ಬಿಜೆಪಿಯದ್ದು ವಿಜಯಸಂಕಲ್ಪ ಯಾತ್ರೆ ಅಲ್ಲ, ಅದು "ಭ್ರಷ್ಟೋತ್ಸವ" ಯಾತ್ರೆ: ಬಿ.ಕೆ.ಹರಿಪ್ರಸಾದ್
ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಮಗಳೂರು, ಮಾರ್ಚ್, 07: ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಭ್ರಷ್ಟಚಾರಕ್ಕೆ ಕಡಿವಾಣ ಹಾಕಬೇಕಾದ ಸರ್ಕಾರ ಸಾಕ್ಷಿ ಕೊಡಿ ಎಂದು ಕೇಳುತ್ತಿದೆ ಅಂತಾ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಚಿಕ್ಕಮಗಳೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರ ಎರಡು ವರ್ಷಗಳಿಂದ ಭ್ರಷ್ಟಾಚಾರದಲ್ಲಿ ನಿರತವಾಗಿದ್ದು, ಬಿಜೆಪಿ ವಿಜಯಸಂಕಲ್ಪ ಯಾತ್ರೆಗೆ ಭ್ರಷ್ಟೋತ್ಸವ ಯಾತ್ರೆ ಎಂದು ಹೆಸರಿಡಬೇಕು ಎಂದು ಲೇವಡಿ ಮಾಡಿದರು. ಯಾವ ಮುಖ ಇಟ್ಟುಕೊಂಡು ವಿಜಯ ಸಂಕಲ್ಪ ಯಾತ್ರೆ ಮಾಡುತ್ತಿದ್ದಾರೆಯೋ ಗೊತ್ತಿಲ್ಲ. ಹೇಳಿಕೊಳ್ಳಲು ರಾಜ್ಯದಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಯಾತ್ರೆಯಲ್ಲಿ ಭ್ರಷ್ಟಾಚಾರವನ್ನೇ ವೈಭವಿಕರಿಸಬೇಕಷ್ಟೇ ಎಂದರು.

ಪ್ರಲ್ಹಾದ್ ಜೋಶಿ ವಿರುದ್ಧ ವಾಗ್ದಾಳಿ
ಶಾಸಕ ವಿರೂಪಾಕ್ಷಪ್ಪರ ಮಗ ಲಂಚ ಪಡೆಯುವಾಗ ಸಿಕ್ಕಿಬಿದಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಿ ಎಂದರೇ ಪ್ರಲ್ಹಾದ್ ಜೋಶಿಯವರು ತನಿಖೆಯಾಗಿ ವರದಿ ಬಂದ ಮೇಲೆ ಕ್ರಮಕೈಗೊಳ್ಳುತ್ತೇವೆ ಎನ್ನುತ್ತಿದ್ದಾರೆ. ಶಾಸಕರ ಪುತ್ರನೇ ಸಿಕ್ಕಿಬಿದಿದ್ದು, ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಅವರನ್ನು ಯಾರು ಬಚಾವ್ ಮಾಡುತ್ತಿದ್ದಾರೆಯೋ ಗೊತ್ತಾಗುತ್ತಿಲ್ಲ ಎಂದರು.
ಭ್ರಷ್ಟ ಜನತಾ ಪಾರ್ಟಿ ಅಂತಾ ಕರೆಯಬೇಕು
ಭ್ರಷ್ಟಚಾರವನ್ನು ವೈಭವಿಕರಿಸುತ್ತಿರುವ ಪಕ್ಷವನ್ನು ಭ್ರಷ್ಟ ಜನತಾ ಪಾರ್ಟಿ ಅಂತಾ ಕರೆಯಬೇಕು. ರಾಜ್ಯದಿಂದ ಕೇಂದ್ರಕ್ಕೆ 25 ಸಂಸದರನ್ನು ಆರಿಸಿ ಕಳುಹಿಸಲಾಗಿದೆ. ಆದರೆ, ರಾಜ್ಯಕ್ಕೆ ಕೇಂದ್ರ ಸರ್ಕಾರದ ಕೊಡುಗೆ ಶೂನ್ಯವಾಗಿದೆ. ರಾಜ್ಯದಿಂದ ಹೆಚ್ಚು ಜಿಎಸ್ಟಿ ಸಂಗ್ರಹಿಸುತ್ತಿದ್ದು, ಹಣ ನೀಡುವಲ್ಲಿ ಕೇಂದ್ರ ರಾಜ್ಯಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಜಿಲ್ಲೆಯಲ್ಲಿ ದಡ್ಡತನವನ್ನು ಪ್ರದರ್ಶಿಸಿದ್ದಾರೆ. ಇಲ್ಲಿ ಅಡಿಕೆ ಬೆಳೆಗಾರರ ಸಮಾವೇಶ ಮಾಡಿ ಬೆಳೆಗಾರರ ದಿಕ್ಕು ತಪ್ಪಿಸಿದ್ದಾರೆ. ಅವರು ಕೇಂದ್ರದಲ್ಲಿ ಆರೋಗ್ಯ ಸಚಿವರಾಗಿದ್ದಾಗಲೇ ಅಡಿಕೆ ಕ್ಯಾನ್ಸರ್ಕಾರಕ ಹಣೆಪಟ್ಟಿ ಕಟ್ಟಿದ್ದು ಎಂದು ದೂರಿದರು.
ಸಿ.ಟಿ.ರವಿ ವಿರುದ್ಧ ಆಕ್ರೋಶ
ಶಾಸಕ ಸಿ.ಟಿ.ರವಿಯವರನ್ನು ಜಿಲ್ಲೆಯ ಮಹಾನಾಯಕ ಎಂದು ಸಂಭೋದಿಸಿ ಅವರ ವಿರುದ್ಧ ಹರಿಹಾಯ್ದ ಹರಿಪ್ರಸಾದ್, ಕೆಲಸ ಮಾಡಿ ಬೆನ್ನು ತಟ್ಟಿಕೊಳ್ಳಲಿ. ಅದನ್ನು ಬಿಟ್ಟು ಬೇರೆಯವರು ಮಾಡಿದ ಕೆಲಸಕ್ಕೆ ಲೇಬಲ್ ಅಂಟಿಸಿಕೊಂಡು ಅವರ ಬೆನ್ನು ತಟ್ಟಿಕೊಳ್ಳುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಳೆಯಿಂದ ಕೆರೆಗಳು ತುಂಬಿದರೆ, ಇವರು ಆಧುನಿಕ ಭಗೀರಥ ಎಂದು ಸ್ವಯಂ ಘೋಷಿತವಾಗಿ ಕೆರೆದುಕೊಳ್ಳುತ್ತಾರೆ. ಚಿಕ್ಕಮಗಳೂರಿಗೆ ನಿಜವಾದ ಭಗೀರಥ ಸಗೀರ್ ಅಹಮದ್ ಯಗಚಿಯಿಂದ ನೀರು ತರದಿದ್ದರೇ ಇಂದು ಚಿಕ್ಕಮಗಳೂರಿಗೆ ಕುಡಿಯಲು ನೀರು ಸಿಗುತ್ತಿರಲಿಲ್ಲ ಎಂದರು.












Click it and Unblock the Notifications