ಚಿಕ್ಕಮಗಳೂರು: ಹಿಂದೂ ಕುಂಭಾಭಿಷೇಕಕ್ಕೆ ಮಸೀದಿಯಿಂದ ಶುಭ ಹಾರೈಕೆ
ಚಿಕ್ಕಮಗಳೂರು, ಏಪ್ರಿಲ್ 15: ಪ್ರಸ್ತುತ ಸಮಾಜದಲ್ಲಿ ಧರ್ಮ ಯುದ್ಧದ ಕಹಳೆ ಕೂಗು ಜೋರಿದೆ. ನಾವೇ ಶ್ರೇಷ್ಠ ಹಾಗೂ ಸಮಾನತೆಯ ಪಾಠದ ಮಧ್ಯೆ ಸಾವು- ನೋವು ಕೂಡ ಸಂಭವಿಸುತ್ತಿದೆ. ಆದರೆ, ಇಂತಹ ಧರ್ಮಯುದ್ಧದ ಕಾಲದಲ್ಲಿ ಮುಸ್ಲಿಂ ಸಮುದಾಯ ಮಸೀದಿ ಮುಂದೆ ಹಿಂದೂಗಳ ಕುಂಬಾಭಿಷೇಕಕ್ಕೆ ಸ್ವಾಗತ ಕೋರುವ ಫ್ಲೆಕ್ಸ್ ಹಾಕಿ ಸಮಾನತೆ ಸಾರಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರ ಮಠದಲ್ಲಿ ಆದಿ ಶಂಕರಾಚಾರ್ಯರ ಮಹಾ ಕುಂಭಾಭಿಷೇಕ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಕೊಪ್ಪ ತಾಲೂಕಿನ ಜಯಪುರದ ಬದ್ರಿಯಾ ಜುಮ್ಮಾ ಮಸೀದಿ ಮುಂದೆ ಫ್ಲೆಕ್ಸ್ ಹಾಕಿ ಕುಂಭಾಭಿಷೇಕಕ್ಕೆ ಶುಭಕೋರಿದ್ದಾರೆ. ಫ್ಲೆಕ್ಸ್ನಲ್ಲಿ ಹರಿಹರಪುರ ಮಠದ ಸ್ವಾಮೀಜಿಗಳಾದ ಸಚ್ಚಿದಾನಂದ ಸರಸ್ವತಿ ಶ್ರೀಗಳ ಫೋಟೋ ಹಾಕಿ, ಆ ಫ್ಲೆಕ್ಸ್ನ ಮಸೀದಿ ಕಾಂಪೌಂಡ್ ಮೇಲೆ ಹಾಕಿ ಕುಂಬಾಭಿಷೇಕಕ್ಕೆ ಶುಭ ಹಾರೈಸಿದ್ದಾರೆ.
ಮುಸ್ಲಿಮರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ಮೆಚ್ವುಗೆ ವ್ಯಕ್ತವಾಗುತ್ತಿದ್ದು, ಹಿಂದೂ-ಮುಸ್ಲಿಂ ಸಾಮರಸ್ಯ ಸಾರುವ ವಿಚಾರವಾಗಿದೆ ಎಂದು ಸ್ಥಳೀಯರು ಮುಸ್ಲಿಂ ಸಮುದಾಯದ ಬಗ್ಗೆ ಸಂತಸ ತೋರಿದ್ದಾರೆ.

ಒಟ್ಟಾರೆ, ಸದ್ಯ ರಾಜ್ಯದಲ್ಲಿ ಧರ್ಮ ದಂಗಲ್ ನಡೆಯುತ್ತಿದೆ. ಜಾತಿ, ಧರ್ಮ, ಹಿಜಾಬ್, ಹಲಾಲ್ ಕಟ್, ಜಟ್ಕಾ ಕಟ್ ಎಂದು ಸಮಾಜ ಹೊಡೆಯುವ ಕೆಲಸ ಕೆಲವರು ಮಾಡುತ್ತಿದ್ದಾರೆ. ಹೀಗಿರುವಾಗ ಎಲ್ಲಾ ಧರ್ಮದಲ್ಲೂ ಸಮಾನತೆ ಸಾರುವವರು ಇದ್ದಾರೆ ಎಂಬುದನ್ನು ಕಾಫಿನಾಡಿಗರು ಸಮಾನತೆ ಸಾರಿದ್ದಾರೆ. ಮಸೀದಿ ಮುಂದೆ ಮಠದ ಕಾರ್ಯಕ್ರಮ ಫೆಕ್ಸ್ ಹಾಕಿ ಸಮಾನತೆ ತೋರಿರುವುದು ನಿಜಕ್ಕೂ ಸಮಾಜ ಮೆಚ್ಚುವಂತಹದ್ದು.

ಶೃಂಗೇರಿ ದೇಗುಲದ ಸುಂದರ ನೋಟ ಕ್ಯಾಮೆರಾ ಕಣ್ಣಲ್ಲಿ ಸೆರೆ
ಗುಡುಗು-ಮಿಂಚಿನ ಸಮ್ಮಿಲನದಿಂದ ಹಿಂದೆಂದೂ ಕಾಣದ ರೀತಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾಂಬೆ ದೇಗುಲದ ಸುಂದರ ನೋಟ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಕಳೆದ ಎರಡು ದಿನಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ನಿನ್ನೆ ಮಳೆ ಆರಂಭಕ್ಕೂ ಮುನ್ನ ಆರಂಭವಾದ ಗುಡುಗು-ಸಿಡಿಲಿನ ಮಧ್ಯೆ ಶೃಂಗೇರಿಯ ವಿದ್ಯಾಶಂಕರ ದೇಗುಲದ ದೃಶ್ಯಕಾವ್ಯ ನೋಡುಗರ ಮನಸೊರೆಗೊಂಡಿದ್ದು, ಶಾರದಾಂಬೆ ದರ್ಶನಕ್ಕೆ ಬಂದಿದ್ದ ಭಕ್ತರೊಬ್ಬರು ಅಪರೂಪದ ಚಿತ್ರವನ್ನು ಸೆರೆ ಹಿಡಿದಿದ್ದಾರೆ.

ಶಾರದಾಂಬೆ ದೇಗುಲದ ಪಕ್ಕದಲ್ಲಿರುವ ವಿದ್ಯಾಶಂಕರ ದೇಗುಲದ ಮೇಲ್ಭಾಗದಲ್ಲಿ ಮಿಂಚಿನಿಂದ ಕೃತಕವಾಗಿ ಅಲಂಕರಿಸಿದಂತಿದೆ. ಪ್ರಕೃತಿಯೇ ಮಿಂಚಿನಿಂದ ಶಾರದಾಂಬೆ ಮತ್ತು ವಿದ್ಯಾಶಂಕರ ಮಧ್ಯೆ ದೇಗುಲಕ್ಕೆ ಲೈಟಿಂಗ್ ಸೌಲಭ್ಯ ಕಲ್ಪಿಸಿದಂತೆ ಭಾಸವಾಗಿದೆ. ದೇಗುಲದ ಮೇಲ್ಭಾಗದಲ್ಲೇ ಮಿಂಚು ಸಂಭವಿಸಿದ್ದರಿಂದ ಕಲ್ಲುಗಳಿಂದಲೇ ನಿರ್ಮಾಣಗೊಂಡಿರುವ ಪುರಾತನ ಶಾರದಾಂಬೆ ದೇಗುಲದ ಸೌಂದರ್ಯ ಕೂಡ ಮತ್ತಷ್ಟು ಇಮ್ಮಡಿಗೊಂಡಿದೆ. ಇದನ್ನು ಕಂಡ ಭಕ್ತರು ಸಂತಸಪಟ್ಟಿದ್ದಾರೆ. ಮಲೆನಾಡಿನಲ್ಲಿ ಎರಡು ದಿನಗಳನ್ನು ಮಳೆ ಆರಂಭವಾಗಿದ್ದು, ಮಳೆ ಆರಂಭವಾದ ಹಿನ್ನೆಲೆಯಲ್ಲಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.












Click it and Unblock the Notifications