ದೇವರಮನೆ: ಕೊಲೆ ಮಾಡಿ ನಾಪತ್ತೆಯಾಗಿದ್ದ ಆರೋಪಿಗಳು ಪೊಲೀಸರ ಬಲೆಗೆ
ಚಿಕ್ಕಮಗಳೂರು, ಜೂನ್ 22: ಪ್ರವಾಸಿತಾಣದಲ್ಲಿ ಕೊಲೆ ಮಾಡಿ ನಾಪತ್ತೆಯಾಗಿದ್ದ ಆರೋಪಿಗಳನ್ನು ಬಣಕಲ್ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ಮೂಲದ ರಿಜ್ವಾನ್ ಮತ್ತು ಝೈನುಲ್ಲಾ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ ಮಹಮ್ಮದ್ ಸಾವದ್ ಕೊಲೆಯಾಗಿರುವ ದುರ್ದೈವಿ. ಆರೋಪಿಗಳು ಜೂನ್ 8ರಂದು ಕೊಲೆ ಮಾಡಿ ದೇವರಮನೆ ಸಮೀಪ ಮೃತದೇಹ ಎಸೆದು ಪರಾರಿಯಾಗಿದ್ದರು. ರಸ್ತೆಬದಿಯ ಕಾಲುವೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ ಬಣಕಲ್ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಮೂಡಿಗೆರೆ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಕೊಲೆಗೀಡಾದ ಸಾವದ್ ಮಾದಕ ವ್ಯಸನಿಯಾಗಿದ್ದು ಮಾದಕವಸ್ತು ಮಾರಾಟ ದಂಧೆಯಲ್ಲಿದ್ದ ಎನ್ನುವ ಆರೋಪವಿದೆ. ಗಾಂಜಾ ವ್ಯವಹಾರದಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಕಾರು-ಕ್ಯಾಂಟರ್ ನಡುವೆ ಭೀಕರ ಅಪಘಾತ: ಓರ್ವ ಸಾವು
ಚಿಕ್ಕಮಗಳೂರು: ಕಾರು ಹಾಗೂ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಸಂಕೇನಹಳ್ಳಿ ಬಳಿಯ ತಿರುವಿನಲ್ಲಿ ನಡೆದಿದೆ. ಚಿಕ್ಕಮಗಳೂರು ಮೂಲದ ಹನಿಕ್ (19) ಮೃತ ಯುವಕ
ಹನಿಕ್ ಹಾಗೂ ಆತನ ಸ್ನೇಹಿತ ಚಿಕ್ಕಮಗಳೂರಿದಿಂದ ಹಾಸನದ ಕಡೆಗೆ ಕೆಎ-18-ಪಿ-4442 ನಂಬರ್ನ ಕಾರಿನಲ್ಲಿ ಬರುತ್ತಿದ್ದರು, ಈ ವೇಳೆ ಹಾಸನದಿಂದ ಬೇಲೂರು ಕಡೆಗೆ ಹೋಗುತ್ತಿದ್ದ ಕೆಎ-12-ಡಿ-4142 ನಂಬರ್ನ ಕ್ಯಾಂಟರ್ಗೆ ಕಾರು ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಹನಿಕ್ ಹಾಗೂ ಆತನ ಸ್ನೇಹಿತ ಗಂಭೀರ ಗಾಯಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಹನಿಕ್ ಸಾವನ್ನಪ್ಪಿದ್ದು, ಆತನ ಗೆಳೆಯನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಅಪಘಾತದಿಂದ ಕೆಲ ಕಾಲ ಘಟನಾ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಆಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಟ್ರಾಫಿಕ್ ತೆರವುಗೊಳಿಸಿದ್ದಾರೆ. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.












Click it and Unblock the Notifications