ಚಿಕ್ಕಮಗಳೂರು; ಮಳೆ ಆರ್ಭಟ, ಭೂ ಕುಸಿತ, ಮನೆಗಳು ನೆಲಸಮ
ಚಿಕ್ಕಮಗಳೂರು, ಜುಲೈ 14 : ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಈ ಭಾಗದಲ್ಲಿ ಹರಿಯುವ ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯಮಟ್ಟದಲ್ಲಿ ಹರಿಯುತ್ತಿವೆ. ಕೆರೆಕಟ್ಟೆಗಳು ತುಂಬಿ ಹರಿಯುತ್ತಿದ್ದು ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿದೆ ರೈತರು ಹೈರಾಣಾಗಿದ್ದಾರೆ.
ಬಯಲುಸೀಮೆ ಭಾಗದಲ್ಲಿ ಮಳೆಯ ಅಬ್ಬರ ಸ್ವಲ್ಪಮಟ್ಟಿಗೆ ತಗ್ಗಿದ್ದು, ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆಗೆ ಅಲ್ಲಲ್ಲಿ ಧೆರೆಕುಸಿತ ಉಂಟಾಗಿದೆ. ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಸಣ್ಣ ಪ್ರಮಾಣದ ಕುಸಿತ ಉಂಟಾಗಿದ್ದು ತೆರವು ಕಾರ್ಯಾಚರಣೆ ನಡೆಯುತ್ತಿದೆ. ಕೆಲವು ಕಡೆ ಗುಡ್ಡಕುಸಿತ ಸಂಭವಿಸಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ.
ಮರಗಳು ಧರೆಗುರುಳಿದ್ದು, ವಿದ್ಯುತ್ ಕಂಬಗಳು ಧರೆಗುರುಳಿ ವಿದ್ಯುತ್ ವ್ಯತ್ಯಾಯಗೊಂಡಿದ್ದು ಕೊಪ್ಪ, ಶೃಂಗೇರಿ, ನರಸಿಂಹರಾಜಪುರ, ಮೂಡಿಗೆರೆ, ಕಳಸ ಸುತ್ತಮುತ್ತ ಮಳೆ ಮುಂದುವರೆದಿದೆ. ಮೂಡಿಗೆರೆ ತಾಲ್ಲೂಕು ಸಬ್ಲಿ ಗ್ರಾಮದ ಶಾಲೆಯ ಗೋಡೆ ಕುಸಿದು ಬಿದ್ದಿದೆ. ಶಾಲೆಗೆ ರಜೆ ನೀಡಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಇತಿಹಾಸ ಪ್ರಸಿದ್ಧ ಅಯ್ಯನಕೆರೆ ಮತ್ತು ಮದಗದ ಕೆರೆ ಕೋಡಿ ಬಿದ್ದಿವೆ. ಮಳೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ತೋಟ, ಮನೆಗಳಿಗೆ ಹಾನಿ
ನಿರಂತರವಾಗಿ ಸುರಿಯುತ್ತಿರುವ ಮಳೆಗೆ 442 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ನಾಶವಾಗಿದೆ. 24 ಗಂಟೆಗಳಲ್ಲಿ 29 ಮನೆಗಳಿಗೆ ಹಾನಿಯಾಗಿದೆ. 3 ಮನೆಗಳು ನೆಲಸಮ ಗೊಂಡರೆ, 11 ಮನೆಗಳು ಶೇ 25ರಿಂದ 75 ರಷ್ಟು ಹಾನಿಯಾಗಿವೆ. 15 ಮನೆಗಳಿಗೆ ಭಾಗಶಃ ಹಾನಿವುಂಟಾಗಿದೆ. 17 ವಿದ್ಯುತ್ ಕಂಬಗಳು ಧರೆಗುರುಳಿವೆ. ಲೋಕೋಪಯೋಗಿ, ಪಂಚಾಯತ್ರಾಜ್ ಇಲಾಖೆ ವ್ಯಾಪ್ತಿಗೆ ಒಳಪಡುವ ರಸ್ತೆಗಳು 442. 6 ಕಿ. ಮೀ. ಹಾನಿಯಾದರೆ 12 ಸೇತುವೆಗಳಿಗೆ ಧಕ್ಕೆಯಾಗಿದೆ.

ಟಿಂಬರ್ ಸಾಗಿಸುವ ಲಾರಿಗಳಿಂದ ರಸ್ತೆಗೆ ಹಾನಿ
ಜಿಲ್ಲಾದ್ಯಂತ ಕಳೆದ ಅನೇಕ ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಮಳೆಯ ಅಬ್ಬರಕ್ಕೆ ಅನೇಕ ರಸ್ತೆಗಳು ಹಾನಿಗೀಡಾಗಿದ್ದು, ರಸ್ತೆಯಲ್ಲಿ ಸಂಚರಿಸಲು ಜನರು ಪರದಾಡುವಂತಾ ಗಿದೆ. ಇಂತಹ ಪರಿಸ್ಥಿತಿಯಲ್ಲಿ ಟಿಂಬರ್ ಮರಗಳನ್ನು ತುಂಬಿದ ಲಾರಿಗಳು ಎಗ್ಗಿಲ್ಲದೆ ಸಾಗುತ್ತಿದ್ದು, ಇದರಿಂದ ರಸ್ತೆಗಳು ಸಂಪೂರ್ಣ ಹಾಳಾಗುತ್ತಿದೆ. ರಸ್ತೆಯಲ್ಲಿ ಜನಸಂಚಾರ ಸಾಧ್ಯ ವಾಗದೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಮಳೆಗಾಲದಲ್ಲಿ ಅಧಿಕ ತೂಕದ ಟಿಂಬರ್ ಲಾರಿಗಳ ಸಂಚಾರಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದ್ದರು, ಜಿಲ್ಲಾಡಳಿತದ ಆದೇಶಕ್ಕೆ ಸೆಡ್ಡು ಹೊಡೆದು ರಾತ್ರೋರಾತ್ರಿ ಟಿಂಬರ್ ಲಾರಿಗಳು ಸಂಚರಿಸುತ್ತಿವೆ ಅಧಿಕ ತೂಕ ಹೊತ್ತ ಲಾರಿಗಳ ಸಂಚಾರದಿಂದ ರಸ್ತೆಗಳು ಹಾಳಾಗುತ್ತಿದ್ದು ಟಿಂಬರ್ ಲಾರಿಗಳಿಗೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಅಯ್ಯನಕೆರೆ ವೀಕ್ಷಣೆಗೆ ನಿಷೇಧ
ಸಖರಾಯಪಟ್ಟಣ ಸಮೀಪದಲ್ಲಿರುವ ಅಯ್ಯನಕೆರೆ ತುಂಬಿ ಕೋಡಿ ಬಿದ್ದಿದೆ. ತುಂಬಿದ ಕೆರೆಯನ್ನು ನೋಡಲು ಪ್ರವಾಸಿಗರು ಮುಗಿಬಿದಿದ್ದು, ಕೆರೆಯ ಮಧ್ಯ ಭಾಗದಲ್ಲಿರುವ ವೀವ್ ಪಾಯಿಂಟ್ಗೆ ತೆರಳಿ ಸೆಲ್ಪಿ ತೆಗೆದುಕೊಳ್ಳಲು ಮುಂದಾಗುತ್ತಿದ್ದಾರೆ. ಪ್ರವಾಸಿಗರ ಹುಚ್ಚಾಟವನ್ನು ಕಂಡು ಸ್ಥಳೀಯರು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದು, ಎಚ್ಚೆತ್ತುಕೊಂಡ ಜಿಲ್ಲಾಡಳಿತ ಅಯ್ಯನಕೆರೆ ವೀಕ್ಷಣೆಗೆ ನಿಷೇಧ ಹೇರಿದೆ. ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಿ ಸಖರಾಯಪಟ್ಟಣ ಪೊಲೀಸ್ ಠಾಣೆಯಿಂದ ಆದೇಶ ಹೊರಡಿಸಿದೆ.

ಕೋಡಿಬಿದ್ದ ಮದಗದ ಕೆರೆ
ಕಡೂರು ತಾಲ್ಲೂಕು ಎಮ್ಮೆದೊಡ್ಡಿ ಬಳಿ ಇರುವ ಇತಿಹಾಸ ಪ್ರಸಿದ್ಧ ಮದಗದ ಕೆರೆ ಕೋಡಿ ಬಿದ್ದಿ ಬಿದ್ದಿದೆ. ಬಯಲುಸೀಮೆ ರೈತರ ಜೀವನಾಡಿಯಾಗಿರುವ ಮದಗದ ಕೆರೆ ಕೋಡಿ ಬಿದ್ದಿದ್ದು, ಈ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಐತಿಹಾಸಿಕ ಹಿನ್ನೆಲೆಯುಳ್ಳ ಈ ಕೆರೆಯು ನೂರಾರು ಎಕರೆ ವಿಸ್ತೀರ್ಣದಲ್ಲಿ ಚಾಚಿಕೊಂಡಿದೆ. ಮಲೆನಾಡಿನಲ್ಲಿ ಕೆರೆ ಇದ್ದರೂ ಜಿಲ್ಲೆಯ ಬಯಲು ಸೀಮೆಯಾದ ಕಡೂರು ತಾಲೂಕಿಗೆ ನೀರುಣಿಸುತ್ತದೆ.












Click it and Unblock the Notifications