ಚಿತ್ರದುರ್ಗದಲ್ಲಿ ಕೊರೊನಾಗೆ ಎರಡನೇ ಸಾವು; ಜಿಲ್ಲಾಡಳಿತದ ವಿರುದ್ಧ ತಿರುಗಿಬಿದ್ದ ಜನ
ಚಿತ್ರದುರ್ಗ, ಜುಲೈ 14: ಚಿತ್ರದುರ್ಗ ಜಿಲ್ಲೆಯಲ್ಲಿ ಕೊರೊನಾ ವೈರಸ್ ನಿಂದಾಗಿ ಎರಡನೇ ವ್ಯಕ್ತಿ ಮೃತಪಟ್ಟಿದ್ದಾರೆ. ಜಿಲ್ಲೆಯ ಚಳ್ಳಕೆರೆ ತ್ಯಾಗರಾಜನಗರದ ನಿವಾಸಿ 68 ವರ್ಷದ ವ್ಯಕ್ತಿ ಇಂದು ಕೊರೊನಾಗೆ ಬಲಿಯಾಗಿದ್ದಾರೆ.
ಜುಲೈ 4ರಂದು ಕೋವಿಡ್ ಟೆಸ್ಟ್ ನಲ್ಲಿ ಇವರದ್ದು ಪಾಸಿಟಿವ್ ಎಂದು ವರದಿ ಬಂದಿತ್ತು. ನಂತರ ಚಿತ್ರದುರ್ಗದ ಕೋವಿಡ್19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಿಪಿ ಮತ್ತು ಮಧುಮೇಹ ರೋಗದಿಂದ ಬಳಲುತ್ತಿದ್ದ ಇವರು ಇಂದು ಮೃತಪಟ್ಟಿದ್ದಾರೆ.
ಜಿಲ್ಲಾಡಳಿತದ ನಿರ್ಲಕ್ಷ್ಯದ ವಿರುದ್ಧ ತಿರುಗಿಬಿದ್ದ ಜನ: ಚಿತ್ರದುರ್ಗ ಜಿಲ್ಲೆಯಲ್ಲಿ ಸೋಂಕಿತರನ್ನು ಆಸ್ಪತ್ರೆಗೆ ಕರೆತಂದು ಕೋವಿಡ್ ಟೆಸ್ಟ್ ಮಾಡೋರೆ ಇಲ್ಲ ಎಂದು ಜಿಲ್ಲಾಡಳಿತದ ನಿರ್ಲಕ್ಷ್ಯದ ವಿರುದ್ಧ ಇಂದು ಜನರು ತಿರುಗಿಬಿದ್ದಿದ್ದಾರೆ. ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚಿ ಕೆಲವು ವ್ಯಕ್ತಿಗಳನ್ನು ಕರೆದುಕೊಂಡು ಬರುವ ಆಶಾ ಕಾರ್ಯಕರ್ತೆಯರ ಶ್ರಮ ವ್ಯರ್ಥವಾಗುತ್ತದೆ. ಕೋವಿಡ್ ಟೆಸ್ಟ್ ಮಾಡಲು ಆರೋಗ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪರೀಕ್ಷೆ ಮಾಡಲು ಐದಾರು ದಿನ ಆಗುತ್ತೆ ಅಂತಾರೆ, ಅಲ್ಲಿಯವರೆಗೆ ನಾವು ಎಲ್ಲಿರಬೇಕು? ಎಂದು ಪ್ರಶ್ನಿಸಿದ್ದಾರೆ. ಸ್ವಯಂಪ್ರೇರಿತರಾಗಿ ಟೆಸ್ಟ್ ಮಾಡಿಸಲು ಬಂದರೆ ಕೇಳುವವರೇ ಯಾರಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಕೊರೊನಾ ಟೆಸ್ಟ್ ಗೆ ಬಂದು ಐವತ್ತಕ್ಕೂ ಹೆಚ್ಚು ಮಂದಿ ವಾಪಸ್ ಹೋಗಿರುವುದು ತಿಳಿದುಬಂದಿದೆ. ಸೋಂಕಿತರ ಸಂಪರ್ಕದಲ್ಲಿದ್ದ ನಮಗೆ ಸೋಂಕು ತಗುಲಿದ್ದರೆ ಸಮುದಾಯಕ್ಕೆ ಹರಡುವ ಸಾಧ್ಯತೆ ಹೆಚ್ಚಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.












Click it and Unblock the Notifications