ಚಿಕ್ಕಮಗಳೂರಿನಲ್ಲಿ ಮುಂದುವರಿದ ಮಳೆ ಅಬ್ಬರ: 3 ದಿನ ಕಳೆದರೂ ಸಿಗದ ಬಾಲಕಿ
ಚಿಕ್ಕಮಗಳೂರು, ಜುಲೈ 7 : ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಮೂರು ದಿನಗಳ ಹಿಂದೆ ಜೋರಾಗಿ ಹರಿಯುತ್ತಿದ್ದ ಹಳ್ಳದಲ್ಲಿ ಕಾಲು ತೊಳೆಯಲು ಹೋಗಿ ಕೊಚ್ಚಿ ಹೋಗಿದ್ದ ಬಾಲಕಿ ಮೂರು ದಿನ ಕಳೆದರೂ ಇನ್ನು ಪತ್ತೆಯಾಗಿಲ್ಲ. ಬಾಲಕಿ ಸುಪ್ರತಾಗಾಗಿ ಅಗ್ನಿಶಾಮಕ ದಳ, ಎನ್ಡಿಆರ್ಎಫ್ ತಂಡ, ಪೊಲೀಸ್ ಮತ್ತು ಸ್ಥಳೀಯರು ನಿರಂತರವಾಗಿ ಹುಡುಕಾಡುತ್ತಿದ್ದರೂ ಪತ್ತೆಯಾಗಿಲ್ಲ.
ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಗ್ರಾಮದ ಸುಪ್ರಿತಾ ಸೋಮವಾರ ಶಾಲೆ ಮುಗಿಸಿ ತನ್ನ ಅಣ್ಣನ ಜೊತೆಗೆ ಬರುವಾಗ, ಕಾಲು ಕೆಸರಾಗಿದೆ ಎಂದು ತೊಳೆದುಕೊಳ್ಳಲು ಹಳ್ಳಕ್ಕೆ ಇಳಿದಿದ್ದ ವೇಳೆ ನೀರಲ್ಲಿ ಕೊಚ್ಚಿ ಹೋಗಿದ್ದಳು. ಮೊದಲೆರಡು ದಿನ ಅಗ್ನಿಶಾಮಕ ದಳದ 30ಕ್ಕೂ ಹೆಚ್ಚು ಸಿಬ್ಬಂದಿ ಹುಡುಕಾಡಿದ್ದರು.
Breaking: ಚಿಕ್ಕಮಗಳೂರು ಮಳೆ: ಮುನ್ನೆಚ್ಚರಿಕೆ ಕ್ರಮವಾಗಿ 4 ದಿನ ಶಾಲೆಗಳಿಗೆ ರಜೆ ಘೋಷಣೆ
ಮಂಗಳವಾರ ಬೆಳಗ್ಗೆಯಿಂದ ಸಂಜೆವರೆಗೂ ಅಗ್ನಿಶಾಮಕ ದಳದ ಸಿಬ್ಬಂದಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ತರಬೇತಿ ಪಡೆದ ತಂಡದ ಸದಸ್ಯರು ಹಾಗೂ ಸ್ಥಳೀಯರು ಶೋಧ ಕಾರ್ಯ ನಡೆಸಿದರು. ಬಾಲಕಿ ಸುಳಿವು ದೊರೆತಿಲ್ಲ.
ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಬೆಂಗಳೂರಿನಿಂದ ಎನ್ಡಿಆರ್ಎಫ್ ತಂಡ ಕರೆಸಿದ್ದು, ಬುಧವಾರ ಬೆಳಿಗ್ಗೆಯಿಂದ ತಂಡದ ಸದಸ್ಯರು ಶೋಧ ಕಾರ್ಯ ನಡೆಸಿದರು. ಆದರೂ ಬಾಲಕಿಯ ಸುಳಿವು ದೊರೆತ್ತಿಲ್ಲ. 70ಕ್ಕೂ ಜನರು ಶೋಧಕಾರ್ಯದಲ್ಲಿ ತಲ್ಲೀನರಾಗಿದ್ದಾರೆ. ಶೀಘ್ರದಲ್ಲೇ ಬಾಲಕಿಯ ಸುಳಿವು ದೊರೆಯುವ ವಿಶ್ವಾಸವನ್ನು ಜಿಲ್ಲಾಧಿಕಾರಿ ಕೆ. ಎನ್. ರಮೇಶ್ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ: ಸೇತುವೆಗಳು ಮುಳುಗಡೆ, ಹಳ್ಳದಲ್ಲಿ ಕೊಚ್ಚಿ ಹೋದ ಬಾಲಕಿ
ಬಾಲಕಿ ಬದುಕಿ ಬರ್ತಾಳೆ ಎಂಬ ಆಸೆಯಲ್ಲಿ ತಾಯಿ
ಮೂರು ದಿನ ಕಳೆದರೂ ಸುಪ್ರಿತಾಳ ಸುಳಿವೇ ಇಲ್ಲ, ಆದರೂ ಕೂಡ ನನ್ನ ಮಗಳು ಬದುಕಿರುತ್ತಾಳೆ ಎನ್ನುವ ಆಸೆ ಹೆತ್ತಮ್ಮನಲ್ಲಿ ಇನ್ನೂ ಕೂಡ ಇದೆ. ಊರಿನ ಜನರು ಕೂಡ ನೂರಾರು ಸಂಖ್ಯೆಯಲ್ಲಿ ಆಗಮಿಸಿ ಎಲ್ಲಾ ಕಡೆ ಹುಡುಕಾಟ ನಡೆಸುತ್ತಿದ್ದಾರೆ. ನಮ್ಮ ಶಾಲೆಯ ವಿದ್ಯಾರ್ಥಿನಿಗೆ ಹೀಗಾಯಿತಲ್ಲ ಎನ್ನುವ ಸಂಕಟ ಶಾಲೆ ಶಿಕ್ಷಕರು ಹಾಗೂ ಇತರೆ ವಿದ್ಯಾರ್ಥಿಗಳನ್ನ ಕಾಡುತ್ತಿದೆ. ಈ ಮಧ್ಯೆ ಒಂದೇ ಸಮನೆ ಬಿಟ್ಟುಬಿಡದೇ ಬರುತ್ತಿರುವ ಮಳೆ, ಕೊಚ್ಚಿ ಹೋಗಿರುವ ಬಾಲಕಿಯ ಹುಡುಕಾಟಕ್ಕೆ ಸಮಸ್ಯೆ ತಂದೊಡ್ಡಿದೆ.
ತುಂಬಿ ಹರಿಯುತ್ತಿರುವ ತುಂಗಾ, ಭದ್ರಾ, ಹೇಮಾವತಿ ನದಿಗಳು
ಮಲೆನಾಡು ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಆರ್ಭಟ ಮುಂದುವರೆದಿದ್ದು, ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಕೆಲಸಮಯ ಬಿಡುವು ನೀಡಿದರೇ, ಮತ್ತೇ ಬಿರುಸುಗೊಳ್ಳುತ್ತಿದೆ. ಇಲ್ಲಿ ಹರಿಯುವ ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟದಲ್ಲೇ ಹರಿಯುತ್ತಿವೆ. ಮೂರು ದಿನಗಳಿಂದ ಬಿರುಸುಗೊಂಡ ಮಳೆ, ಮಂಗಳವಾರ ಹಗಲು ಮತ್ತು ರಾತ್ರಿ ವೇಳೆ ಮಳೆಯಾಗಿದೆ. ಬುಧವಾರ ಮುಂಜಾನೆ ಮಳೆ ಬಿರುಸುಗೊಂಡಿದ್ದು, ಮಧ್ಯಾಹ್ನದ ವೇಳೆಗೆ ಕೊಂಚ ಕಡಿಮೆಯಾದರು. ಸಂಜೆ ವೇಳೆಗೆ ಅಲ್ಲಲ್ಲಿ ಬಿರುಸುಗೊಂಡಿದೆ. ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ.
ಗುಡ್ಡ ಕುಸಿತ, ಮುರಿದು ಬಿದ್ದ ಮರಗಳು
ಜಿಲ್ಲೆಯ ಮೂಡಿಗೆರೆ, ಕಳಸ, ಹೊರನಾಡು, ಚಾರ್ಮಾಡಿಘಾಟಿ, ಕೊಪ್ಪ, ಶೃಂಗೇರಿ, ಬಾಳೆ 7ಹೊನ್ನೂರು, ನರಸಿಂಹರಾಜಪುರ ಸುತ್ತಮುತ್ತ ಮಳೆಯಾಗುತ್ತಿದ್ದು ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಕಡೂರು ತರೀಕೆರೆ ಭಾಗದಲ್ಲೂ ನಿರಂತರ ಸಾಧಾ ರಣ ಮಳೆಯಾಗುತ್ತಿದೆ. ಹಳ್ಳ ಕೊಳ್ಳಗಳು ಅಬ್ಬರಿಸಿ ಹರಿಯುತ್ತಿವೆ. ಮಳೆಯಿಂದ ಅಲ್ಲಲ್ಲಿ ಮನೆಗಳಿಗೆ ಹಾನಿಯಾಗಿದೆ. ಮನೆಮೇಲೆ ಮರಬಿದ್ದು ಜಖಂಗೊಂಡಿದ್ದರೇ, ಗೋಡೆಕುಸಿದು ಮನೆಗಳಿಗೆ ಹಾನಿಯಾಗಿದೆ. ರಸ್ತೆಗಳ ಮೇಲೆ ಗುಡ್ಡದ ಮಣ್ಣು ಮತ್ತು ಮರಗಳು ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದ್ದು ತೆರವು ಕಾರ್ಯಾಚರಣೆ ನಡೆಯುತ್ತಿದ್ದು ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ.
ನದಿ ಪಾತ್ರದ ಜನರಿಗೆ ಎಚ್ಚರಿಕೆ
ಶೃಂಗೇರಿ ಶಾರದಾ ದೇವಸ್ಥಾನ ಸಮೀಪದಲ್ಲಿರುವ ಕಪ್ಪೆಶಂಕರ ಮಂಟಪ ಕಳೆದ ಮೂರು ದಿನಗಳಿಂದ ತುಂಗಾನದಿ ನೀರಿನಲ್ಲಿ ಮುಳುಗಿದೆ. ನದಿಪಾತ್ರದ ರಸ್ತೆಗಳಿಗೆ ಪೊಲೀಸ್ ಇಲಾಖೆ ಬ್ಯಾರಿಕೇಡ್ಗಳನ್ನು ಹಾಕಿ ಸಂಚಾರವನ್ನು ಬಂದ್ಗೊಳಿಸಿದ್ದಾರೆ. ಅಲ್ಲಲ್ಲಿ ಅಡಕೆ ಮತ್ತು ಕಾಫಿತೋಟಗಳಿಗೆ ನೀರು ನುಗ್ಗಿದೆ. ಮೋಡ ಕವಿದ ವಾತಾವರಣ ಮುಂದೂವರೆದಿದ್ದು ಶೀತಗಾಳಿ ಬೀಸುತ್ತಿದೆ. ಮಳೆಯಿಂದ ಕೂಲಿಕಾರ್ಮಿಕರು ಕೆಲಸಕ್ಕೆ ತೆರಳಲು ಸಾಧ್ಯವಾಗದೇ ಮನೆಯಲ್ಲೆ ಉಳಿದುಕೊಳ್ಳುವಂತಾಗಿದೆ. ಇನ್ನು ಮಳೆಗೆ 42 ಮನೆಗಳಿಗೆ ಹಾನಿಯಾಗಿದೆ. 5 ಮನೆಗಳು ಸಂಪೂರ್ಣ ಶಿಥಿಲಗೊಂಡಿದ್ದು, 16 ಮನೆಗಳು ಭಾಗಶಃ ಹಾನಿಯಾಗಿದೆ. 21 ಮನೆಗಳಿಗೆ ಶೇ.15ರಿಂದ 25ರಷ್ಟು ಹಾನಿಯಾಗಿದೆ.
ಜಿಲ್ಲೆಯಲ್ಲಿ ತೀವ್ರ ಮಳೆಯಾಗುತ್ತಿರುವುದರಿಂದ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಅಂಗನವಾಡಿ,ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಜುಲೈ 9ರವರೆಗೆ ರಜೆ ಘೋಷಣೆ ಮಾಡಲಾಗಿದೆ. ಎಂದು ಜಿಲ್ಲಾಧಿಕಾರಿ ಕೆ. ಎನ್. ರಮೇಶ್ ತಿಳಿಸಿದ್ದಾರೆ. ಚಿಕ್ಕಮಗಳೂರಿನ ಕೆಲವು ಭಾಗಗಳು, ಮೂಡಿಗೆರೆ, ಕಳಸ, ಶೃಂಗೇರಿ, ಎನ್.ಆರ್.ಪುರ, ಕೊಪ್ಪ ತಾಲೂಕಿನಲ್ಲಿ ಜುಲೈ 9ರವರೆಗೆ ರಜೆ ಘೋಷಣೆ ಮಾಡಲಾಗಿದೆ.
Recommended Video