ಚಿಕ್ಕಮಗಳೂರಿನಲ್ಲಿ ಕೊರೊನಾ ಸೋಂಕಿಗೀಗ ಜನಪ್ರತಿನಿಧಿಗಳ ಸರಣಿ...
ಚಿಕ್ಕಮಗಳೂರು, ಜುಲೈ 7: ಕಾಫಿನಾಡಲ್ಲಿ ಕೊರೊನಾ ವೈರಸ್ ಪ್ರಕರಣಗಳು ಮುಂದುವರಿದಿವೆ. ಪೊಲೀಸ್ ಆಯ್ತು, ಕೈದಿ ಆಯ್ತು, ಡಾಕ್ಟರ್ ಆಯ್ತು, ಕೆಎಸ್ಆರ್ಟಿಸಿ ಡ್ರೈವರ್, ಕಂಡಕ್ಟರೂ ಆಯ್ತು. ಇದೀಗ ಜನಪ್ರತಿನಿಧಿಗಳ ಸರದಿ. ಜಿಲ್ಲೆಯಲ್ಲಿ ಎಂಎಲ್ಸಿ ಸೇರಿದಂತೆ ಪ್ರಮುಖ ನಾಯಕರುಗಳನ್ನು ಕೊರೊನಾ ಸುತ್ತಿಕೊಳ್ಳುತ್ತಿದೆ.
Recommended Video
ಈ ಸುರುಳಿಯ ಕಂಟಕ ಇದೀಗ ಸಚಿವ ಸಿ.ಟಿ ರವಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರಿಗೂ ತಲೆನೋವಾಗಿ ಪರಿಣಮಿಸಿದೆ. ಮಂಗಳವಾರ ಬೆಳಗ್ಗೆ ವಿಧಾನಪರಿಷತ್ ಸದಸ್ಯ, ಪತ್ನಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ನಿನ್ನೆ ರಾತ್ರಿ ನಗರಸಭೆ ಸದಸ್ಯ, ಪತ್ನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇಂದು ಬೆಳಗ್ಗೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೂ ಕೊರೊನಾ ಸೋಂಕು ಕಂಡುಬಂದಿದೆ.

ಬಿಜೆಪಿ ವಲಯದಲ್ಲಿ ತೀವ್ರ ಆತಂಕ
ಹೀಗೆ ಒಬ್ಬೊಬ್ಬ ಜನಪ್ರತಿನಿಧಿಯಲ್ಲೂ ಕೊರೊನಾ ಸೋಂಕು ಕಂಡುಬರುತ್ತಿರುವುದು ಬಿಜೆಪಿ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಮಾಡಿದೆ. ಯಾರಿಂದ ಯಾರಿಗೆ ಕೊರೊನಾ ಸೋಂಕು ತಗುಲುತ್ತಿದೆ ಎನ್ನುವುದು ಗೊತ್ತಾಗದ ರೀತಿಯಲ್ಲಿ ವೈರಸ್ ಹರಡುತ್ತಿದೆ. ಸದ್ಯ ಕೊರೊನಾ ಸೋಂಕಿತರಾಗಿರುವ ವಿಧಾನಸಭಾ ಸದಸ್ಯರ ಜೊತೆ ಹಲವರು ಸಂಪರ್ಕ ಹೊಂದಿದ್ದು, ಬಿಜೆಪಿಯ ಮುಖಂಡರು, ಕಾರ್ಯಕರ್ತರಲ್ಲಿ ಭೀತಿ ಹೆಚ್ಚಾಗಿದೆ.

ವಿಶ್ವಾಸದ ಮಾತು ಆಡಿರುವ ಎಂಎಲ್ಸಿ ಪ್ರಾಣೇಶ್
ಎಂಎಲ್ಸಿ ಹಾಗೂ ಅವರ ಪತ್ನಿಗೆ ಸೋಂಕು ತಗುಲಿದೆ ಎಂದು ತಿಳಿದು ಹಲವರು ಕೊರೊನಾ ಪರೀಕ್ಷೆಗೆ ಮುಂದಾಗುತ್ತಿದ್ದಾರೆ. ಇನ್ನೊಂದೆಡೆ ನಗರಸಭೆ ಸದಸ್ಯ, ನಗರಾಭಿವೃದ್ಧಿ ಅಧ್ಯಕ್ಷರಿಗೂ ಕೊರೊನಾ ವಕ್ಕರಿಸಿಸಿದ್ದು, ಪಕ್ಷದ ಇತರೆ ಮುಖಂಡರಿಗೂ, ಕಾರ್ಯಕರ್ತರಿಗೂ ಆತಂಕ ಹೆಚ್ಚಾಗಲು ಕಾರಣವಾಗಿದೆ. ಈ ನಡುವೆ ಆಸ್ಪತ್ರೆಯಿಂದಲೂ ವಿಡಿಯೋ ಮಾಡಿ ಮಾತನಾಡಿರೋ ವಿಧಾನಪರಿಷತ್ ಸದಸ್ಯ ಪ್ರಾಣೇಶ್, ನಿಮ್ಮೆಲ್ಲರ ಪ್ರೀತಿ ವಿಶ್ವಾಸದ ಮುಂದೆ ಕೊರೊನಾ ಏನೂ ಅಲ್ಲ, ಶೀಘ್ರದಲ್ಲೇ ಕೊರೊನಾ ಸೋಂಕಿನಿಂದ ಮುಕ್ತರಾಗಿ ಬರುತ್ತೇವೆ ಅನ್ನೋ ವಿಶ್ವಾಸದ ಮಾತುಗಳನ್ನಾಡಿದ್ದಾರೆ.

ಸಿ.ಟಿ.ರವಿ ಮೇಲೆ ಬಿದ್ದ ಕೊರೊನಾ ಕರಿನೆರಳು
ಸೋಂಕಿತರಾಗಿರುವ ಮೂವರು ಜನಪ್ರತಿನಿಧಿಗಳು ಕೂಡ ಸಚಿವ ಸಿ.ಟಿ.ರವಿ ಜೊತೆ ಓಡಾಡಿಕೊಂಡಿದ್ದವರು. ಅವರ ಜೊತೆಯಲ್ಲೇ ಹೆಚ್ಚಾಗಿ ಇರುತ್ತಿದ್ದವರು. ಹೀಗಾಗಿ ಕೊರೊನಾ ಕರಿನೆರಳು ಸಚಿವ ಸಿ.ಟಿ ರವಿ ಮೇಲೂ ಬಿದ್ದಿದೆ. ಮೊನ್ನೆಯ ಸಂಡೆ ಲಾಕ್ ಡೌನ್ ವೇಳೆಯೂ 60-70 ಜನರ ಗುಂಪು ಕಟ್ಟಿಕೊಂಡು ಓಡಾಡಿದ್ದರು. ಈ ವೇಳೆ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಕೂಡ ಮಾಸ್ಕ್ ಹಾಕದೇ ಮೊಂಡತನ ಪ್ರದರ್ಶನ ಮಾಡಿದ್ದರು. ಸದ್ಯ ಈ ಎಲ್ಲಾ ಬೆಳವಣಿಗೆಗಳನ್ನು ನೋಡುತ್ತಿದ್ದರೆ ಜಿಲ್ಲೆಯ ಬಿಜೆಪಿ ವಲಯ ಸೇರಿದಂತೆ ಜನಸಾಮಾನ್ಯರಲ್ಲಿ ಆತಂಕ ಹೆಚ್ಚಾಗಿದೆ.

ಜಿಲ್ಲೆಯಲ್ಲಿ ಶತಕದತ್ತ ಕೊರೊನಾ ವೈರಸ್
ಜಿಲ್ಲೆಯಲ್ಲಿ ತನ್ನ ಕಬಂಧ ಬಾಹುವನ್ನು ಕೊರೊನಾ ಚಾಚುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಶತಕದತ್ತ ದಾಪುಗಾಲಿಡುತ್ತಿದ್ದು, ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಜಿಲ್ಲೆಯಲ್ಲಿಂದು ಆರು ಜನರಿಗೆ ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ವಿಧಾನಪರಿಷತ್ ಸದಸ್ಯರ ಸಂಪರ್ಕದಿಂದ ನಾಲ್ಕು ಮಂದಿಗೆ ಸೋಂಕು ಹರಡಿಸಿದೆ. ಎಂಎಲ್ಸಿ ವಾಹನ ಚಾಲಕ ಸೇರಿ ನಾಲ್ವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 101ಕ್ಕೆ ಏರಿಕೆಯಾಗಿದೆ.












Click it and Unblock the Notifications