ಆನೆಗಳನ್ನು ಕಾಡಿಗೆ ಓಡಿಸಲು ಡಿಜೆ ಮೊರೆ ಹೋದ ರೈತರು!
ಚಿಕ್ಕಮಗಳೂರು, ಮಾರ್ಚ್ 03; ಗಜಪಡೆಗಳ ನಿರಂತರ ದಾಳಿಗೆ ರೈತರು ಹೈರಾಣಾಗಿದ್ದಾರೆ. ಅಡಿಕೆ, ಬಾಳೆ ಬೆಳೆಯನ್ನು ನಾಶ ಮಾಡುವ ಕಾಡಾನೆಗಳ ಆರ್ಭಟದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಾಡಾನೆಗಳನ್ನು ಮರಳಿ ಕಾಡಿಗಟ್ಟಲು ಡಿಜೆ ಸೌಂಡ್ ಮೊರೆ ಹೋಗಿದ್ದಾರೆ. ಕಾಫಿನಾಡು ಚಿಕ್ಕಮಗಳೂರಿನ ರೈತರು.
ರೈತರಿಗೆ ಪ್ರಕೃತಿಯಿಂದ ಬೆಳೆ ಉಳಿಸಿಕೊಳ್ಳುವುದಕ್ಕಿಂತ ಕಾಡಾನೆ, ಕಾಡುಪ್ರಾಣಿಗಳಿಂದ ಬೆಳೆ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಅಧಿಕಾರಿಗಳಿಗೆ ಪತ್ರ ಮೇಲೆ ಪತ್ರ ಬರೆದರೂ ರೈತರಿಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಇದೀಗ ಆನೆ ಹಾವಳಿಗೆ ತಡೆ ಹಾಕಲು ರೈತರು ಹೊಸ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಇದರಿಂದಾಗಿ ಆನೆ ಹಾವಳಿಯೂ ತಕ್ಕಮಟ್ಟಿಗೆ ಕಡಿಮೆಯಾಗಿದೆ.
ಗದ್ದೆ, ತೋಟಗಳಲ್ಲಿ ಹಗಲು ರಾತ್ರಿ ಆನೆ ಬಂತು, ಈ ಕಡೆ ಬಂತು, ಆ ಕಡೆ ಬಂತು ಎಂದು ಜನರು ಕೂಗುವುದು, ಪಟಾಕಿ ಸಿಡಿಸುವುದು ಸಾಮಾನ್ಯವಾಗಿತ್ತು. ಈಗ ಡಿಜೆ ಸಂಗೀತದ ಮೂಲಕ ಆನೆ ಓಡಿಸಲು ಆರಂಭಿಸಿದ್ದಾರೆ. ಇದರಿಂದ ಕಾಡಾನೆಗಳ ಹಾವಳಿ ತಪ್ಪುತ್ತದೆ ಎನ್ನುವುದು ರೈತರ ನಂಬಿಕೆ.
ಚಿಕ್ಕಮಗಳೂರು ತಾಲೂಕಿನ ಬೀಕನಹಳ್ಳಿ, ಹಂಪಾಪುರದಲ್ಲಿ ರೈತರು ಆನೆ ಹಾವಳಿಯಿಂದ ಕಂಗೆಟ್ಟಿದ್ದಾರೆ. ರೈತರು ಈಗ ಹೊಲ, ಗದ್ದೆ, ತೋಟಗಳಲ್ಲಿ ಮೈಕ್ ಸೆಟ್, ಡಿಜೆ, ಸಿಸ್ಟಮ್ ಇಟ್ಟು ಆನೆ ಓಡಿಸುವುದಕ್ಕೆ ಮುಂದಾಗುತ್ತಿದ್ದಾರೆ. ಡಿಜೆ ಸಂಗೀತದಿಂದಾಗಿ ಆನೆ ಹಾವಳಿ ತಕ್ಕ ಮಟ್ಟಿಗೆ ಸುಧಾರಿಸಿದೆ. ಆದರೆ ಮುಂದೆ ಗೊತ್ತಿಲ್ಲ ಎಂದು ರೈತರು ಹೇಳುತ್ತಿದ್ದಾರೆ.

ಕಾಡಾನೆಗಳ ಆರ್ಭಟ ಹೆಚ್ಚಾಗಿದೆ
ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆಗಳ ಅಬ್ಬರ ಹೆಚ್ಚಾಗಿತ್ತು. ಹಲವು ವರ್ಷಗಳಿಂದಲೂ ರೈತರಿಗೆ ಆನೆಗಳು ಕಾಟ ಕೊಡುತ್ತಿವೆ. ಕಾಡಂಚಿನ ಹಳ್ಳಿಗಳಲ್ಲಿಯೇ ಠಿಕಾಣಿ ಹೂಡಿರುವ ಆನೆಯಿಂದ ನಾಲ್ಕೈದು ಜನರು ಪ್ರಾಣವನ್ನು ಕೂಡ ಕಳೆದುಕೊಂಡಿದ್ದಾರೆ.
ಹಂಪಾಪುರ, ಬೀಕನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆನೆ ಹಾವಳಿ ಮಿತಿ ಮೀರುತ್ತಿದೆ. ವಾರಕ್ಕೆರಡು ಬಾರಿ ಆನೆಗಳು ಪ್ರತ್ಯಕ್ಷವಾಗಿ ಬೆಳೆಗಳನ್ನು ನಾಶ ಪಡಿಸುವುದು ಸಾಮಾನ್ಯ ಎಂಬಂತಾಗಿದೆ. ಹಾಗಾಗಿ, ಗುಡ್ಡಗಳ ಪಕ್ಕದಲ್ಲಿರುವ ಜಮೀನುಗಳಲ್ಲಿ ಕಾಡಾನೆಗಳ ದಾಳಿಯಾಗದಂತೆ ರೈತರು ಡಿಜೆ ಸೌಂಡ್ ಮೊರೆ ಹೋಗಿದ್ದಾರೆ.

ತೋಟದಲ್ಲಿ ಮೈಕ್, ಸ್ಪೀಕರ್
ಬೆಟ್ಟ-ಗುಡ್ಡದ ಸುತ್ತಮುತ್ತಲಿನ ಹೊಲ, ಗದ್ದೆ, ತೋಟಗಳಲ್ಲಿ 30 ಹೆಚ್ಚು ಮೈಕ್ಗಳನ್ನು ಹಾಕಿದ್ದಾರೆ, ದೊಡ್ಡ ದೊಡ್ಡ ಸ್ಪೀಕರ್ಗಳನ್ನು ಇಟ್ಟಿದ್ದಾರೆ. ಕೆಲವು ಕಡೆ ಸಂಜೆ 6 ಗಂಟೆಯಾಗುತ್ತಿದ್ದಂತೆ ಡಿಜೆ ಸೌಂಡ್ ಅನ್ ಆಗುತ್ತದೆ. ಮೈಕಿನಲ್ಲಿ ಜನ ಮಾತನಾಡುವ ಹಾಗೆ, ಪ್ರಾಣಿಗಳು ಕೂಗುವ ಹಾಗೆ, ಪಟಾಕಿ ಸಿಡಿಯುವಂತೆ ನಿರಂತರ ಸೌಂಡ್ ಬರುತ್ತದೆ. ಈ ಶಬ್ಧಕ್ಕೆ ಹೆದರುವ ಕಾಡಾನೆಗಳು ಜಮೀನಿನತ್ತ ಬರುವುದಿಲ್ಲ ಎನ್ನುವುದು ರೈತರ ನಂಬಿಕೆ. ಸದ್ಯಕ್ಕೆ ಈ ಐಡಿಯಾ ಕೆಲಸ ಮಾಡುತ್ತಿದೆ. ಆನೆಗಳು ಮುಂದೇನು ಮಾಡುತ್ತವೆ? ತಿಳಿದಿಲ್ಲ.

ಒನ್ ಇಂಡಿಯಾ ಜೊತೆ ಮಾತುಕತೆ
ಒನ್ ಇಂಡಿಯಾ ಜೊತೆ ಈ ಕುರಿತು ಮಾತನಾಡಿದ ರೈತ ಸತೀಶ್, "ಈ ಭಾಗದಲ್ಲಿ ಆನೆಗಳ ಕಾಟ ಮಿತಿಮೀರಿದೆ. ಅರಣ್ಯಾಧಿಕಾರಿಗಳಿಗೆ ಎಷ್ಟು ಮನವಿ ಮಾಡಿದ್ದರು ಆಲಿಸುತ್ತಿಲ್ಲ. ಹೀಗೆ ಆದರೆ ತೋಟಗಳನ್ನು ಉಳಿಸಿಕೊಳ್ಳೋದು ಕಷ್ಟವಾಗುತ್ತದೆ ಎಂದು ನಾವೇ ಹೊಸ ಪ್ಲಾನ್ ಮಾಡಿದೆವು. ಡಿಜೆ ಸೌಂಡ್ ಹಾಕಿದ್ದೇವೆ. ಇದರಿಂದ ಆನೆಗಳ ಹಾವಳಿ ಕೊಂಚ ಕಡಿಮೆ ಆಗಿದೆ. ನಾವು ಪ್ರಾಣಭಯದಲ್ಲೇ ಓಡಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ, ತೋಟ ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯಿಂದ ಹೊಸ ಯೋಜನೆ ರೂಪಿಸಿದೆವು. ಇದು ತಾತ್ಕಾಲಿಕ, ಮುಂದೇನು ಅಂತಾ ಗೊತ್ತಿಲ್ಲ" ಎಂದರು.

ಮೈಕ್ ಕಿತ್ತು ಹಾಕಿದರೆ ಮುಂದೇನು?
ಕಾಡಾನೆಗಳಿಂದ ನಲುಗಿ ಹೋಗಿರುವ ರೈತರು ಅಧಿಕಾರಿಗಳಿಗೆ ಶಾಶ್ವತ ಪರಿಹಾರ ಒದಗಿಸಿ ಎಂದು ಸಾಕಷ್ಟು ಬಾರಿ ಮನವಿ ಮಾಡಿಕೊಂಡರು ಅಧಿಕಾರಿಗಳು ಸ್ಪಂದಿಸಿಲ್ಲ. ಈ ತಾತ್ಕಾಲಿಕ ಐಡಿಯಾ ಎಷ್ಟು ದಿನ ಕೆಲಸ ಮಾಡುತ್ತದೆ ತಿಳಿದಿಲ್ಲ. ಆನೆಗಳೂ ಬುದ್ಧಿವಂತ ಪ್ರಾಣಿಗಳು. ಮೈಕ್ ನಮ್ಮನ್ನು ಓಡಿಸೋಕೆ ಹಾಕಿರುವುದು ಎಂಬುದನ್ನು ತಿಳಿದು ಅದರ ಮೇಲೆಯೂ ದಾಳಿ ಮಾಡುವುದಲ್ಲಿ ಸಂಶಯವೇ ಇಲ್ಲ. ಹಾಗಾಗಿ, ಅರಣ್ಯ ಇಲಾಖೆ ವೈಜ್ಞಾನಿಕವಾಗಿ ಕಾಡುಪ್ರಾಣಿಗಳು, ಆನೆಗಳಿಂದ ಜನರ ಜೀವ ಹಾಗೂ ಬೆಳೆ ಉಳಿಸುವುದಕ್ಕೆ ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.












Click it and Unblock the Notifications