ಕುಮಾರಸ್ವಾಮಿ ಎಲ್ಲರನ್ನು ಬೆದರಿಸೋದು, ಹುಷಾರ್ ಅನ್ನೋದು ಸಹಜ-ಚೆಲುವರಾಯಸ್ವಾಮಿ
ಚಿಕ್ಕಮಗಳೂರು, ಜುಲೈ 08: ಕುಮಾರಸ್ವಾಮಿ ಅವರಿಗೆ ನಮ್ಮನ್ನು ಸಹಿಸುವ ಶಕ್ತಿ ಇಲ್ಲ, ದೇವರು ಅವರಿಗೆ ಎಲ್ಲರನ್ನೂ ಸಹಿಸುವ ಶಕ್ತಿ ನೀಡಲಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸಚಿವ ಚೆಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಕಿಗ್ಗಾ ಮಾತಾನಾಡಿದ ಅವರು, ಚಂದ್ರೇಗೌಡ ಎನ್ನುವವರು ಒಂದೇ ವರ್ಷದಲ್ಲಿ 7 ಬಾರಿ ವರ್ಗಾವಣೆ ಮಾಡಿದ್ದು ಇವರೇ, ಮೂಡಾ ಕಮಿಷನರ್ ಆಗಿದ್ದ ನಾಗರಾಜ್ ಎನ್ನುವವರನ್ನು ತಪ್ಪಿಲ್ಲದಿದ್ದರೂ ಅಮಾನತು ಮಾಡಿದ್ದು ಇವರೇ, ಇಬ್ಬರು ಮಂಡ್ಯದ ಒಕ್ಕಲಿಗ ಸಮುದಾಯದವರಾಗಿದ್ದರು ಎಂದು ಚೆಲುವರಾಯಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ಇವರಿಗೆ ಒಕ್ಕಲಿಗರು ಬೆಳೆಯಬಾರದು, ಇವರೊಬ್ಬರೇ ಬೆಳೆಯಬೇಕು ಎನ್ನುವ ಮನಸ್ಥಿತಿ ಅವರದ್ದು. ಒಕ್ಕಲಿಗ ಎನ್ನುವ ಕಾರಣಕ್ಕೆ ಚೆಲುವರಾಯಸ್ವಾಮಿ ವಿರುದ್ಧ ಕುಮಾರಸ್ವಾಮಿ ನಿಂತಿರೋದು, ಒಕ್ಕಲಿಗರಿಗೆ ಹೆಚ್ಚು ಅವಕಾಶ ಸಿಗಬಾರದು ಎನ್ನುವುದು ಅವರ ಮನಸ್ಸಿನಲ್ಲಿದೆ ಅನಿಸುತ್ತದೆ. ನನಗೆ ಯಾವುದೇ ಬೇಜಾರಿಲ್ಲ ಎಂದರು.
ಇನ್ನು 10 ಸಲ ಕುಮಾರಸ್ವಾಮಿ ಸಿಎಂ ಆದರೂ ಸ್ವಾಗತಿಸುತ್ತೇವೆ, ಆ ಕುಟುಂಬಕ್ಕೆ ಯಾವತ್ತೂ, ಯಾವುದೇ ರೀತಿ ಕೆಟ್ಟದಾಗಿ ನಡೆದುಕೊಂಡಿಲ್ಲ, ಮಾತಾಡಿಲ್ಲ. ಇನ್ನು ಅವರಿಗೆ ನಮ್ಮನ್ನ ಸಹಿಸುವ ಶಕ್ತಿ ಇಲ್ಲ, ದೇವರು ಎಲ್ಲರನ್ನೂ ಸಹಿಸುವ ಶಕ್ತಿ ನೀಡಲಿ ಎಂದರು.
ಕುಮಾರಸ್ವಾಮಿ ಪೆನ್ ಡ್ರೈವ್ ನಡೆ ಹೊಸದೇನಲ್ಲ, ಎಲ್ಲರೂ ನೋಡಿದ್ದಾರೆ. ಯಾವ ಅಸೆಂಬ್ಲಿಯಲ್ಲಿ, ಯಾರ ಬಗ್ಗೆ ಗೊತ್ತಿಲ್ಲ ಅಂತ ಹೇಳಿದ್ದಾರೆ, ಅವರಿಗೆ ಎಲ್ಲರ ಬಗ್ಗೆಯೂ ಗೊತ್ತು ಅಂತಾರೆ, ಮಾತೆತ್ತಿದರೆ ಎಲ್ಲರ ರಾಜೀನಾಮೆ ಕೇಳುತ್ತಾರೆ. ಆದರೆ ಜನಾರ್ದನ ರೆಡ್ಡಿ 150 ಕೋಟಿ ಹಗರಣದ ಸಮಯದಲ್ಲಿ ಇವರೇ ಸಿಎಂ ಆಗಿದ್ದರು, ಆಗ ರಾಜೀನಾಮೆ ನೀಡಿ ಹೊರಬಂದು ತನಿಖೆ ಮಾಡಿಸಿಕೊಂಡ್ರಾ ಎಂದು ಪ್ರಶ್ನೆ ಮಾಡಿದರು.

ಇನ್ನು ಮಾತು ಮುಂದುವರಿಸಿದ ಅವರು, ಕುಮಾರಸ್ವಾಮಿ ಅವರನ್ನು ಹತ್ತಾರು ವರ್ಷದಿಂದ ನೋಡಿದ್ದೇವೆ. ಎಲ್ಲರನ್ನು ಬೆದರಿಸೋದು, ಹುಷಾರ್ ಎನ್ನುವುದು ಸಹಜ. ಯಾರ ಪೆನ್ ಡ್ರೈವ್ ಇದೆ ಅಂತಾ ಕುಮಾರಸ್ವಾಮಿ ಅವರೇ ಹೇಳಬೇಕಲ್ವಾ, ಪೆನ್ ಡ್ರೈವ್ ಇದ್ಯಾ, ಇದ್ರೆ ಯಾಕೆ ಇಟ್ಟುಕೊಂಡಿದ್ದಾರೆ ಎನ್ನುವುದು ಅವರಿಗೆ ಬಿಟ್ಟಿದ್ದು. ಅವರ ಈ ಪೆನ್ ಡ್ರೈವ್ ನಡೆ ಹೊಸದೇನಲ್ಲ, ಅದನ್ನು ಎಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಕು. ಉದಾಸೀನ ಮಾಡ್ಬೇಕಾ, ಕೌಂಟರ್ ಕೊಡ್ಬೇಕಾ ಗೊತ್ತಾಗ್ತಿಲ್ಲ ಎಂದು ವ್ಯಂಗ್ಯ ವಾಡಿದರು.
ಮಳೆಗಾಗಿ ಕಿಗ್ಗಾ ಋಷ್ಯಶೃಂಗೇಶ್ವರ ದೇವಾಲಯದಲ್ಲಿ ಪರ್ಜನ್ಯ ಜಪ
ಚಿಕ್ಕಮಗಳೂರು: ರಾಜ್ಯಾದ್ಯಂತ ಸಮೃದ್ಧ ಮಳೆಯಾಗಲಿ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಮಳೆ ದೇವರ ಮೊರೆ ಹೋಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಕಿಗ್ಗಾದ ಋಷ್ಯ ಶೃಂಗೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಮಾಡುತ್ತಿದ್ದಾರೆ. ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಇತರೆ ಭಾಗದಲ್ಲಿ ಮಳೆ ಅಭಾವವಿದೆ. ಹಾಗಾಗಿ, ಸರ್ಕಾರದ ಪ್ರತಿನಿಧಿಯಾಗಿ ಕೃಷಿ ಸಚಿವ ಚೆಲುವರಾಯಸ್ವಾಮಿ ಮಳೆ ದೇವರ ಮೊರೆ ಹೋಗಿದ್ದಾರೆ.
ಕಿಗ್ಗಾದ ಋಷ್ಯಶೃಂಗೇಶ್ವರ ದೇವಾಲಯದಲ್ಲಿ 20ಕ್ಕೂ ಹೆಚ್ಚು ಋತ್ವಿಜರಿಂದ ಪರ್ಜನ್ಯ ಜಪ ನಡೆದಿದ್ದು ರಾಜ್ಯಾದ್ಯಂತ ಮಳೆಯಾಗುವ ಸಾಧ್ಯತೆ ಇದೆ. ಈ ಹಿಂದೆ ಎರಡ್ಮೂರು ದಶಕಗಳಿಂದಲೂ ಕೂಡ ಮಳೆಗಾಗಿ ಆಡಳಿತ ಸರ್ಕಾರ ಇದೇ ಋಷ್ಯಶೃಂಗನ ಮೊರೆ ಹೋದವರೆ. ಈ ಋಷ್ಯಶೃಂಗೇಶ್ವರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೆಚ್ಚಿನ ದೈವವಾಗಿದ್ದು 2017ರಲ್ಲಿ ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ಕೂಡ ಇಲ್ಲಿ ಮಳೆಗಾಗಿ ಪೂಜೆ ಸಲ್ಲಿಸಿದ್ದರು. ಆಗ ರಾಜ್ಯದಲ್ಲಿ ಸಮೃದ್ಧ ಮಳೆ ಕೂಡ ಆಗಿತ್ತು.
ಆಗ, ಋಷ್ಯಶೃಂಗೇಶ್ವರನಿಗೆ ಹರಕೆ ಹೊತ್ತಿದ್ದ ಡಿ.ಕೆ.ಶಿವಕುಮಾರ್ ರಾಜ್ಯಾದ್ಯಂತ ಸಮೃದ್ಧ ಮಳೆಯಾದ ಹಿನ್ನೆಲೆ ಋಷ್ಯಶೃಂಗೇಶ್ವರನಿಗೆ ಬೆಳ್ಳಿಯ ಮುಖವಾಡ ನೀಡಿ ಹರಕೆ ಕೂಡ ತೀರಿಸಿದ್ದರು. ಇದೀಗ, ಮತ್ತೆ ರಾಜ್ಯದಲ್ಲಿ ಮಳೆ ಅಭಾವವಿದ್ದು ಮಳೆಗಾಗಿ ಸರ್ಕಾರದಿಂದಲೇ ಅಧಿಕೃತ ಪೂಜೆ ನಡೆಯುತ್ತಿದೆ.












Click it and Unblock the Notifications