ಚಿಕ್ಕಮಗಳೂರು; ವಾರಾಂತ್ಯ ಈ ಪ್ರವಾಸಿ ತಾಣಗಳಿಗೆ ಪ್ರವೇಶವಿಲ್ಲ
ಚಿಕ್ಕಮಗಳೂರು, ಡಿಸೆಂಬರ್ 13; ಚಿಕ್ಕಮಗಳೂರು ಜಿಲ್ಲಾಡಳಿತ ಕೆಲವು ಪ್ರವಾಸಿ ತಾಣಗಳಿಗೆ ವಾರಾಂತ್ಯದಲ್ಲಿ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಿದೆ. ಈ ಆದೇಶ ಡಿಸೆಂಬರ್ 16 ರ ಬೆಳಗ್ಗೆ 6 ಗಂಟೆಯಿಂದ ಡಿಸೆಂಬರ್ 20ರ ಬೆಳಗ್ಗೆ 6 ಗಂಟೆಯ ತನಕ ಜಾರಿಯಲ್ಲಿರುತ್ತದೆ.
ಚಿಕ್ಕಮಗಳೂರು ಜಿಲ್ಲಾಡಳಿತ ಸೋಮವಾರ ಈ ಕುರಿತು ಆದೇಶ ಹೊರಡಿಸಿದೆ. ಡಿಸೆಂಬರ್ 16 ರಿಂದ 20ರ ತನಕ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರ, ಹೊನ್ನಮ್ಮನಹಳ್ಳ ಮತ್ತು ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಂಸ್ಥೆ ಐ.ಡಿ ಪೀಠ ಭಾಗಗಳಿಗೆ ಪ್ರವಾಸಿಗರು/ ಯಾತ್ರಾರ್ಥಿಗಳು ಭೇಟಿ ನೀಡುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ಹೇಳಿದೆ.
ಆದರೆ ಸದರಿ ದಿನಗಳಂದು ಪ್ರವಾಸಿಗರು ಇತರೆ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಯಾವುದೇ ನಿರ್ಬಂಧ ಇರುವುದಿಲ್ಲ. ಹೋಟೆಲ್, ಹೋಂ ಸ್ಟೇ ಮತ್ತು ರೆಸಾರ್ಟ್ ಗಳಲ್ಲಿ ಈಗಾಗಲೇ ವಾಸ್ತವ್ಯಕ್ಕೆ ಕಾಯ್ದಿರಿಸಿಕೊಂಡಿದ್ದಲ್ಲಿ ವಾಸ್ತವ್ಯ ಮಾಡಲು ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ನಿರ್ಬಂಧ ಏಕೆ?; ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಸಂಸ್ಥೆಯಲ್ಲಿ 17/12/2021 ರಿಂದ 19/12/2021ರ ತನಕ ದತ್ತ ಜಯಂತಿ ಕಾರ್ಯಕ್ರಮ ಇರುವ ಕಾರಣ ಡಿಸೆಂಬರ್ 16ರ ಬೆಳಗ್ಗೆ 6 ಗಂಟೆಯಿಂದ ಡಿಸೆಂಬರ್ 20ರ ಬೆಳಗ್ಗೆ 6 ಗಂಟೆಯ ತನಕ ಪ್ರವಾಸಿಗರ ಭೇಟಿಯನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
ದತ್ತ ಮಾಲೆ ಧಾರಣೆ; ಭಜರಂಗದಳ, ವಿಶ್ವ ಹಿಂದೂ ಪರಿಷತ್ ವತಿಯಿಂದ ದತ್ತಜಯಂತಿ ಕಾರ್ಯಕ್ರಮ ಪ್ರತಿವರ್ಷ ನಡೆಯುತ್ತದೆ. ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ನೂರಾರು ದತ್ತಭಕ್ತರು ದತ್ತಮಾಲಾಧಾರಣೆಯನ್ನು ಮಾಡಿದ್ದಾರೆ. ದತ್ತ ಜಯಂತಿ ಸಂದರ್ಭದಲ್ಲಿ ಚಿಕ್ಕಮಗಳೂರಿಗೆ ಆಗಮಿಸುತ್ತಾರೆ.
ಕಳೆದ ಬುಧವಾರ ಚಿಕ್ಕಮಗಳೂರು ನಗರದ ಕಾಮಧೇನು ಗಣಪತಿ ದೇವಸ್ಥಾನದಲ್ಲಿ ನೂರಾರು ದತ್ತಭಕ್ತರು ರಘು ಅವಧಾನಿಗಳ ನೇತೃತ್ವದಲ್ಲಿ ದತ್ತಮೂರ್ತಿಗೆ ಧಾರ್ಮಿಕ ವಿಧಿವಿಧಾನ, ಪೂಜೆ ನೇರವೇರಿಸಿ ದತ್ತಮಾಲಾಧಾರಣೆ ಮಾಡಿದ್ದಾರೆ.
ಭಜರಂಗದಳ ದಕ್ಷಿಣ ಪ್ರಾಂತ ಸಂಚಾಲಕ ರಘು ಸಕಲೇಶಪುರ ಮಾತನಾಡಿ, "ಶುದ್ಧ ಸ್ಕಂದ ಪಂಚಮಿಯಂದು ದತ್ತಜಯಂತಿಯ ವೇಳೆಯಲ್ಲಿಯೇ ಹಿಂದೂ ಅರ್ಚಕರ ನೇಮಕ ಆಗಬೇಕು ಎಂಬ ಶ್ರೇಷ್ಟವಾದ ಸಂಕಲ್ಪದೊಂದಿಗೆ ಇಡೀ ರಾಜ್ಯಾದ್ಯಂತ ಒಂದು ಸಾವಿರಕ್ಕೂ ಹೆಚ್ಚು ಜನರು ದತ್ತಮಾಲಾದಾರಣೆ ಮಾಡಿದ್ದಾರೆ" ಎಂದು ಹೇಳಿದ್ದಾರೆ.
"ಪ್ರತಿ ವರ್ಷದಂತೆ ಈ ಬಾರಿಯೂ ದತ್ತಮಾಲಾಧಾರಣೆ ಮಾಡಿದ್ದು ಜಿಲ್ಲೆಯಾದ್ಯಂತ ಸಾವಿರಕ್ಕೂ ಹೆಚ್ಚು ಜನರು ದತ್ತಮಾಲಾಧಾರಣೆ ಮಾಡಿದ್ದಾರೆ. ಹಿಂದೂಗಳ ಪೀಠ, ಶಕ್ತಿಯ ಪೀಠ ಎಂದು ಹಿರಿಯರ ಹಾದಿಯಲ್ಲಿ ನಾವೆಲ್ಲ ಮಾಲಾಧಾರಣೆ ಮಾಡಿದ್ದು ಶೀಘ್ರದಲ್ಲಿ ದತ್ತಪೀಠ ಹಿಂದುಗಳ ಪೀಠವಾಗುತ್ತದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಿಕ್ಕಮಗಳೂರು ಬಿಜೆಪಿ ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಮಾತನಾಡಿ, "ಪ್ರತಿ ವರ್ಷದಂತೆ ಈ ವರ್ಷವೂ ದತ್ತಜಯಂತಿಗೆ ದಿನಾಂಕ ನಿಗದಿಯಾಗಿದ್ದು ವೈಯುಕ್ತಿಕ ಕಾರಣದಿಂದ ಎರಡು ದಿನ ತಡವಾಗಿ ಮಾಲಾಧಾರಣೆ ಮಾಡುತ್ತೇನೆ. ಈಗಾಗಲೇ ದತ್ತಪೀಠದ ಅರ್ಚಕರ ನೇಮಕಕ್ಕೆ ಸಂಬಂಧಿಸಿದಂತೆ ನ್ಯಾಯಾಲು ಸಕಾರಾತ್ಮಕ ತೀರ್ಪು ನೀಡಿದೆ" ಎಂದರು.
"ಸಂಪುಟ ಉಪ ಸಮಿತಿ ರಚನೆಯಾಗಿದ್ದು ಇದರಿಂದ ಸಾರ್ವಜನಿಕವಾಗಿ ಚರ್ಚೆ ಮಾಡುವುದು ಸರಿಯಲ್ಲ. ನ್ಯಾಯ, ಸತ್ಯ ದತ್ತಪೀಠದ ಪರವಾಗಿದೆ. ಹಿಂದೆ ಇದ್ದ ಸರ್ಕಾರ ಹಿಂದೂ ಭಕ್ತರಿಗೆ ಅನ್ಯಾಯ ಮಾಡುವ ಕೆಲಸವನ್ನು ನ್ಯಾಯಾಲಯಕ್ಕೆ ವ್ಯತಿರಿಕ್ತವಾಗಿ ಮಾಡುತ್ತು. ಆದರೆ ಹೈಕೊರ್ಟ್ ಮತ್ತೆ ನ್ಯಾಯವನ್ನು ಎತ್ತಿ ಹಿಡಿದಿದೆ" ಎಂದು ಹೇಳಿದ್ದಾರೆ.
ದತ್ತ ಜಯಂತಿ ಹಿನ್ನಲೆಯಲ್ಲಿ ಚಿಕ್ಕಮಗಳೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿರುತ್ತದೆ. ದತ್ತ ಜಯಂತಿ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಎಚ್ಚರ ವಹಿಸಿರುತ್ತಾರೆ.












Click it and Unblock the Notifications