ಜೀವ ಉಳಿಸಿದ ವೀರಯೋಧರಿಗೆ ಕಣ್ಣೀರಿನ ವಿದಾಯ
ಚಿಕ್ಕಮಗಳೂರು, ಆಗಸ್ಟ್ 13: ಚಿಕ್ಕಮಗಳೂರಿನಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ತತ್ತರಿಸಿಹೋಗಿದ್ದಾರೆ ಜನ. ಸುತ್ತಲೂ ನೀರು, ಭೂಕುಸಿತ, ಗುಡ್ಡ ಕುಸಿತ... ರಸ್ತೆ ಸಂಚಾರವೂ ಕಡಿತ. ಪ್ರವಾಹಕ್ಕೆ ಸಿಲುಕಿ ಬದುಕುವೆವೋ ಇಲ್ಲವೋ ಎಂದು ಕಣ್ಣೀರಾಗಿದ್ದ ಜನರಿಗೆ ಧೈರ್ಯ ತುಂಬಿ ಅವರಿಗೆ ನೆರವು ನೀಡಿ ಜೀವ ಉಳಿಸಿದ್ದು ಸೇನೆ.
ತಮ್ಮೆಲ್ಲ ಶಕ್ತಿಯನ್ನು ಒಟ್ಟುಗೂಡಿಸಿ ಪ್ರವಾಹದ ನಡುವೆ ಹಗಲು ರಾತ್ರಿ ಎನ್ನದೇ ಜನರ ಸೇವೆ ಮಾಡಿದ ಸೈನ್ಯದ ಉಪಕಾರವನ್ನು ನೆನೆದಿರುವ ಚಿಕ್ಕಮಗಳೂರಿನ ಜನರು ಸೈನಿಕರಿಗೆ ರಾಖಿ ಕಟ್ಟಿ ಬಾಂಧವ್ಯ ಮೆರೆದಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಳೆ ಅಬ್ಬರ ತಗ್ಗಿದ್ದು, ಸೈನಿಕರು ತಮ್ಮ ಕಾರ್ಯಾಚರಣೆ ಮುಗಿದಿದ್ದರಿಂದ ಬೆಂಗಳೂರಿಗೆ ಇಂದು ವಾಪಸ್ಸಾಗುತ್ತಿದ್ದರು. ಈ ಸಮಯದಲ್ಲಿ, ತಮ್ಮ ಜೀವ ಉಳಿಸಿದ ಸೈನಿಕರಿಗೆ ರಾಖಿ ಕಟ್ಟಿ ಕಣ್ಣೀರು ಹಾಕುತ್ತ ಭಾವುಕವಾಗಿ ಬೀಳ್ಕೊಟ್ಟಿದ್ದಾರೆ.

ಕೊಟ್ಟಿಗೆ ಹಾರ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಜನರು, "ನಿಮ್ಮಿಂದ ನಮ್ಮ ಜೀವ ಉಳಿದಿದೆ" ಎಂದು ಪ್ರತಿಯೊಬ್ಬ ಸೈನಿಕರಿಗೂ ರಾಖಿ ಕಟ್ಟಿ, ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗಿ ಸೈನಿಕರನ್ನು ಬೀಳ್ಕೊಟ್ಟಿದ್ದಾರೆ.
ಸೈನಿಕರು ತಾವು ತಂದಿದ್ದ ಹಣ್ಣು, ಬಿಸ್ಕೆಟ್ ಗಳನ್ನು ಸಂತ್ರಸ್ತರಿಗೆ ಹಂಚಿದರು. "ಭಾರತೀಯ ಸೇನೆ ಸದಾ ನಿಮ್ಮ ಜೊತೆ ಇರುತ್ತದೆ. ನೀವು ಯಾವಾಗ ಕರೆದರೂ ನಿಮ್ಮ ಸೇವೆಗೆ ಸಿದ್ಧ" ಎಂದು ಹೇಳಿ ಬೆಂಗಳೂರಿನತ್ತ ಮಿಲಿಟರಿ ಪಡೆ ಹೊರಟಿದೆ.












Click it and Unblock the Notifications