ಬದುಕಿದ್ದಾಗ ರೋಗಿಗಳ ಸೇವೆ, ಸತ್ತ ಮೇಲೆ ಅಂಗಾಂಗ ದಾನ; ಸಾವಿನಲ್ಲೂ ಸಾರ್ಥಕತೆ ಮೆರೆದ ಸ್ಟಾಫ್ ನರ್ಸ್
ಚಿಕ್ಕಮಗಳೂರು, ಫೆಬ್ರವರಿ 14: ಬದುಕಿದ್ದಾಗ ಸಾವಿರಾರು ರೋಗಿಗಳ ಸೇವೆ ಮಾಡಿ ಸತ್ತ ಮೇಲೆ ಅಂಗಾಂಗ ದಾನ ಮಾಡಿರುವ ಸ್ಟಾಫ್ ನರ್ಸ್ರೊಬ್ಬರು ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್. ಪುರ ತಾಲೂಕಿನ ಕೆರೆಮನೆಯಲ್ಲಿ ನಡೆದಿದೆ.
ಮಿದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ್ದ ಚಿಕ್ಕಮಗಳೂರಿನ ಸ್ಟಾಫ್ ನರ್ಸ್ ಟಿ.ಕೆ. ಗಾನವಿ (22) ಅವರ ಅಂಗಾಂಗಗಳನ್ನು ಪೋಷಕರು ದಾನ ಮಾಡಿದ್ದಾರೆ. ಗಾನವಿ ಅವರು ಕೆಲಸದ ವೇಳೆ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಬೆಂಗಳೂರಿನ ಗ್ಯಾಸ್ಟೊರೋ ಎಂಟರಾಲಜಿ ಸೈನ್ಸಸ್ ಆ್ಯಂಡ್ ಆರ್ಗನ್ ಟ್ರಾನ್ಸ್ಪ್ಲಾಂಟ್ ಸಂಸ್ಥೆಗೆ ಕರೆತರಲಾಯಿತು.
ಈ ವೇಳೆ ವೈದ್ಯರು ಮಿದುಳು ನಿಷ್ಕ್ರಿಯವಾಗಿರುವುದಾಗಿ ತಿಳಿಸಿದರು. ಇದರಿಂದ ಪೋಷಕರು ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ತಾಯಿ ಮತ್ತು ಅಕ್ಕ ಅಂಗಾಂಗ ದಾನಕ್ಕೆ ಸಹಿ ಮಾಡುವ ಮೂಲಕ ಹಲವರಿಗೆ ಮಾದರಿಯಾದರು. ಗಾನವಿ ಅವರಿಂದ "ಲಿವರ್, ಕಿಡ್ನಿ, ಕಾರ್ನಿಯಾ ಮತ್ತು ಹಾರ್ಟ್ ವಾಲ್ ದಾನವಾಗಿ ಪಡೆಯಲಾಗಿದೆ,'' ಎಂದು ಸಂಸ್ಥೆಯ ನಿರ್ದೇಶಕ ಡಾ. ನಾಗೇಶ್ ತಿಳಿಸಿದ್ದಾರೆ.

"ಈಗಾಗಲೇ ಸಕ್ರಾ ಆಸ್ಪತ್ರೆಯ 48 ವರ್ಷದ ವ್ಯಕ್ತಿಗೆ ಯಕೃತ್, ಮಣಿಪಾಲ್ ಆಸ್ಪತ್ರೆಯ 40 ವರ್ಷದ ಮಹಿಳೆಗೆ ಬಲಭಾಗದ ಮೂತ್ರಪಿಂಡ, ಐಎನ್ಯು ಆಸ್ಪತ್ರೆಯ 35 ವರ್ಷದ ಪುರುಷನಿಗೆ ಎಡಭಾಗದ ಮೂತ್ರಪಿಂಡ ಕಸಿ ಮಾಡಲಾಗಿದೆ. ಮಣಿಪಾಲ್ ಆಸ್ಪತ್ರೆಗೆ ಹೃದಯ ನಾಳಗಳನ್ನು ಮತ್ತು ಮಿಂಟೋ ಕಣ್ಣಿನ ಆಸ್ಪತ್ರೆಗೆ ಕಾರ್ನಿಯಾಗಳನ್ನು ಕಳಿಸಿದ್ದು, ಅರ್ಹ ಮೂರು ಮಂದಿಗೆ ಕಸಿ ಮಾಡಲಾಗುವುದು,'' ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಹೃದಯ ವಿದ್ರಾವಕ ಘಟನೆಯ ನಡುವೆಯೂ ಸ್ಟಾಫ್ ನರ್ಸ್ ಗಾನವಿ ಕುಟುಂಬದವರು ತೆಗೆದುಕೊಂಡ ನಿರ್ಣಯಕ್ಕೆ ಹ್ಯಾಟ್ಸ್ ಆಫ್ ಹೇಳಲೇಬೇಕು. ಅಂಗಾಂಗ ದಾನ ಪ್ರತಿಜ್ಞೆ ತೆಗೆದುಕೊಳ್ಳುವುದಕ್ಕೆ ಗಾನವಿ ಸ್ಫೂರ್ತಿಯಾಗಿದ್ದಾರೆ. ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟೊರೋ ಎಂಟರಾಲಜಿ ಮತ್ತು ಆರ್ಗನ್ ಟ್ರಾನ್ಸ್ಪ್ಲಾಂಟ್ನಲ್ಲಿ ಇದು ಮೊದಲ ಅಂಗ ಹಿಂಪಡೆಯುವಿಕೆಯಾಗಿದೆ,'' ಎಂದು ಹೇಳಿದ್ದಾರೆ.

ಕುಟುಂಬಸ್ಥರ ಕಾರ್ಯಕ್ಕೆ ಸಚಿವ ಸಚಿವ ಸುಧಾಕರ್ ಶ್ಲಾಘನೆ
ಬದುಕಿದ್ದಾಗ ರೋಗಿಗಳ ಸೇವೆ ಮಾಡಿದ, ಸತ್ತ ಮೇಲೆ ಅಂಗಾಂಗ ಸ್ಟಾಫ್ ನರ್ಸ್ ದಾನ ಮಾಡಿದ ಘಟನೆ ಕುರಿತು ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ''ಗಾನವಿ ಅವರು ಜೀವಂತವಾಗಿದ್ದಾಗ ರೋಗಿಗಳ ಆರೈಕೆ ಮಾಡಿದರು, ಕಾಳಜಿ ವಹಿಸಿದರು. ಮರಣದ ನಂತರ ಅಂಗಾಂಗ ದಾನ ಮಾಡಿದರು. ದುರಂತ ಸಾವಿನ ನಂತರ "ಪರೋಪಕಾರಾರ್ಥಂ ಯೋ ಜೀವತಿ ಸ ಜೀವತಿ' (ಬೇರೆಯವರಿಗೋಸ್ಕರ ಬದುಕುವವರು ಮಾತ್ರ ಯಾವಾಗಲೂ ಬದುಕಿರುತ್ತಾರೆ) ಎನ್ನುವುದಕ್ಕೆ ಉದಾಹರಣೆಯಾಗಿದ್ದಾರೆ ಎಂದು ಟ್ವೀಟ್ ಮಾಡಿ ಕುಟುಂಬಸ್ಥರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಸಾವಿನಲ್ಲೂ ಸಾರ್ಥಕತೆ ಮೆರೆದ ಕಾಫಿನಾಡಿನ ಕುವರಿ
ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಕೆರೆಮನೆಯ ಗ್ರಾಮದ ಕೃಷ್ಣೇಗೌಡ- ಲೀಲಾವತಿ ದಂಪತಿಯ ಎರಡನೇ ಪುತ್ರಿ ಗಾನವಿಯಾಗಿದ್ದು, ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ನಿರ್ವಹಿಸಿದ್ದರು. ಫೆ.8ರಂದು ಕೆಲಸ ಮಾಡುವಾಗ ಜ್ಞಾನ ತಪ್ಪಿ ಕುಸಿದು ಬಿದ್ದಿದ್ದರು. ಫೆ.12ರವರೆಗೆ ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ, ಮೆದುಳು ನಿಷ್ಕ್ರಿಯ ವಾಗಿರುವುದನ್ನು ಕುಟುಂಬಸ್ಥರಿಗೆ ವೈದ್ಯರು ತಿಳಿಸಿದ ನಂತರ ಅಂಗಾಂಗ ದಾನಕ್ಕೆ ಮುಂದಾಗಿದ್ದು, ಗಾನವಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ.












Click it and Unblock the Notifications