ಮೈ ಮೇಲೆ ಹರಿದು ಹೋದ ಕಾಳಿಂಗ ಸರ್ಪ; ಬೆಚ್ಚಿಬಿದ್ದ ವ್ಯಕ್ತಿ!
ಚಿಕ್ಕಮಗಳೂರು, ಜನವರಿ 10: ಅತ್ಯಂತ ಅಪಾಯಕಾರಿ ಮತ್ತು ವಿಷಕಾರಿಯಾದ ಕಾಳಿಂಗ ಸರ್ಪ ವ್ಯಕ್ತಿಯೊಬ್ಬರ ಮೈಮೇಲೆ ಹರಿದು ಹೋದ ಘಟನೆ ನಡೆದಿದೆ. ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ ಘಟನೆ ಬಗ್ಗೆ ನೆನೆಪು ಮಾಡಿಕೊಂಡು ಬೆಚ್ಚಿಬಿದ್ದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅಂಗಳಗಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಯಂಬಳ್ಳಿಯಲ್ಲಿ ಈ ಘಟನೆ ನಡೆದಿದೆ. ಗ್ರಾಮದ ನಿವಾಸಿ ಸಂತೋಷ್ ಅವರ ಮನೆಯಲ್ಲಿ ನಾಗ ಎಂಬುವವರ ಮೇಲೆ ಕಾಳಿಂಗ ಸರ್ಪ ಹರಿದು ಹೋಗಿದೆ.
ನಾಗ ರಾತ್ರಿ 9.30ರ ಸುಮಾರಿಗೆ ಮನೆಯಲ್ಲಿ ಮಲಗಿದ್ದರು. ಆಗ ಮನೆಯೊಳಗೆ ಬಂದ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ವ ಅವರ ಮೇಲೆ ಹರಿದು ಹೋಗಿದೆ. ಮೈಮೇಲೆ ಹಾವು ಹರಿದು ಹೋದ ಅನುಭವ ಆಗಿದೆ ಎಂದು ಅವರು ತಕ್ಷಣ ಎದ್ದು ಕೂತಿದ್ದಾರೆ.

ನಂತರ ಮನೆಯಲ್ಲಿ ಹುಡುಕಾಟ ನಡೆಸಿದಾಗ ರಟ್ಟಿನ ಪೆಟ್ಟಿಗೆಯೊಳಗೆ ಕಾಳಿಂಗ ಸರ್ವ ಪತ್ತೆಯಾಗಿದೆ. ಕ್ಷಣ ಕಾಲದಲ್ಲಿ ಪ್ರಾಣಾಪಾಯದಿಂದ ಪಾರಾದ ನಾಗ ಘಟನೆ ಬಳಿಕ ಬೆಚ್ಚಿಬಿದ್ದಿದ್ದಾರೆ. ಶೃಂಗೇರಿಯ ಸ್ನೇಕ್ ಅರ್ಜುನ್ ಹಾವನ್ನು ರಕ್ಷಣೆ ಮಾಡಿದ್ದಾರೆ.
ಮನೆಯ ಒಳಗೆ ಆಗಮಿಸಿದ ಕಾಳಿಂಗ ಸರ್ಪ ನಾಗ ಅವರ ಮೇಲೆ ಹರಿದು ಹೋಗಿದೆ. ಕೊಂಚ ಅಲುಗಾಡಿದರೂ ಅದು ಕಚ್ಚುವ ಸಾಧ್ಯತೆ ಇತ್ತು. ಕಾಳಿಂಗ ಕಚ್ಚುವುದರಿಂದ ಆಶ್ಚರ್ಯಕರವಾಗಿ ನಾಗ ಪಾರಾಗಿದ್ದಾರೆ.
ಕಾಳಿಂಗ ಸರ್ಪ ಅತ್ಯಂತ ಅಪಾಯಕಾರಿ ಮತ್ತು ವಿಷಕಾರಿಯಾದ ಹಾವು. ಕಚ್ಚಿದರೆ ಕ್ಷಣ ಮಾತ್ರದಲ್ಲಿಯೇ ವ್ಯಕ್ತಿ ವಿಷವೇರಿ ಸಾವನ್ನಪ್ಪುತ್ತಾನೆ. ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಮನೆಗಳ ಸಮೀಪ ಕಾಳಿಂಗ ಸರ್ಪ ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತದೆ.












Click it and Unblock the Notifications