ನಿಖಿಲ್ ಅನ್ನು ಸೋಲಿಸಲು ಷಡ್ಯಂತ್ರ ರಚಿಸಲಾಗಿದೆ: ಕುಮಾರಸ್ವಾಮಿ
ಚಿಕ್ಕಮಗಳೂರು, ಏಪ್ರಿಲ್ 05: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರ ಹಂತದಲ್ಲಿದ್ದ ಜೆಡಿಎಸ್-ಕಾಂಗ್ರೆಸ್ ನಡುವಿನ ಅಸಹನೆ, ಮುಖಂಡರ ಮಟ್ಟಕ್ಕೂ ಬಂದಿದೆ ಎಂಬುದು ಕುಮಾರಸ್ವಾಮಿ ಅವರ ಇಂದಿನ ಹೇಳಿಕೆಯಿಂದ ಜಾಹೀರಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಲು ಮಂಡ್ಯದಲ್ಲಿ ಚಕ್ರವ್ಯೂಹ ರಚಿಸಲಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಅವರು ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.
ಬಿಜೆಪಿ, ರೈತ ಸಂಘ ಎಲ್ಲರೂ ಸೇರಿ ನಿಖಿಲ್ ಅನ್ನು ಸೋಲಿಸಲು ಯತ್ನಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದು, ಬಿಜೆಪಿ,ರ ಐತ ಸಂಘದ ಜೊತೆಗೆ ಕಾಂಗ್ರೆಸ್ ಹೆಸರನ್ನೂ ಸೇರಿಸಿದ್ದಾರೆ. ಮಂಡ್ಯದಲ್ಲಿ ನಿಖಿಲ್ ವಿರುದ್ಧವಾಗಿ ಕಾಂಗ್ರೆಸ್ ಕೆಲಸ ಮಾಡುತ್ತಿದೆ ಎಂದು ಕುಮಾರಸ್ವಾಮಿ ನೇರವಾಗಿ ಆರೋಪ ಮಾಡಿದ್ದಾರೆ.

ಮಂಡ್ಯದಲ್ಲಿ ದಿನೇ-ದಿನೇ ಸುಮಲತಾ ಅವರು ಶಕ್ತಿ ಹೆಚ್ಚಿಸಿಕೊಳ್ಳುವುದು ಅವರಿಗೆ ಆತಂಕ ತಂದಿದ್ದು, ಸ್ಥಳೀಯ ಕಾಂಗ್ರೆಸ್ ಮುಖಂಡರು ಸುಮಲತಾ ಬೆಂಬಲಕ್ಕೆ ನಿಂತಿರುವುದು ಆಕ್ರೋಶ ತರಿಸಿದೆ. ಮಂಡ್ಯ ಸ್ಥಳೀಯ ಮುಖಂಡರನ್ನು ತಮ್ಮತ್ತ ಸೆಳೆದುಕೊಳ್ಳುವ ಯತ್ನವನ್ನೂ ಕಾಂಗ್ರೆಸ್ ಮುಖಂಡರು ಮಾಡುತ್ತಿಲ್ಲ ಎನ್ನುವುದು ಕುಮಾರಸ್ವಾಮಿ ಅವರ ಅಳಲಾಗಿದೆ.
ಕಳೆದ ಮೂರು ತಿಂಗಳಿನಿಂದಲೂ ನಿಖಿಲ್ ವಿರುದ್ಧ ಷಡ್ಯಂತ್ರ ನಡೆಸಲಾಗಿತ್ತು, ಆದರೆ ಸ್ಥಳೀಯ ಪರಿಸ್ಥಿತಿ ಭಿನ್ನವಾಗಿದೆ, ಯಾರು ಕ್ಷೇತ್ರಕ್ಕಾಗಿ ದುಡಿಯುತ್ತಾರೆ ಎಂಬುದು ಜನರಿಗೆ ಗೊತ್ತಿದೆ, ಅವರ ಕೈಯನ್ನು ಮಂಡ್ಯದ ಜನತೆ ಬಿಡುವುದಿಲ್ಲ ಎಂದು ಅವರು ಹೇಳಿದರು.
ಆದರೆ ಈ ಚಕ್ರವ್ಯೂಹವನ್ನು ಮೆಟ್ಟಿ ನಿಲ್ಲುವ ಶಕ್ತಿಯನ್ನು ಮಂಡ್ಯ ಜನತೆ ನೀಡುವ ವಿಶ್ವಾಸವಿದೆ ಎಂದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಿಖಿಲ್ನನ್ನು ಸೋಲಿಸಲು ರೂಪಿಸಿರುವ ಚಕ್ರವ್ಯೂಹಕ್ಕೆ ಮೇ.23ರಂದು ಚುನಾವಣಾ ಫಲಿತಾಂಶ ಹೊರಬಂದ ನಂತರ ಸೂಕ್ತ ಉತ್ತರ ನೀಡುವುದಾಗಿ ಕುಮಾರಸ್ವಾಮಿ ಹೇಳಿದರು.
ನಿನ್ನೆ ಮಂಡ್ಯಕ್ಕೆ ಬಂದಿದ್ದ ದೇವೇಗೌಡ ಅವರು ಸಹ ಕ್ಷೇತ್ರದಲ್ಲಿನ ಪರಿಸ್ಥಿತಿ ಬಗ್ಗೆ ಬಹಿರಂಗವಾಗಿಯೇ ಆತಂಕ ವ್ಯಕ್ತಪಡಿಸಿದ್ದರು. ಸಿದ್ದರಾಮಯ್ಯ ಅವರೇ ಬಂದರೂ ಇಲ್ಲಿನ ಪರಿಸ್ಥಿತಿ ಬದಲಾವಣೆ ಮಾಡಲಾಗುವುದಿಲ್ಲ ಎಂದು ದೇವೇಗೌಡ ಅವರು ಹೇಳಿದ್ದರು. ಇಂದು ಕುಮಾರಸ್ವಾಮಿ ಅವರು ಸಹ ಇದೇ ರೀತಿಯ ಮಾತುಗಳನ್ನು ಹೇಳಿದರು.












Click it and Unblock the Notifications