಿಕೆಟ್ ಪಡೆಯುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
ವಾಸ್ತವವಾಗಿ ಚಿತ್ರದುರ್ಗ ಪರಿಶಿಷ್ಟಜಾತಿಯ ಮೀಸಲು ಕ್ಷೇತ್ರ. ಈ ಬಾರಿ ಮಾಜಿ ಸಚಿವ ಎ.ನಾರಾಯಣಸ್ವಾಮಿ, ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ, ಮಾನಪ್ಪ ವಜ್ಜಲ್ ಅವರ ಹೆಸರುಗಳು ಕೇಳಿ ಬಂದಿದ್ದವು. ಆದರೆ ಕೊನೆ ಗಳಿಗೆಯಲ್ಲಿ ಆನೇಕಲ್ ಎ. ನಾರಾಯಣ ಸ್ವಾಮಿಗೆ ಬಿಜೆಪಿ ಮಣೆ ಹಾಕುವಲ್ಲಿ ಯಶಸ್ವಿಯಾಗಿದೆ.
ಅದರಲ್ಲೂ ಪರಿಶಿಷ್ಟಜಾತಿ ಎಡಗೈ ಗುಂಪಿಗೆ ಸೇರಿದ ನಾರಾಯಣಸ್ವಾಮಿ ಅವರ ಹೆಸರೇ ಮೊದಲಿನಿಂದಲೂ ಮುಂಚೂಣಿಯಲ್ಲಿತ್ತು. ಅಲ್ಲಿಗೆ ಈ ಬಾರಿಯೂ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಹೊರಗಿನವರಿಗೆ ಬಿಜೆಪಿ ಮಣೆ ಹಾಕಿದಂತಾಗಿದೆ.

ಕಳೆದ ಎರಡು ದಿನಗಳ ಹಿಂದೆಯಷ್ಟೇ, ಬೋವಿ ಸಮಾಜಕ್ಕೆ ಟಿಕೆಟ್ ನೀಡಿಲ್ಲ ಅಂತ ಚಿತ್ರದುರ್ಗದ ಇಬ್ಬರು ಬಿಜೆಪಿ ಶಾಸಕರು ರಾಜೀನಾಮೆ ಕೊಡುವುದಾಗಿ ತಿಳಿಸಿದ್ದರು. "ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತ ಹೊಂದಿರುವ ಬೋವಿ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ. ಆದ್ದರಿಂದ ನಾನು ರಾಜೀನಾಮೆ ಕೊಡಲು ಸಿದ್ಧ" ಎಂದು ಬಿಜೆಪಿ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಹೇಳಿದ್ದರು.
ಕರ್ನಾಟಕದ ಯಾವ ಸಂಸದ ಎಷ್ಟು ವಿದ್ಯಾಭ್ಯಾಸ ಮಾಡಿದ್ದಾರೆ?
ಆದರೆ ಈಗ ಚಿತ್ರದುರ್ಗದಿಂದ ಎಡಗೈ ಗುಂಪಿಗೆ ಸೇರಿದವರನ್ನೇ ಕಣಕ್ಕಿಳಿಸುವುದರಿಂದ ಸುತ್ತಲಿನ ಲೋಕಸಭಾ ಕ್ಷೇತ್ರಗಳಾದ ಬಳ್ಳಾರಿ, ದಾವಣಗೆರೆ ಮತ್ತು ತುಮಕೂರಿನಲ್ಲೂ ಪಕ್ಷದ ಅಭ್ಯರ್ಥಿಗಳ ಗಲುವಿಗಾಗಿ ಅನುಕೂಲವಾಗಬಹುದು ಅಂತ ನಾರಾಯಣ ಅವರಿಗೆ ಟಿಕೆಟ್ ನೀಡಿರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಅಂದಹಾಗೆ ಸರಳ ಜೀವಿ , ಅಭಿವೃದ್ಧಿಯ ಹರಿಕಾರ ಎನ್ನುವ ಹೆಸರು ಪಡೆದಿರುವ ಮೈತ್ರಿ ಸರ್ಕಾರ ಅಭ್ಯರ್ಥಿ, ಹಾಲಿ ಸಂಸದ ಬಿ.ಎನ್. ಚಂದ್ರಪ್ಪನವರ ಎದುರು ನಾರಾಯಣಸ್ವಾಮಿ ಅವರು ಗೆಲುವು ಸಾಧ್ಯನಾ ಎಂಬುದನ್ನು ಕಾದು ನೋಡಬೇಕಾಗಿದೆ.
ಜೊತೆಗೆ ಚಂದ್ರಪ್ಪನವರು ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ, ಶಿರಾ ಕ್ಷೇತ್ರದ ಜೆಡಿಎಸ್ ಶಾಸಕ ಸತ್ಯನಾರಾಯಣನವರನ್ನು ಭೇಟಿ ಮಾಡಿ ಮಾತುಕತೆ ನೆಡೆಸಿ ಗೆಲುವಿಗೆ ಸಹಕರಿಸುವಂತೆ ಕೇಳಿರುವುದುನ್ನು ನಾವಿಲ್ಲಿ ಗಮನಿಸಬಹುದು.












Click it and Unblock the Notifications