ಧರ್ಮದ ವಿಚಾರಕ್ಕೆ ಹೋಗಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ: ರಂಭಾಪುರಿ ಶ್ರೀ
ಚಿಕ್ಕಮಗಳೂರು, ಆ.19: ಮಡಿಕೇರಿಯಲ್ಲಿ ನಿನ್ನೆ ಸಿದ್ದರಾಮಯ್ಯನವರ ಕಾರಿಗೆ ಮೊಟ್ಟೆ ಎಸೆದಿದ್ದರು. ಈ ವಿಚಾರವಾಗಿ ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಪಾಳಯ ಆಕ್ರೋಶ ವ್ಯಕ್ತಪಡಿಸುತ್ತಿದೆ. ಹಾಗೆಯೇ ಸಿದ್ದರಾಮಯ್ಯ ಅವರು ಬೆಳಗ್ಗೆ ಬಾಳೆಹೊನ್ನೂರಿನ ಮಠಕ್ಕೆ ಭೇಟಿ ನೀಡಿ ರಂಭಾಪುರಿ ಶ್ರೀಗಳ ಆಶೀರ್ವಾದವನ್ನು ಪಡೆದಿದ್ದರು. ರಂಭಾಪುರಿ ಶ್ರೀಗಳು ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯನವರು ಧರ್ಮ ಒಡೆಯುವುದು ನನ್ನ ಉದ್ದೇಶ ಆಗಿರಲಿಲ್ಲ. ಕೆಲವರು ನನ್ನನ್ನ ದಾರಿ ತಪ್ಪಿಸಿದ್ದರು ಎಂದು ನನ್ನ ಬಳಿ ಪಶ್ಚಾತಾಪ ತೋಡಿಕೊಂಡಿದ್ದರು. ಹಾಗೆಯೇ ಮುಂದೆ ಯಾವತ್ತೂ ಧರ್ಮದ ವಿಷಯಕ್ಕೆ ಹೋಗುವುದಿಲ್ಲ. ರಾಜ್ಯದ ಜನರ ಅಭಿವೃದ್ದಿ ಬಗ್ಗೆ ಹೆಚ್ಚು ಆದ್ಯತೆ ನೀಡುತ್ತೇನೆ ಎಂದಿದ್ದಾರೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳು ಹೇಳಿದರು.
ಕೊಡಗಿನಲ್ಲಿ ನಿನ್ನೆ ಮೊಟ್ಟೆ ಎಸೆತ ಪ್ರಕರಣ ನಡೆದ ಬಳಿಕ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಂಭಾಪುರಿ ಮಠಕ್ಕೆ ಭೇಟಿ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಮಠಕ್ಕೆ ಭೇಟಿ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ರಂಭಾಪುರಿ ಶ್ರೀಗಳು ರುಧ್ರಾಕ್ಷಿ ಮಾಲೆ ಹಾಕಿದ್ದಾರೆ. ಅಷ್ಟೇ ಅಲ್ಲದೇ ಮುಂದಿನ ಚುನಾವಣೆವರೆಗೂ ಈ ಮಾಲೆಯನ್ನು ಹಾಕಿಕೊಂಡಿರಿ. ನಿಮಗೆ ಒಳ್ಳೆಯದಾಗುತ್ತದೆ ಎಂದು ತಿಳಿಸಿದ್ದರು.
ನಂತರ ಸಿದ್ದರಾಮಯ್ಯನವರು ಚಿಕ್ಕಮಗಳೂರು ಜಿಲ್ಲೆಯ ಎನ್ಆರ್ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿರುವ ರಂಭಾಪುರಿ ಪೀಠದ ಶ್ರೀ ಪ್ರಸನ್ನ ವೀರ ಸೋಮೇಶ್ವರ ಸ್ವಾಮೀಜಿಗಳ ಆಶೀರ್ವಾದವನ್ನು ಪಡೆದರು. ವೀರಭದ್ರನಾಥ ಸ್ವಾಮಿ, ರೇಣುಕಾಚಾರ್ಯರ ಗದ್ದುಗೆಯ ದರ್ಶನವನ್ನೂ ಸಹ ಪಡೆದರು. ಅದಕ್ಕೂ ಮುಂಚೆ ಶೃಂಗೇರಿ ಶಾರದಾಂಬೆ ದರ್ಶನ ಪಡೆದರು.
ಇದೀಗ ರಂಭಾಪುರಿ ಶ್ರೀಗಳು ಸಿದ್ದರಾಮಯ್ಯ ತಮ್ಮ ತಪ್ಪುಗಳಿಗೆ ಪಶ್ಚಾತಾಪವನ್ನು ಕೇಳಿದ್ದಾರೆ ಎಂದು ಹೇಳಿರುವುದು ಭಾರಿ ಸಂಚಲನ ಮೂಡಿಸಿದೆ. ಸಿದ್ದರಾಮಯ್ಯ ಅವರು ನನ್ನ ಎದುರಿಗೆ ನಾನು ಇನ್ನೂ ಯಾವ ಧರ್ಮದ ಸುದ್ದಿಗೂ ಹೋಗುವುದಿಲ್ಲ ಎಂದು ಹೇಳಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತೇನೆ ಎಂದರು ಎಂದು ರಾಂಭಾಪುರಿ ಶ್ರೀಗಳು ಹೇಳಿದರು.