ಚಿಕ್ಕಮಗಳೂರು: ರಾತ್ರೋರಾತ್ರಿ ಸ್ವಾಮಿ ವಿವೇಕಾನಂದ ಮೂರ್ತಿ ನೆಲಸಮ
ಚಿಕ್ಕಮಗಳೂರು, ಜೂನ್ 17: ಭಾರತದ ಕೀರ್ತಿಯನ್ನು ವಿಶ್ವಕ್ಕೆ ಸಾರಿದ ಸಂತ ವಿವೇಕಾನಂದರ ವಿರೂಪ ಮೂರ್ತಿಯನ್ನು ರಾತ್ರೋರಾತ್ರಿ ಕೆಡವಿ ಹಾಕಲಾಗಿದೆ. ಕಳೆದ ಐದು ವರ್ಷದ ಹಿಂದೆ ಚಿಕ್ಕಮಗಳೂರಿನ ದಂಟರಮಕ್ಕಿ ಕೆರೆಯಲ್ಲಿ ಸ್ವಾಮಿ ವಿವೇಕಾನಂದ ಮೂರ್ತಿ ಸ್ಥಾಪನೆಯಾಗಿತ್ತು. ಅಂದಿನ ನಗರಸಭೆ ಅಧ್ಯಕ್ಷರಾಗಿದ್ದ ಮುತ್ತಯ್ಯ ನೇತೃತ್ವದಲ್ಲಿ ಮೂರ್ತಿ ಸ್ಥಾಪನೆಗೆ ಕಾರ್ಯಾರಂಭ ಮಾಡಲಾಗಿತ್ತು. ಅವರೇ ಹೇಳುವಂತೆ ಜನರ ಬಳಿ ಹಣ ಸಂಗ್ರಹಿಸಿ ಅಂದಾಜು 30 ಲಕ್ಷ ರೂ. ವೆಚ್ಚದಲ್ಲಿ ವಿವೇಕಾನಂದ ಮೂರ್ತಿ ಸ್ಥಾಪನೆಗೆ ಮುಂದಾಗಿತ್ತು.
Recommended Video
ಗಬ್ಬು ನಾರುವ ಕೆರೆಯ ಮಧ್ಯದಲ್ಲಿ ದ್ವೀಪ ನಿರ್ಮಾಣ ಮಾಡಿ ವಿವೇಕಾನಂದ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ಬಿಜೆಪಿ ಮುಖಂಡ ಸಿ.ಟಿ ರವಿ ಆಪ್ತ ಮುತ್ತಯ್ಯ ನೇತೃತ್ವದಲ್ಲಿ ಕಾರ್ಯಯೋಜನೆ ರೂಪಿಸಲಾಯಿತು. ಈ ವೇಳೆ ಮೂರ್ತಿ ನಿರ್ಮಾಣಕ್ಕೆ ಚಿಕ್ಕಮಗಳೂರಿನ ಶಾಂತಿನಿಕೇತನ ಕಲಾ ಮಹಾವಿದ್ಯಾಲಯಕ್ಕೆ ಸಂಪರ್ಕ ಮಾಡಲಾಯಿತು. ನಂತರ ಅದನ್ನು ಬಿಟ್ಟು ಶಿವಮೊಗ್ಗ ಮೂಲದವರಿಗೆ ಮೂರ್ತಿ ನಿರ್ಮಾಣದ ಜವಾಬ್ದಾರಿ ನೀಡಲಾಯಿತು. ಅದು ವಿರೋಪಗೊಂಡ ಕಾರಣ ಸಾಕಷ್ಟು ಪ್ರತಿಭಟನೆಗಳು ನಡೆದವು. ಇದಾದ ಬಳಿಕ ಚಿಕ್ಕಮಗಳೂರಿನ ಏಕಾಂತರಾಮು ಎಂಬುವರಿಗೆ ನೀಡಲಾಯಿತು. ಆಗಲೂ ವಿರೂಪಗೊಂಡ ವಿವೇಕಾನಂದ ಮೂರ್ತಿಗೆ ರೂಪಕೊಡಲು ಸಾಧ್ಯವಾಗಲಿಲ್ಲ.

ವಿರೋಪಗೊಂಡ ವಿವೇಕಾನಂದರ ಮೂರ್ತಿ
ನಂತರ ಬೆಂಗಳೂರು ಮೂಲದ ಕಲಾವಿದ ಮಧುಸೂದನ್ ಎಂಬುವರಿಗೆ ಸರಿಪಡಿಸಲು ಕಾಮಗಾರಿ ಕೊಡಲಾಯಿತಾದರೂ ಅದು ಸಾಧ್ಯವಾಗಲಿಲ್ಲ. ಇದೇ ವಿರೂಪಗೊಂಡ ಮೂರ್ತಿಯನ್ನು ನೋಡಿದ ಜನರು ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಮಾಡಲು ಪ್ರಾರಂಭಿಸಿದ್ದು, ಈ ಚರ್ಚೆ ಬಹಳಷ್ಟು ವೈರಲ್ ಅಯಿತು. ಕೂಡಲೇ ಎಚ್ಚೆತ್ತುಕೊಂಡ ಅವರು ನಿನ್ನೆ ರಾತ್ರೋರಾತ್ರಿ ವಿವೇಕಾನಂದ ಮೂರ್ತಿಯನ್ನು ತೆರವುಗೊಳಿಸಿದ್ದಾರೆ. ಈಗ ಜನಾಕ್ರೋಶಕ್ಕೆ ಕಾರಣವಾಗಿದೆ.

ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮೂರ್ತಿ ಸ್ಥಾಪನೆ
ಸಾರ್ವಜನಿಕ ಕೆರೆಯಲ್ಲಿ ಸಣ್ಣ ನೀರಾವರಿ ಇಲಾಖೆ ಸೇರಿದಂತೆ ಜಿಲ್ಲಾಡಳಿತದ ಅನುಮತಿಯನ್ನು ಪಡೆಯದೇ ನಗರಸಭೆ ಅಧ್ಯಕ್ಷರಾಗಿದ್ದ ಬಿಜೆಪಿ ಮುಖಂಡ ಮುತ್ತಯ್ಯ, ಇನ್ನು ಕೆಲ ಬಿಜೆಪಿ ಮುಖಂಡರು ದಂಟರಮಕ್ಕಿ ಕೆರೆಯಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮೂರ್ತಿ ಸ್ಥಾಪನೆಗೆ ಮುಂದಾಗಿದ್ದರು.
ಈ ವೇಳೆ ದಲಿತ ಸಂಘಟನೆಗಳು ಸಾರ್ವಜನಿಕ ಹಣ ದುರಪಯೋಗ ಹಾಗೂ ಕೆರೆಯ ಪರಿಸರಕ್ಕೆ ಹಾನಿ ಎಂದು ವಿರೋಧಿಸಿ ಪ್ರತಿಭಟನೆ ನಡೆಸಿದರು. ಯಾವುದನ್ನೂ ಲೆಕ್ಕಿಸದೇ ಸ್ವಾಮಿ ವಿವೇಕಾನಂದ ಮೂರ್ತಿ ಸ್ಥಾಪನೆ ಮಾಡಿ ಈಗ ಎಡವಟ್ಟು ಮಾಡಿಕೊಂಡಿದ್ದಾರೆ. ಇನ್ನು ಕೆರೆಯಲ್ಲಿ ಇಂತಹ ಬೃಹತ್ ಕಾಮಗಾರಿ ಕೈಗೊಂಡರೂ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆ ಈವರೆಗೂ ಏನೂ ಕ್ರಮ ಕೈಗೊಳ್ಳದೇ ಕಣ್ಮುಚ್ಚಿ ಕುಳಿತಿರುವುದಕ್ಕೆ ಶಾಸಕ ಸಿ.ಟಿ ರವಿ ಅವರ ಪ್ರಭಾವ ಕಾರಣ ಇರಬಹುದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಅಸ್ತಿತ್ವ ಕಳೆದುಕೊಂಡವಾ? ಜಿಲ್ಲೆಯ ವಿರೋಧ ಪಕ್ಷಗಳು
ದೇಶದ ಸಾಂಸ್ಕೃತಿಕ ಸಂಪತ್ತಾದ, ನಿರ್ಮಾಣ ಹಂತದಲ್ಲಿದ್ದ ವಿವೇಕಾನಂದ ಮೂರ್ತಿಯನ್ನು ರಾತ್ರೋ ರಾತ್ರಿ ಯಾರೋ ಕೆಡವಿ ಹಾಕಿದರೂ ಚಿಕ್ಕಮಗಳೂರು ನಗರ ಅಥವಾ ಜಿಲ್ಲೆಯ ವಿರೋಧ ಪಕ್ಷಗಳಾದ ಜೆಡಿಎಸ್, ಕಾಂಗ್ರೆಸ್ ಸೇರಿದಂತೆ ಯಾವುದೇ ಸಂಘಟನೆಯ ಮುಖಂಡರು ಈ ಬಗ್ಗೆ ಚಕಾರ ಎತ್ತುತ್ತಿಲ್ಲ.
ವಿವೇಕಾನಂದ ಮೂರ್ತಿ ಸ್ಥಾಪನೆಯಲ್ಲಿ ನಗರದ ಬಿಜೆಪಿಯ ಪ್ರಭಾವಿಗಳು ಭಾಗಿಯಾಗಿದ್ದರು. ಅದರಲ್ಲೂ ಈ ಕಾಮಗಾರಿ ಜವಾಬ್ದಾರಿ ಹೊತ್ತಿದ್ದ ಮಾಜಿ ನಗರಸಭೆ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಸಚಿವ ಸಿ.ಟಿ ರವಿ ಆಪ್ತ ತಾವೇ ಕಿತ್ತು ಹಾಕಿರುವುದಾಗಿ ( ಪತ್ರಿಕಾಗೋಷ್ಟಿಯಲ್ಲಿ) ಹೇಳಿಕೆ ನೀಡಿದ್ದಾರೆ. ಆದರು ಸಹ ವಿರೋಧ ಪಕ್ಷದ ಯಾವೊಬ್ಬ ಮುಖಂಡರು ಈ ಬಗ್ಗೆ ಚಕಾರ ಎತ್ತದೇ ಇರುವುದು ಸಾರ್ವಜನಿಕರಲ್ಲಿ ಅನುಮಾನಕ್ಕೆ ಕಾರಣವಾಗಿದೆ.

ಕೆಲ ಮುಖಂಡರ ತಲೆದಂಡಕ್ಕೂ ಸ್ಕೆಚ್ ರೆಡಿ
ವಿವೇಕಾನಂದ ಮೂರ್ತಿ ಸ್ಥಾಪನೆ ಜಿಲ್ಲೆಯಲ್ಲಿ ಬಿಜೆಪಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಎಲ್ಲದಕ್ಕೂ ಹಿಂದೆ ನಿಂತು ಬೆಂಬಲ ನೀಡಿದ ಜಿಲ್ಲೆಯ ಪ್ರಮುಖ ನಾಯಕರೇ ಇದಕ್ಕೂ, ನನಗೂ ಸಂಬಂಧ ಇಲ್ಲ ಎಂಬಂತೆ ಮಾತನಾಡುತ್ತಿರುವುದು ಕೆಳ ಹಂತದ ಬಿಜೆಪಿ ಮುಖಂಡರಿಗೆ ತಲೆನೋವಾಗಿ ಪರಿಣಮಿಸಿದೆ. ಮತ್ತೊಂದು ಕಡೆ ವಿವೇಕಾನಂದ ಮೂರ್ತಿ ಸ್ಥಾಪನೆಯ ವಿಚಾರವೇ ಬಿಜೆಪಿಯ ಕೆಳ ಹಂತದ ಮುಖಂಡರ ಒಳಬೇಗುದಿಗೆ ಕಾರಣವಾಗುವ ಜೊತೆಗೆ ಇನ್ನು ಕೆಲ ಮುಖಂಡರ ತಲೆದಂಡಕ್ಕೂ ಸ್ಕೆಚ್ ರೆಡಿಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.











Click it and Unblock the Notifications