ಚಿಕ್ಕಮಗಳೂರು; ಯಶಸ್ವಿ ಕಾರ್ಯಾಚರಣೆ, ಪುಂಡಾನೆ ಸೆರೆ
ಚಿಕ್ಕಮಗಳೂರು, ಏಪ್ರಿಲ್ 10; ಅರಣ್ಯಾಧಿಕಾರಿಗಳು ಹಾಗೂ ರೈತರ ನಿದ್ದೆಗೆಡಿಸಿದ್ದ ಕಾಡಾನೆ ಸೆರೆ ಹಿಡಿಯುವಲ್ಲಿ ಚಿಕ್ಕಮಗಳೂರು ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ. ಆನೆ ಸೆರೆ ಹಿಡಿದ ಬಳಿಕ ರೈತರು ಸಹ ನಿಟ್ಟುಸಿರು ಬಿಟ್ಟಿದ್ದಾರೆ.
ಕಳೆದು ಎರಡು-ಮೂರು ತಿಂಗಳಿಂದ ಚಿಕ್ಕಮಗಳೂರು ತಾಲೂಕಿನ ಬೀಕನಹಳ್ಳಿ-ಹಂಪಾಪುರ, ಕೆಂಪನಹಳ್ಳಿ, ಚಂದ್ರಕಟ್ಟೆ, ಐನಳ್ಳಿ ಸೇರಿದಂತೆ ಸುತ್ತಮುತ್ತಲಿನ ರೈತರಿಗೆ ಕಾಡಾನೆ ಭಾರೀ ಕಾಟ ಕೊಡುತ್ತಿತ್ತು.
ರೈತರು ಕಣ್ಣುಮುಚ್ಚಿ ನಿದ್ದೆ ಮಾಡುವಂತಿರಲಿಲ್ಲ. ಹೊಲಗದ್ದೆಗಳಿಗೆ ಹೋಗುವಂತಿರಲಿಲ್ಲ. ಸ್ಥಳೀಯರು, ಅರಣ್ಯ ಇಲಾಖೆ ಅಧಿಕಾರಿಗಳು ಎಷ್ಟು ಹರಸಾಹಸಪಟ್ಟರೂ ಒಂದು ದಿನ ಕಣ್ಮರೆಯಾಗಿ ಮತ್ತೆ ಮರುದಿನ ಅದೇ ಜಾಗದಲ್ಲಿ ಆನೆ ಪ್ರತ್ಯಕ್ಷವಾಗುತ್ತಿತ್ತು.

ರೈತರ ಜೊತೆ ಅಧಿಕಾರಿಗಳು ಕೂಡ ಕಾಡಾನೆಯ ಆರ್ಭಟಕ್ಕೆ ರೋಸಿ ಹೋಗಿದ್ದರು. ಅದಕ್ಕಾಗಿ ಅಧಿಕಾರಿಗಳು ಕಾಡಾನೆ ಸೆರೆಹಿಡಿಯುವ ಕಾರ್ಯಾಚರಣೆ ಆರಂಭಿಸಿದ್ದರು. ನಾಗರಹೊಳೆಯಿಂದ ಮೈಸೂರು ದಸರಾ ಅಂಬಾರಿ ಹೊರುವ ಭೀಮಾ, ಅರ್ಜುನನ್ನು ಕಾರ್ಯಾಚರಣೆಗೆ ಕರೆಸಿದ್ದರು.
ಕಾಡಿನ ಪುಂಡನ ಎದುರು ಭೀಮಾ, ಅರ್ಜುನನ ಆಟ ನಡೆಯಲಿಲ್ಲ. ಲಾರಿ ಇಳಿದ ಇಬ್ಬರು ಮಾವುತ, ಅಧಿಕಾರಿಗಳ ಜೊತೆ ಕಾಡಿಗೆ ಲಗ್ಗೆ ಇಟ್ಟಿದ್ದರು. ಆದರೆ ಆ ಪುಂಡ ಕಾಡಾನೆ ಬಂದು ಭೀಮಾ, ಅರ್ಜುನರ ಜೊತೆಯೇ ಒಂದು ರಾತ್ರಿ ಕಳೆದು ಹೋಗಿದೆ.
ಹಾಗಾಗಿ, ಅರಣ್ಯ ಅಧಿಕಾರಿಗಳು ಸಕ್ರೇಬೈಲು ಆನೆ ಬಿಡಾರದಿಂದ ಸಾಗರ್, ಪಾಲು, ಭಾನುಮತಿಯೆಂಬ ಮೂರು ಆನೆ ಕರೆಸಿ ಈ ಪುಂಡಾನೆ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಾಡಿನಾದ್ಯಂತ ಹುಡುಕಾಟ ನಡೆಡುತ್ತಿದ್ದ ದಸರಾ ಆನೆಗಳಿಗೂ ಚಳ್ಳೆಹಣ್ಣು ತಿನ್ನಿಸಿದ್ದ ಒಂಟಿ ಸಲಗ ಸೆರೆ ಹಿಡಿಯುವುದು ಅಧಿಕಾರಿಗಳಿಗೆ ಸವಾಲು ಆಗಿತ್ತು.
ಇದಕ್ಕಾಗಿ ಸಕ್ರೇಬೈಲು ಆನೆ ಶಿಬಿರದಿಂದ ಮೂವರು ಆನೆ ಕರೆಸಲಾಗಿತ್ತು. ಒಂದು ವಾರಗಳ ಕಾಲ ನಡೆದ ಈ ಕಣ್ಣಾಮುಚ್ಚಾಲೆ ಆಟ ಕೊನೆಗೂ ಅಂತ್ಯಗೊಂಡಿದೆ. ರೈತರಿಗೆ ರೋದನೆ ಕೊಟ್ಟಿದ್ದ ಕಾಡಾನೆ ಸೆರೆಯಾಗಿದ್ದು ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
ಕಾಡಾನೆ ಸೆರೆ ಸಿಕ್ಕಿರುವುದರಿಂದ ಹಂಪಾಪುರ, ಬೀಕನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದೊಂದು ವರ್ಷದಿಂದ ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸಪಡುತ್ತಿದ್ದ ರೈತರು ಇನ್ನಾದರೂ ನೆಮ್ಮದಿಯಾಗಿ ಕೃಷಿ ಮಾಡಬಹುದು ಎಂದು ಸಂತಸಗೊಂಡಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ದಸರಾ ಆನೆಗಳಿಗೂ ಚಳ್ಳೆಹಣ್ಣು ತಿನ್ನಿಸಿದ ಪುಂಡಾನೆ ಸಾಕಾನೆಗಳ ಸಂಘಟಿತ ಹೋರಾಟದಿಂದ ಸೆರೆಯಾಗಿದೆ. ಕಾಡಾನೆ ಕಾಫಿನಾಡ ಅರಣ್ಯದಿಂದ ಬಂಡೀಪುರ ಕಾಡಿನತ್ತ ಹೆಜ್ಜೆ ಹಾಕಿದರೆ ರೈತರು ನೆಮ್ಮದಿಯಾಗಿ ಹೊಲಗದ್ದೆ, ತೋಟಗಳತ್ತ ಹೆಜ್ಜೆ ಹಾಕಿದ್ದಾರೆ.
ಕಾಡಾನೆ ಸೆರೆ ಬಗ್ಗೆಸ್ಥಳೀಯರು ಮಾತನಾಡಿ, ಈ ಕಾಡಾನೆ ಸಾಕಷ್ಟು ಬೆಳೆ ನಾಶ ಮಾಡಿತ್ತು, ನಮ್ಮ ನೆಮ್ಮದಿ ಕಸಿದುಕೊಂಡಿತ್ತು. ಸದ್ಯ ಕಾಡಾನೆ ಸೆರೆಯಿಂದ ನಾವು ನಿಟ್ಟುಸಿರು ಬಿಟ್ಟಿದ್ದೇವೆ. ಅರಣ್ಯಾಧಿಕಾರಿಗಳಿಗೂ ಧನ್ಯವಾದ ತಿಳಿಸುತ್ತೇವೆ ಎಂದರು.












Click it and Unblock the Notifications