ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸುವವರಿಗೆ ಸಿ.ಟಿ ರವಿ ಚಾಲೆಂಜ್
ಚಿಕ್ಕಮಗಳೂರು, ಮೇ 17: ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ವಿರೋಧ ವ್ಯಕ್ತಪಡಿಸುವವರಿಗೆ ಸಚಿವ ಸಿ.ಟಿ ರವಿ ಸಾರ್ವಜನಿಕ ಚರ್ಚೆಗೆ ಆಹ್ವಾನ ನೀಡಿದ್ದಾರೆ.
ಚಿಕ್ಕಮಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ವಿರೋಧಕ್ಕಾಗಿ ವಿರೋಧ ಮಾಡುವುದು ಅರ್ಥಹೀನ. 2003 ರಲ್ಲಿ ಡ್ರಾಫ್ಟ್ ಆಯ್ತು. ಯುಪಿಎ ಸರ್ಕಾರದ ಅವಧಿಯಲ್ಲಿ ಆ ಡ್ರಾಫ್ಟ್ ನ್ನು ಪರಿಷ್ಕರಣೆ ಮಾಡಿ, ಮಾಡೆಲ್ ಡ್ರಾಫ್ಟ್ ಆದ ಬಳಿಕ 16 ರಾಜ್ಯಗಳು ಅದನ್ನು ಒಪ್ಪಿಕೊಂಡವು ಎಂದರು.
ಈಗ ಅದನ್ನು ಇನ್ನಷ್ಟು ಸುಧಾರಣೆ ಮಾಡಿ ರೈತ ಸ್ನೇಹಿಯಾಗಿ ಹೊಸ ಕಾಯ್ದೆಯನ್ನು ಜಾರಿಗೆ ತಂದಿದೆ. ಅದನ್ನು ವಿರೋಧ ಮಾಡುವವರಿಗೆ ನಾನು ಸಾರ್ವಜನಿಕ ಚರ್ಚೆಗೆ ಆಹ್ವಾನ ಮಾಡ್ತೀನಿ ಎಂದಿದ್ದಾರೆ. ಈ ಕಾಯ್ದೆಯಿಂದ ರೈತರಿಗೆ ಏನು ತೊಂದರೆ ಆಗುತ್ತೆ ಹೇಳಿ? ಎಂದು ವಿರೋಧಿಸುವವರಿಗೆ ಪ್ರಶ್ನಿಸಿದ್ದಾರೆ.

ಹೆಚ್ಚು ಜನ ಖರೀದಿದಾರರು ಹುಟ್ಟಿಕೊಂಡರೆ ರೈತರಿಗೆ ಲಾಭ ಹೆಚ್ಚಾಗುತ್ತದೆ ವಿನಃ ನಷ್ಟವಾಗಲ್ಲ. ಯಾರು ಹೆಚ್ಚು ಬೆಲೆ ಕೊಡ್ತಾರೆ, ಎಲ್ಲಿ ಹೆಚ್ಚು ಲಾಭ ಸಿಗುತ್ತೆ ರೈತರು ಅಲ್ಲಿ ಹೋಗಿ ಮಾರಬಹುದು. ಸ್ಪರ್ಧೆ ಬೆಳೆಯುತ್ತೆ, ಅವಕಾಶ ಹೆಚ್ಚಾದಾಗ ರೈತರು ಮುಕ್ತವಾಗಿ ಮಾರಾಟ ಮಾಡಲು ಅವಕಾಶ ಸಿಗುತ್ತೆ ಎಂದಿದ್ದಾರೆ.
ಇಲ್ಲಿಯವರೆಗೂ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದಿದ್ದರೆ ಹೋಗಿ ಬೀದಿಗೆ ಸುರಿಯಬೇಕು, ಇಲ್ಲ ಕೇಳಿದಷ್ಟು ದರಕ್ಕೆ ಕೊಡುವ ವ್ಯವಸ್ಥೆ ಇತ್ತು. ಆದರೆ ಈಗ ಹಲವು ಮಾರ್ಗ, ಮಾರುಕಟ್ಟೆಗಳು ಹುಟ್ಟಿಕೊಂಡಾಗ ಮಾರುವ ಅವಕಾಶ ಹೆಚ್ಚಿರುತ್ತೆ, ಎಲ್ಲಿ ಲಾಭ ಸಿಗುತ್ತೊ ಅಲ್ಲಿಗೆ ರೈತರು ಮಾರುತ್ತಾರೆ. ಇದನ್ನು ವಿರೋಧ ಮಾಡುವುದು ಅರ್ಥಹೀನ ಎಂದು ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications