ಮಳೆಯಿಂದ ಬದುಕು ಕಳೆದುಕೊಂಡ ಮಲೆಮನೆ ಜನ: ಮೂರು ವರ್ಷವಾದರೂ ಜೀವನ ಮೂರಾಬಟ್ಟೆ
ಚಿಕ್ಕಮಗಳೂರು, ಆಗಸ್ಟ್ 10: 2019ರ ಅಗಸ್ಟ್ 9ರಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಸುರಿದ ಮಳೆಯನ್ನು ನೆನೆಯೋದು ಬೇಡ. ಅದು ಮಳೆ ಅಲ್ಲ. ವರುಣ ದೇವನ ರಾಕ್ಷಸಿತನ. ಒಂದೇ ರಾತ್ರಿಗೆ ಸುರಿದ ಮಳೆ ಮಲೆನಾಡನ್ನು ಅಲ್ಲೋಲ-ಕಲ್ಲೋಲ ಮಾಡಿತ್ತು.
ಅಂದು ಭೀಕರ ಮಳೆಯ ಅಬ್ಬರಕ್ಕೆ ಮಲೆಮನೆ ಗ್ರಾಮದ 6 ಮನೆ, ಎರಡು ದೇವಸ್ಥಾನ ಹಾಗೂ ಅಂದಾಜು 40 ಎಕರೆ ಜಮೀನು ಕಣ್ಣೆದುರೇ ತರಗೆಲೆಯಂತೆ ಕೊಚ್ಚಿ ಹೋಗಿತ್ತು. ಗುಡ್ಡಗಳು ಮಳೆ ನೀರಿನಲ್ಲಿ ತೇಲಿ ಬಂದಿದ ಪರಿಣಾಮ ಜನ ಮನೆ ಸೇರಿದಂತೆ ಮನೆ-ಮಠ, ಆಸ್ತಿ-ಪಾಸ್ತಿಯನ್ನ ಕಳೆದುಕೊಂಡಿದ್ದರು. ರಾತ್ರೋರಾತ್ರಿ ಉಟ್ಟ ಬಟ್ಟೆಯಲೇ ಓಡಿ ಬಂದು ಜೀವ ಉಳಿಸಿಕೊಂಡಿದ್ದರು. ಅಂದಿನಿಂದಲೂ ಹೊಸ ಜೀವನ ಕಟ್ಟಿಕೊಳ್ಳಲು ಹೋರಾಟುತ್ತಿದ್ದಾರೆ.

ಬಾಡಿಗೆ ಮನೆಗೆ ಹೋಗಿ ಹಣ ಕೊಡುತ್ತೇವೆ ಎಂದು ಸರ್ಕಾರ ತಿಳಿಸಿತ್ತು. ಒಂದು ವರ್ಷದೊಳಗೆ ಮನೆ, ಬದಲಿ ಜಮೀನು ಕೊಟ್ಟು ಹೊಸ ಬದುಕ್ನು ಕಟ್ಟಿಕೊಡುತ್ತೇವೆ ಎಂದು ಹೇಳಿದ್ದ ಜನಪ್ರತಿನಿಧಿಗಳು ಬಂದ ದಾರಿಗೆ ಸುಂಕವಿಲ್ಲ ಎಂದು ಸುಮ್ಮನಾಗಿದ್ದರು. ಅಂದು ಸರ್ಕಾರ ಕೊಟ್ಟ ಮಾತನ್ನು ಮರೆತಿದ್ದರಿಂದ ಜನ ಇಂದಿಗೂ ನಿರ್ಗತಿಕರಾಗೇ ಇದ್ದಾರೆ. ಸಮರ್ಪಕವಾಗಿ ಸರ್ಕಾರ ಬಾಡಿಗೆ ಹಣವನ್ನೂ ಕೊಡಲಿಲ್ಲ.
ಅಂದಿನ ಬಿಜೆಪಿ ಸರ್ಕಾರದ ದಾರಿ ಕಾದು ನೊಂದಿರುವ ಜನ ಇದೀಗ ಗ್ಯಾರಂಟಿಯ ಕಾಂಗ್ರೆಸ್ ಸರ್ಕಾರದ ದಾರಿಯನ್ನೂ ಕಾಯುತ್ತಿದ್ದಾರೆ. ಪ್ರವಾಹದ ನಂತರ ಇಲ್ಲಿಗೆ ಬಂದಿರುವ ಜನಪ್ರತಿನಿಧಿಗಳ ಸಂಖ್ಯೆ ಒಂದೆರಡಲ್ಲ. ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಆರ್.ಆಶೋಕ್, ಮಾಧುಸ್ವಾಮಿ, ಸಿ.ಟಿ.ರವಿ, ಶೋಭಾ ಕರಂದ್ಲಾಜೆ, ಅಂಗಾರ ಸೇರಿ ಎಲ್ಲರೂ ಬಂದಿದ್ದರು. ಆದರೆ ಯಾವುದೇ ಉಪಯೋಗ ಆಗಿಲ್ಲ.

ಬಂದವರೆಲ್ಲಾ ಮಲೆಮನೆ ಸಂತ್ರಸ್ಥ ಗ್ರಾಮಸ್ಥರಿಗೆ ಪರ್ಯಾಯ ಬದುಕು ಕಟ್ಟಿಕೊಡುವ ಭರವಸೆ ನೀಡಿದ್ದರು. ಮಾತಿನಲ್ಲೇ ಸಮಾಧಾನ ಹೇಳಿದ್ದರಿಂದ ಸ್ಥಳೀಯರು ಶೀಘ್ರದಲ್ಲೇ ಹೊಸ ಬದುಕಿನ ಕನಸು ಕಂಡಿದ್ದರು. ಆದರೆ, ಅಧಿಕಾರಿಗಳು ಹಾಗೂ ರಾಜಕಾರಣಿಗಳ ಅಂದಿನ ಸಮಾಧಾನದ ಮಾತು ಇಂದು ಕಾರ್ಯರೂಪಕ್ಕೆ ಬರಲೇ ಇಲ್ಲ. ಮೂರು ವರ್ಷ ಕಳೆದರೂ ಅವರಿಗೆ ಇಂದಿಗೂ ಯಾವುದೇ ಸೌಲಭ್ಯ ಸಿಕ್ಕಿಲ್ಲ.
ನೊಂದವರು ತಾಲೂಕು ಕಚೇರಿಯಲ್ಲಿ ವಿಷ ಕುಡಿಯೋಕು ಮುಂದಾಗಿದ್ದರು. ಅಂದಿನ ಮಾತಿನ ಸರ್ಕಾರ ಹೋಗಿ ಇಂದು ಗ್ಯಾರಂಟಿ ಸರ್ಕಾರ ಬಂದಿದೆ. ಎಲ್ಲಾ ಇದ್ದವರಿಗೆ ಎಲ್ಲಾ ಉಚಿತ ಕೊಡುತ್ತಿರುವ ಸರ್ಕಾರ ಎಲ್ಲಾ ಇದ್ದು ಎಲ್ಲಾ ಕಳೆದುಕೊಂಡ ನಮಗೆ ಕೊಡಲ್ವಾ ಎಂದು ಮಲೆಮನೆ ನಿರ್ಗತಿಕರು ಸರ್ಕಾರದ ದಾರಿ ಕಾಯುತ್ತಿದ್ದಾರೆ. ಆದರೀಗ ಜಿಲ್ಲಾಡಳಿತ ಬೈರಾಪುರ ಗ್ರಾಮದಲ್ಲಿ ಜಾಗ ಗುರುತು ಮಾಡಿದೆ. ಆದರೆ ವಾರ್ಷಿಕ 250-300 ಇಂಚು ಮಳೆ ಹಾಗೂ ಯತೇಚ್ಛ ಕಾಡುಪ್ರಾಣಿಗಳ ಹಾವಳಿಯಿಂದ ಜನ ಅಲ್ಲಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.
ಒಟ್ಟಾರೆ, 2019ರ ಮಹಾಮಳೆ ಮಲೆಮನೆ ಗ್ರಾಮಸ್ಥರ ಬದುಕನ್ನು ಅಕ್ಷರಶಃ ಮೂರಾಬಟ್ಟೆಯನ್ನಾಗಿಸಿತ್ತು. ಅದರಲ್ಲೂ ಮಲೆಮನೆ ಗ್ರಾಮದ 5 ಮನೆಗಳು, ಸುಮಾರು 40 ಎಕರೆ ಪ್ರದೇಶ ಸಂಪೂರ್ಣ ಕೊಚ್ಚಿಹೋಗಿತ್ತು. ಒಂದೇ ರಾತ್ರಿಗೆ ಎಲ್ಲವನ್ನೂ ಕಳೆದುಕೊಂಡ ಜನಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದ್ದ ಜನಪ್ರತಿನಿಧಿಗಳು ಹಾಗೂ ಸರ್ಕಾರ ಸಂತ್ರಸ್ಥರಿಗೆ ಭರವಸೆ ನೀಡಿದ್ದೇ ಹೆಚ್ಚಾಗಿದೆ ವಿನಃ, ಸೌಲಭ್ಯ ಕಲ್ಪಸಿದ್ದು ತುಂಬಾ ಕಡಿಮೆಯಾಗಿದೆ.












Click it and Unblock the Notifications