ಬಯಲುಸೀಮೆಯ ರೈತರ ಮೊಗದಲ್ಲಿ ಸಂತಸ: ಕಾರಣವೇನು ಗೊತ್ತಾ?
ಚಿಕ್ಕಮಗಳೂರು, ಅಕ್ಟೋಬರ್.07 : ಬಯಲುಸೀಮೆ ಜಿಲ್ಲೆಗಳಾದ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಿಗೆ ನೀರೊದಗಿಸುವ ಭದ್ರಾ ಮೇಲ್ದಂಡೆ ಯೋಜನೆಯ ಸುರಂಗ ನಿರ್ಮಾಣ ಕಾರ್ಯ ಬಹುತೇಕ ಮುಗಿದಿದೆ.
ಕಳೆದ 10 ವರ್ಷಗಳಿಂದ ನಡೆಯುತ್ತಿದ್ದ ಸುರಂಗ ಕಾಮಗಾರಿ ಮುಗಿದಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಬಯಲುಸೀಮೆಯ ಭಾಗದ ರೈತರ ಮೊಗದಲ್ಲಿ ಸಂತಸ ಮೂಡಿದ್ದು, ರಾಜ್ಯದ ಎರಡನೇ ಅತಿದೊಡ್ಡ ಸುರಂಗ ಎಂಬ ಖ್ಯಾತಿಗೂ ಇದು ಭಾಜನವಾಗಿದೆ.
ಎಲ್ಲಾ ಯೋಜನೆ ಪೂರ್ಣಗೊಳ್ಳಲು 1 ಲಕ್ಷ ಕೋಟಿ ಬೇಕು: ಎಂಬಿ ಪಾಟೀಲ್
ಹೌದು, ಬಯಲುಸೀಮೆ ಜಿಲ್ಲೆಗಳಾದ ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಿಗೆ ನೀರು ಕಲ್ಪಿಸುವ ಉದ್ದೇಶದಿಂದ ಪ್ರಾರಂಭವಾದ ಭದ್ರಾ ಮೇಲ್ದಂಡೆ ಯೋಜನೆಯ ಪ್ರಮುಖ ಭಾಗವಾದ ಸುರಂಗ ಮಾರ್ಗ ಕಾಮಗಾರಿ ಪೂರ್ಣಗೊಂಡಿದೆ.
ಬರೋಬ್ಬರಿ 7.39 ಕಿಲೋ ಮೀಟರ್ ಉದ್ದವಿರುವ ಟನಲ್ ಅನ್ನು ಭೂಮಿಯ ಮೇಲ್ಪದರದಿಂದ 40 ಮೀಟರ್ ಆಳದಲ್ಲಿ ಕೊರೆಯಲಾಗಿದೆ. ಸಾಂಪ್ರದಾಯಿಕ ವಿಧಾನದ ಬದಲಿಗೆ ನ್ಯೂ ಆಸ್ಟ್ರೀಯನ್ ಟನಲಿಂಗ್ ಮೆತೆಡ್ ಉಪಯೋಗಿಸಿ ಈ ಕಾಮಗಾರಿ ಮುಗಿಸಲಾಗಿದೆ. ಮುಂದೆ ಓದಿ...
ರೈತರಿಗೆ ಸಂತಸ
ಕಳೆದ ಹತ್ತು ವರ್ಷಗಳಿಂದ ಭದ್ರಾ ಮೇಲ್ದಂಡೆ ಕಾಮಗಾರಿ ನಡೆಯುತ್ತಿದೆ. ಅದ್ರಲ್ಲೂ ಕಳೆದ ಐದಾರು ವರ್ಷಗಳಿಂದಲೂ ಸುರಂಗದ ಕೆಲಸ ಪ್ರಮುಖವಾಗಿ ನಡೆಯುತ್ತಿದ್ದು, 223.98 ಕೋಟಿ ರೂಪಾಯಿ ವೆಚ್ಚದಲ್ಲಿ ಸುರಂಗ ಮಾರ್ಗ ಸಂಪನ್ನಗೊಂಡಿದೆ.
ಇದೊಂದು ಸುರಂಗದ ಕಾರಣಕ್ಕೆ ನೀರು ಹರಿಯುವುದು ತಡವಾಗುತ್ತೆ ಎನ್ನಲಾಗುತ್ತಿತ್ತು. ಆದ್ರೆ, ಈಗ ಸುರಂಗದ ಕಾಮಗಾರಿ ಮುಗಿದಿರುವುದು ರೈತರಲ್ಲಿ ಸಂತಸ ಮೂಡಿಸಿದೆ.
ಯೋಜನೆಯ ಒಟ್ಟಾರೆ ಉದ್ದೇಶ
ಭದ್ರಾ ಜಲಾಶಯದಿಂದ 29 ಟಿಎಂಸಿ ನೀರನ್ನು ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆಗೆ ಹರಿಸುವುದು ಭದ್ರಾ ಮೇಲ್ದಂಡೆ ಯೋಜನೆಯ ಉದ್ದೇಶ. 12,340 ಕೋಟಿ ರೂಪಾಯಿ ಯೋಜನೆಯ ವೆಚ್ಚ.
ಇದರಿಂದ ಒಟ್ಟು 367 ಕೆರೆಗಳಿಗೆ ನೀರು ತುಂಬಿಸುವುದು ಹಾಗೂ ಚಿತ್ರದುರ್ಗದ ಪ್ರಮುಖ ಜಲಾಶಯ ವಾಣಿ ವಿಲಾಸ ಸಾಗರಕ್ಕೆ 2 ಟಿಎಂಸಿ ನೀರು ತುಂಬಿಸುವುದು ಯೋಜನೆಯ ಒಟ್ಟಾರೆ ಉದ್ದೇಶ.
ಭದ್ರಾ ಮೇಲ್ದಂಡೆ ಹಗರಣ : ಬಿಎಸ್ ವೈ ಗೆ ಜಾಮೀನು
ಸದ್ಯದ ಸಮಾಧಾನ
ಇಡೀ ಯೋಜನೆ ಮುಕ್ತಾಯವಾಗಿ ರೈತರ ಜಮೀನುಗಳಿಗೆ ನೀರು ಹರಿಯಲು ಇನ್ನೂ ಐದಾರು ವರ್ಷವಾದರೂ ಬೇಕಾಗುತ್ತೆ. ಆದ್ರೆ, ಸುರಂಗದ ಕಾಮಗಾರಿ ಮುಗಿದಿರುವುದರಿಂದ ಅಲ್ಲಿಂದ ಮುಂದೆ ಹರಿಯುವ ಹಳ್ಳದ ಮೂಲಕ ಚಿತ್ರದುರ್ಗ ಜಿಲ್ಲೆಯ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸಬಹುದು ಎನ್ನುವುದು ಸದ್ಯದ ಸಮಾಧಾನ.
ಯಡ್ಡಿಯತ್ತ ಮತ್ತೆ ಭದ್ರಾ ನೀರು ಹರಿಸಿದ ದತ್ತಾ
ರೈತರ ಆಗ್ರಹ
ಒಟ್ಟಾರೆ ಬರದ ಬೇಗೆಯಲ್ಲಿ ಬೆಂದು ಹೋಗಿರುವ ಬಯಲು ಸೀಮೆಯ ಜನರಿಗೆ ಭದ್ರಾ ಮೇಲ್ದಂಡೆ ಆಶಾ ಗೋಪುರವಾಗಿ ಕಾಣಿಸುತ್ತಿದೆ. ಎಲ್ಲ ರಾಜಕಾರಣಿಗಳು ಭದ್ರಾ ಮೇಲ್ದಂಡೆಯನ್ನು ತೋರಿಸಿಕೊಂಡೇ ಓಡಾಡುತ್ತಿದ್ದಾರೆ.
ಒಂದೊಂದಾಗಿ ಶುಭ ಸುದ್ದಿಗಳು ಕೇಳಿ ಬರುತ್ತಿದ್ದು, ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸುವುದಷ್ಟೇ ಮುಖ್ಯವಾಗದೆ ಆದಷ್ಟು ಬೇಗ ಜಿಲ್ಲೆಯ ಕೆರೆ, ಜಮೀನುಗಳಿಗೆ ನೀರು ಹರಿಸುವ ಕೆಲಸವಾಗಲಿ ಎನ್ನುವುದು ರೈತರ ಆಗ್ರಹ.
ಏನಾಗುತ್ತಿದೆ?:ದಕ್ಷಿಣ ಕನ್ನಡ ಮಾತ್ರವಲ್ಲ, ಮಲೆನಾಡಿನ ಪಂಚ ನದಿಗಳು ಬತ್ತುತ್ತಿವೆ!