ಚಿಕ್ಕಮಗಳೂರು; ಮಗನ ಸಾವಿನ ಪ್ರತೀಕಾರ, ವೈದ್ಯರ ಹತ್ಯೆ ಯತ್ನ
ಚಿಕ್ಕಮಗಳೂರು, ಜೂನ್ 01; ತರೀಕೆರೆ ಪಟ್ಟಣದಲ್ಲಿ ಖಾಸಗಿ ಆಸ್ಪತ್ರೆ ವೈದ್ಯನ ಹತ್ಯೆಯತ್ನ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪಟ್ಟಣದ ಅಗ್ನಿಶಾಮಕ ಠಾಣೆ ಬಳಿ ಸೋಮವಾರ ಮಾರಣಾಂತಿಕ ಹಲ್ಲೆ ನಡೆದಿತ್ತು.
ಖಾಸಗಿ ಆಸ್ಪತ್ರೆ ವೈದ್ಯ ದೀಪಕ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ವೇಣು, ನಿತಿನ್, ವೆಂಕಟೇಶ್ ಮತ್ತು ಚಂದ್ರಶೇಖರ್ ಎಂದು ಗುರುತಿಸಲಾಗಿದೆ.
ಚಂದ್ರಶೇಖರ್ ಮಗು ಭುವನ್ (9) ಸಾವಿಗೆ ಸೇಡು ತೀರಿಸಿಕೊಳ್ಳಲು ಡಾಕ್ಟರ್ ದೀಪಕ್ ಕೊಲೆಗೆ ಯತ್ನಿಸಲಾಗಿತ್ತು. ಮೇ 29ರಂದು ಬಾಲಕ ಭುವನ್ ಸಾವನ್ನಪ್ಪಿದ್ದ.

ಅಜ್ಜಂಪುರ ತಾಲೂಕಿನ ತಡಗ ಗ್ರಾಮದ ಬಾಲಕ ಭುವನ್ ಜ್ವರದಿಂದ ಬಳಲುತ್ತಿದ್ದ. ವೈದ್ಯ ದೀಪಕ್ ಬಳಿಗೆ ಬಾಲಕನನ್ನು ಕರೆದುಕೊಂಡು ಬರಲಾಗಿತ್ತು. ತರೀಕೆರೆ ಪಟ್ಟಣದಲ್ಲಿ ಬಸವೇಶ್ವರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲಾಗಿತ್ತು.
ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಭುವನ್ ಮೃತಪಟ್ಟಿದ್ದ. ಈ ಹಿನ್ನೆಲೆಯಲ್ಲಿ ಡಾ. ದೀಪಕ್ ಮೇಲೆ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಓವರ್ ಡೋಸ್ ಇಂಜೆಕ್ಷನ್ ನೀಡಿದ ಕಾರಣಕ್ಕೆ ಬಾಲಕ ಸಾವನ್ನಪ್ಪಿದ್ದಾನೆ ಎಂದು ದೀಪಕ್ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದರು.
ಕೆಲಸ ಮುಗಿಸಿ ದೀಪಕ್ ಸೈಕಲ್ನಲ್ಲಿ ಸೋಮವಾರ ಮನೆಗೆ ತೆರಳುವಾಗ ತರೀಕೆರೆ ಪಟ್ಟಣದ ಅಗ್ನಿಶಾಮಕ ಠಾಣೆ ಬಳಿ ಲಾಂಗು, ಮಚ್ಚಿನಿಂದ ಹಲ್ಲ ನಡೆಸಲಾಗಿತ್ತು. ತಲೆಗೂ ಹಲ್ಲೆ ಮಾಡಲಾಗಿತ್ತು.
ದೀಪಕ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಪ್ರಕರಣ ನಡೆದ ಒಂದೇ ದಿನದಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications