ಸಾರಿಗೆ ನಿಗಮ ನಷ್ಟದಲ್ಲಿರುವ ಸಮಯದಲ್ಲಿ ಪ್ರತಿಭಟನೆ ಸರಿಯಲ್ಲ: ಶಾಸಕ ಚಂದ್ರಪ್ಪ
ಚಿಕ್ಕಮಗಳೂರು, ಏಪ್ರಿಲ್ 6: ಕೊರೊನಾ ಕಾರಣದಿಂದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಭಾರೀ ನಷ್ಟದಲ್ಲಿದ್ದರೂ ಸಾರ್ವಜನಿಕರ ಪ್ರಯಾಣಕ್ಕೆ ಕಿಂಚಿತ್ತು ತೊಂದರೆಯಾಗಬಾರದೆಂಬ ಉದ್ದೇಶದಿಂದ ಸಾರಿಗೆ ಸೇವೆಯನ್ನು ನಿಗಮ ಸಮರ್ಪಕವಾಗಿ ಒದಗಿಸಲು ಮುಂದಾಗಿದೆ.
ಇಂತಹ ಸಂದರ್ಭದಲ್ಲಿ ನಿಗಮದ ನೌಕರರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆಗೆ ಕರೆ ನೀಡಿರುವುದು ಸರಿಯಲ್ಲ. ಸಂಸ್ಥೆಯ ನೌಕರರನ್ನು ಕೆಲ ಸಂಘಟನೆಗಳ ಮುಖಂಡರು ದಾರಿ ತಪ್ಪಿಸಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಚಂದ್ರಪ್ಪ ತಿಳಿಸಿದರು.
ಮಂಗಳವಾರ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿರುವ ಚಿಕ್ಕಮಗಳೂರು ಪ್ರಾದೇಶಿಕ ಸಾರಿಗೆ ವಿಭಾಗದ ನಿಯಂತ್ರಣಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮಾರ್ಚ್ನಲ್ಲಿ ಕೋವಿಡ್ ಕಾರಣಕ್ಕೆ ಲಾಕ್ಡೌನ್ ಘೋಷಣೆಯಾಗಿದ್ದರಿಂದ ರಾಜ್ಯ ರಸ್ತೆ ಸಾರಿಗೆ ನಿಗಮದ ಎಲ್ಲ ವಿಭಾಗಗಳೂ ನಷ್ಟದಲ್ಲಿವೆ.

ಚಿಕ್ಕಮಗಳೂರು ಪ್ರಾದೇಶಿಕ ಸಾರಿಗೆ ವಿಭಾಗಕ್ಕೆ ಕಳೆದ ವರ್ಷ 43 ಕೋ. 76 ಲಕ್ಷ ರೂ. ನಷ್ಟವಾಗಿದ್ದರೇ, ಈ ಸಾಲಿನಲ್ಲಿ 64 ಕೋ. ರೂ. ನಷ್ಟವಾಗಿದೆ. ಇದೇ ರೀತಿ ರಾಜ್ಯದ ಎಲ್ಲ ಸಾರಿಗೆ ವಿಭಾಗಗಳು ಸೇರಿ ನಿಗಮಕ್ಕೆ ಕಳೆದ 2020ರ ಮಾರ್ಚ್ನಿಂದ ಇದುವರೆಗೆ ಒಟ್ಟಾರೆ 3200 ಕೋ. ರೂ. ನಷ್ಟವಾಗಿದೆ ಎಂದರು.
ಸಾರಿಗೆ ನಿಗಮದಲ್ಲಿ 3074 ಮಂದಿ ಚಾಲಕರು, ನಿರ್ವಾಹಕರು ಹಾಗೂ ನೌಕರರು ಇದ್ದಾರೆ. ಕಳೆದ ವರ್ಷ 218 ಕೋ. ರೂ. ಆದಾಯ ಬಂದಿದ್ದರೇ, 262 ಕೋ. ರೂ. ನಷ್ಟವಾಗಿದೆ. 43 ಕೋ. ರೂ. ಹೆಚ್ಚುವರಿ ನಷ್ಟವಾಗಿದೆ. 2021-22ರ ಸಾಲಿನಲ್ಲಿ ಕೇವಲ 117 ಕೋ. ರೂ. ಆದಾಯ ಬಂದಿದ್ದು, 180 ಕೋ. ರೂ. ಖರ್ಚು ವೆಚ್ಚ ಆಗಿದೆ.
ಸಂಸ್ಥೆ ಭಾರೀ ನಷ್ಟದಲ್ಲಿದ್ದರೂ ಕೂಡ ಸರಕಾರ ಸಾರ್ವಜನಿಕರ ಹಿತದೃಷ್ಟಿಯಿಂದ ಸರಕಾರಿ ಸಾರಿಗೆ ಸೇವೆಯನ್ನು ಸಮರ್ಪಕವಾಗಿ ಒದಗಿಸುವ ನಿಟ್ಟಿನಲ್ಲಿ ರಾಜ್ಯ, ಹೊರರಾಜ್ಯ ಸೇರಿದಂತೆ ಎಲ್ಲ ಮಾರ್ಗಗಳಲ್ಲೂ ಸರಕಾರಿ ಬಸ್ಗಳ ಸಂಚಾರ ನಿರಂತರವಾಗಿ ನಡೆಯುತ್ತಿದೆ ಎಂದ ಅವರು, ಕರ್ನಾಟಕ ರಸ್ತೆ ಸಾರಿಗೆ ನಿಗಮ ನಷ್ಟದಲ್ಲಿರುವ ಸಂಸ್ಥೆಯಾಗಿದ್ದು, ಇದು ಲಾಭವನ್ನೇ ದೃಷ್ಟಿಯಲ್ಲಿಟ್ಟುಕೊಂಡು ನಡೆಯುತ್ತಿರುವ ಸಂಸ್ಥೆಯಲ್ಲ. ಸಾರ್ವಜನಿಕರ ಸೇವಾ ಕ್ಷೇತ್ರವಾಗಿರುವುದರಿಂದ ಸರ್ಕಾರಕ್ಕೆ ನಷ್ಟವಾದರೂ ಕೂಡ ಉತ್ತಮ ಸಾರಿಗೆ ಸಂಪರ್ಕದ ಸೌಲಭ್ಯ ಒದಗಿಸುತ್ತಿದೆ ಎಂದು ಅಧ್ಯಕ್ಷ ಚಂದ್ರಪ್ಪ ಹೇಳಿದರು.
ಕಳೆದ ಡಿಸೆಂಬರ್ನಲ್ಲಿ ಸಾರಿಗೆ ಸಂಸ್ಥೆಯ ನೌಕರರು 9 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೆಲಸ ಸ್ಥಗಿತಗೊಳಿಸಿ ಹೋರಾಟ ಮಾಡಿದ್ದರು. ಈ ಸಂದರ್ಭದಲ್ಲಿ ಸಂಘಟನೆಗಳ ಮುಖಂಡರೊಂದಿಗೆ ಮಾತುಕತೆ ನಡೆಸಿ 9 ಬೇಡಿಕೆಗಳ ಪೈಕಿ 8 ಬೇಡಿಕೆಗಳನ್ನು ಸರ್ಕಾರ ಈಡೇರಿಸಿದೆ. ಆದರೆ ನೌಕರರ ಬೇಡಿಕೆಗಳ ಪೈಕಿ 6ನೇ ವೇತನ ಆಯೋಗದ ಜಾರಿ ಪ್ರಮುಖ ಬೇಡಿಕೆಯಾಗಿದ್ದು, ಈ ಬೇಡಿಕೆ ಈಡೇರಿಕೆಗೆ ಪಟ್ಟು ಹಿಡಿದು ಬುಧವಾರದಿಂದ ಮತ್ತೆ ಕೆಲಸ ಸ್ಥಗಿತಗೊಳಿಸಿ ಮುಷ್ಕರಕ್ಕೆ ಮುಂದಾಗಿದ್ದಾರೆ.
ಈ ಸಂಬಂಧ ನಾನು ಸಾರಿಗೆ ನಿಗಮದ ಅಧಿಕಾರಿಗಳು, ಸಾರಿಗೆ ಸಚಿವರು, ಹಣಕಾಸು ಇಲಾಖೆ ಹಾಗೂ ಸಿಎಂ ಸೇರಿ ಚರ್ಚೆ ನಡೆಸಿದ್ದೇವೆ. ಕೋವಿಡ್ನಿಂದಾಗಿ ಸರ್ಕರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಆದರೂ ನೌಕರರ ಹಿತಕಾಯುವ ಉದ್ದೇಶ ಸರಕಾರಕಿದೆ. ನೌಕರರ ಬೇಡಿಕೆಗಳನ್ನು ಈಡೇರಿಸಲು ಸರಕಾರ ಬದ್ಧವಾಗಿದೆ. ಆದರೆ ಮೂರು ಕಡೆಗಳಲ್ಲಿ ಉಪಚುನಾವಣೆ ಘೋಷಣೆಯಾಗಿರುವುದರಿಂದ ನೀತಿ ಸಂಹಿತೆ ನೌಕರರ ಬೇಡಿಕೆ ಈಡೇರಿಕೆಗೆ ತೊಡಕಾಗಿದೆ ಎಂದರು.
ನೌಕರರ ಚಳವಳಿ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿಯವರು ಮೇ 4ರಂದು ನಿಗಮಕ್ಕೆ ಸರಕಾರ ನಿರ್ದಿಷ್ಟ ಪ್ರಮಾಣದ ಹಣ ಬಿಡುಗಡೆಗೆ ಮನವಿ ಮಾಡಿದ್ದು, ಇದು ಮಾಧ್ಯಮಗಳಲ್ಲೂ ಸುದ್ದಿಯಾಗಿದೆ. ಈ ಹಿನ್ನೆಲೆಯಲ್ಲಿ ಮುಷ್ಕರಕ್ಕೆ ಕರೆ ನೀಡಿರುವ ಸಂಘಟನೆಗಳು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು ಎಂದ ಅವರು, ಕಳೆದ ಕೋವಿಡ್ ಸಂಕಷ್ಟದಿಂದಾಗಿ ನಿಗಮಕ್ಕೆ 3200 ಕೋ ರೂ. ನಷ್ಟವಾಗಿದೆ.
ಆದರೂ ಸರಕಾರ ಈ ಹಿಂದೆ 1780 ಕೋ. ರೂ. ಹಣವನ್ನು ಸಿಬ್ಬಂದಿ ವೇತನಕ್ಕೆಂದು ನಿಗಮಕ್ಕೆ ಬಿಡುಗಡೆ ಮಾಡಿದ್ದು, ಕೋವಿಡ್ ಸಂಕಷ್ಟದಲ್ಲೂ ಸರಕಾರ ಸಿಬ್ಬಂದಿಯ ಒಂದು ತಿಂಗಳ ವೇತನವನ್ನೂ ತಡೆಹಿಡಿದಿಲ್ಲ. ಕೆಎಸ್ಸಾರ್ಟಿಸಿ ಸಂಸ್ಥೆಯಲ್ಲಿ ಉತ್ತಮ ನಡವಳಿಕೆಯ ಸಿಬ್ಬಂದಿ ಇದ್ದು, ಸಂಸ್ಥೆ ಉಳಿದರೆ ಮಾತ್ರ ನೌಕರರ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಸಾಧ್ಯ, ಇಲ್ಲದಿದ್ದಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂಬುದನ್ನು ನೌಕರರು ಅರ್ಥ ಮಾಡಿಕೊಳ್ಳಬೇಕೆಂದು ತಾನು ಮನವಿ ಮಾಡುವುದಾಗಿ ಹೇಳಿದರು.
2005ರಿಂದೀಚೆಗೆ ಸರಕಾರಿ ನೌಕರಿಗೆ ಸೇರಿದವರಿಗೆ ಪಿಂಚಣಿ ಸೌಲಭ್ಯ ಇರುವುದಿಲ್ಲ ಎಂದು 2005ರಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ತೀರ್ಮಾನ ಕೈಗೊಂಡಿವೆ. ಆದರೂ ನೌಕರರು 6ನೇ ವೇತನ ಆಯೋಗಕ್ಕಾಗಿ ಏಕೆ ಪಟ್ಟು ಹಿಡಿದಿದ್ದಾರೋ ಗೊತ್ತಿಲ್ಲ.
ಕೆಲ ಸಂಘಟನೆಗಳು ಸಾರಿಗೆ ಇಲಾಖೆಯ ಸಿಬ್ಬಂದಿಯನ್ನು ದಾರಿ ತಪ್ಪಿಸುತ್ತಿರುವ ಬಗ್ಗೆ ಸರಕಾರದ ಬಳಿ ವರದಿಗಳಿವೆ. ನೌಕರರು ತಮ್ಮ ನಿಲುವು ಬದಲಿಸುವ ಮೂಲಕ ಚಳವಳಿ ಕೈಬಿಡಬೇಕು.
ನೌಕರರ ಎಲ್ಲ ಬೇಡಿಕೆಗಳನ್ನು ಸರಕಾರ ಮುಂದಿನ ದಿನಗಳಲ್ಲಿ ಈಡೇರಿಸಲಿದೆ ಎಂದು ಇದೇ ವೇಳೆ ನಿಗಮದ ಅಧ್ಯಕ್ಷ ಚಂದ್ರಪ್ಪ ಹೇಳಿದರು.
ಈ ವೇಳೆ ಚಿಕ್ಕಮಗಳೂರು ಪ್ರದೇಶಿಕ ಸಾರಿಗೆ ವಿಭಾಗದ ನಿಯಂತ್ರಣಾಧಿಕಾರಿ ಎಚ್.ಟಿ.ವೀರೇಶ್ ಉಪಸ್ಥಿತರಿದ್ದರು.












Click it and Unblock the Notifications