ಶೃಂಗೇರಿ ತಹಶೀಲ್ದಾರ್ ಅಂಬುಜಾರಿಗೆ ಸ್ಥಳಿಯರಿಂದ ನೀತಿ ಪಾಠ
ಚಿಕ್ಕಮಗಳೂರು, ಫೆಬ್ರವರಿ 4: ''ಹಣ ತೆಗೆದುಕೊಳ್ಳುವಾಗ ನಿಮಗೆ ಜ್ಞಾನ ಇರಬೇಕಿತ್ತು. ಹಣ ತೆಗೆದುಕೊಂಡ ಮೇಲೆ ಕೆಲಸ ಮಾಡಿಕೊಡಬೇಕೆಂಬ ಪರಿಜ್ಞಾನ ಇರಬೇಕೆಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಜನ ತಹಶೀಲ್ದಾರ್ ಅಂಬುಜಾ ಅವರಿಗೆ ಕರೆ ಮಾಡಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಕಾರಣ ಇಷ್ಟೆ. ಶೃಂಗೇರಿಯ ತಹಶೀಲ್ದಾರ್ ಅಂಬುಜಾ ಜನಸಾಮಾನ್ಯರಿಗೆ ಜಮೀನು, ಮನೆ, ನಿವೇಶನದ ಹಕ್ಕುಪತ್ರ ನೀಡುತ್ತೇನೆಂದು ಸ್ಥಳಿಯರಿಂದ ಹಣ ಪಡೆದುಕೊಂಡಿದ್ದರು. ಆದರೆ, ಅವರು ಕೊಟ್ಟ ಹಕ್ಕುಪತ್ರಗಳು ಬರೀ ಬೋಗಸ್ ಹಕ್ಕುಪತ್ರಗಳಾಗಿದ್ದವು. ತಾಲೂಕಿನ ಓರ್ವ ವ್ಯಕ್ತಿಯ ಬಳಿ ಹಕ್ಕುಪತ್ರ ನೀಡಲು ಹಣ ಪಡೆದಿದ್ದರು. ಆದರೆ, ತಮ್ಬ್ ಇಂಪ್ರೆಷನ್ ನೀಡಿರಲಿಲ್ಲ. ಅಷ್ಟು ಹೊತ್ತಿಗಾಗಲೇ ಎಸಿಬಿ ರೇಡ್ ಆಗಿ ಅಂದರ್ ಆಗಿದ್ದರು. ಇದೀಗ, ಬೇಲ್ ಮೇಲೆ ಹೊರಬಂದಿದ್ದಾರೆ. ಆದರೆ, ಈಗ ಆ ಅಧಿಕಾರಿಗೆ ಕರೆ ಮಾಡಿರುವ ಹಣ ನೀಡಿದ ವ್ಯಕ್ತಿ ಸಖತ್ತಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ನಾವು ಕೊಟ್ಟಿರೋದು ಕಷ್ಟಪಟ್ಟಿರೋ ದುಡ್ಡು. ಯಾವ್ದೋ ಹಡಬೆ ದುಡ್ಡು ಕೊಟ್ಟಿಲ್ಲ. ಹಣ ತೆಗೆದುಕೊಂಡ ಮೇಲೆ ಕೆಲಸ ಮಾಡಿಕೊಬೇಕು ಅನ್ನೋ ಜ್ಞಾನ ಇರಬೇಕು ಎಂದು ತಹಶೀಲ್ದಾರ್ಗೆ ಮೈಚಳಿ ಬಿಡಿಸಿದ್ದಾರೆ. ಅದಕ್ಕೆ ತಹಶೀಲ್ದಾರ್ ಮೇಡಂ, ಅಯ್ಯೋ... ಎಸಿಬಿ ರೇಡ್ ಆಯ್ತು, ನಾನೇನ್ ಮಾಡೋಣ ಎಂದಿದ್ದಾರೆ. ಅದಕ್ಕೆ ಆ ವ್ಯಕ್ತಿ ಅದಕ್ಕೆ ನಾವ್ ಏನ್ ಮಾಡೋಣ. ಎಸಿಬಿ ರೇಡ್ ಆಗದ ಹಾಗೇ ನೀವು ಮಾಡಬೇಕಿತ್ತು. ಅದು ನಿಮ್ಮ ಹಣೆಬರಹ. ದುಡ್ ತೆಗೆದುಕೊಳ್ಳುವಾಗ ಅರಿವಿರಬೇಕಿತ್ತು. ದುಡ್ ಇಸ್ಕಂಡ್ ಮೇಲೆ ಕೆಲಸ ಮಾಡಿಕೊಡಬೇಕು ಅನ್ನೋ ಜ್ಞಾನ ಇರಬೇಕು ಎಂದು ರೆಬಲ್ ಆಗಿದ್ದಾರೆ. ಆಡಳಿತದಲ್ಲಿ ಹೋಲ್ಡಿಂಗ್ ಇಲ್ಲ ಅಂದ್ರೆ ನೀವ್ ಯಾವ ಸೀಮೆ ತಹಶೀಲ್ದಾರ್ ಎಂದು ತಹಶೀಲ್ದಾರ್ ಪದದ ಮರ್ಯಾದೆ ಕಳೆದಿದ್ದಾರೆ.

ತಹಶೀಲ್ದಾರ್ ಅಂಬುಜಾ ಶೃಂಗೇರಿಯಲ್ಲಿ ಹತ್ತಿಪ್ಪತ್ತಲ್ಲ ಬರೋಬ್ಬರಿ 700ಕ್ಕೂ ಅಧಿಕ ಜನರಿಗೆ ಫಾರಂ 94ಸಿ, 94ಸಿಸಿಯ ನಕಲಿ ಹಕ್ಕುಪತ್ರ ನೀಡಿ ಲಕ್ಷಾಂತರ ರೂಪಾಯಿಗಳನ್ನ ಗುಳುಂ ಮಾಡಿದ್ದಾರೆ ಎಂದು ಶೃಂಗೇರಿಯ ಜನ ಹೇಳುತ್ತಿದ್ದಾರೆ. ನ್ಯಾಯದ ಕುರ್ಚಿ ಮೇಲೆ ಕೂತ ಇವ್ರ ಅನ್ಯಾಯದ ಕಣ್ಣಾಮುಚ್ಚಾಲೆ ಆಟ ಎಂದು ಅತಿಯಾಯ್ತೋ ಎಸಿಬಿ ದಾಳಿ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ರು. ಜೈಲಿಗೆ ಹೋಗೂ ಬಂದಿದ್ದರು.
ಮುಗ್ಧ ಹಳ್ಳಿಗರಿಗೆ ಆವಾಗಲೇ ಗೊತ್ತಾಗಿದ್ದು ಇವ್ರು ಅಂಗೈಯಲ್ಲಿ ಆಕಾಶ ತೋರಿಸಿದ ಕಥೆ. 1-2-3 ಹೀಗೆ ಲಕ್ಷಗಟ್ಟಲೇ ಹಣ ಪಡೆದು ನಕಲಿ ಹಕ್ಕುಪತ್ರ ನೀಡಿ, ನಾವ್ ಸೇಫ್ ಅಂತ ಸೈಲೆಂಟಾಗಿದ್ರು. ನಮ್ಗೆ ಸಿಕ್ಕಿರೋದು ನಕಲಿ ಹಕ್ಕುಪತ್ರ ಗೊತ್ತಾಗುತ್ತಿದ್ದಂತೆ ಜನ ತಹಶೀಲ್ದಾರ್ಗೆ ಫೋನ್ ಕ್ಲಾಸ್ ತೆಗೆದುಕೊಳ್ತಿದ್ದಾರೆ.
ಈ ಮಧ್ಯೆ ವಾರದ ಹಿಂದಷ್ಟೆ ತಹಶೀಲ್ದಾರ್ ಕಚೇರಿಯಲ್ಲಿ ಕೆಲ ದಾಖಲೆಗಳ ಕಳ್ಳತನವಾಯ್ತಂತೆ. ಕಡತ ಕಳ್ಳತನ ಬೆನ್ನಲ್ಲೇ ತಹಶೀಲ್ದಾರ್ ಕಾರು ಚಾಲಕ ವಿಜೇತ್ ಕೂಡ ಆತ್ಮಹತ್ಯೆ ಶರಣಾದ. ಈ ಆತ್ಮಹತ್ಯೆ ಹಿಂದೆ ಅಧಿಕಾರಿಗಳ ಹಾಗೂ ಬ್ರೋಕರ್ಗಳು ಇದ್ದಾರೆಂಬ ಆರೋಪ ಕೇಳಿಬಂದಿತ್ತು. ಮೃತ ವಿಜೇತ್ ಡೆತ್ ನೋಟ್ನಲ್ಲಿ ಬರೆದಿಟ್ಟ ಮೂವರ ಮೇಲೆ ಎಫ್ಐಆರ್ ಕೂಡ ಆಗಿದೆ.
ತಹಶೀಲ್ದಾರ್ ನಕಲಿ ಹಕ್ಕುಪತ್ರದ ಆಳ-ಅಂತರ ಅರಿತಿದ್ದ ಕೆಲವರು ಹಕ್ಕುಪತ್ರ ನಕಲಿಯೋ... ಅಸಲಿಯೋ... ಅಂತ ಮಾಹಿತಿ ಕೇಳಿದ್ದಾರೆ. ಈಗ ತಹಶೀಲ್ದಾರ್ ಅಂಬುಜಾ ಪರಮಾಪ್ತರ ಮೂಲಕ ಮಾಹಿತಿ ಕೇಳಿದವರಿಗೆ ತಹಶೀಲ್ದಾರ್ ಪವರ್ ನಿಮಗೆ ಗೊತ್ತಿಲ್ಲ ಎಂದು ಬೆದರಿಕೆ ಕೂಡ ಹಾಕಿಸುತ್ತಿದ್ದಾರೆ. ಆದರೆ, ಜಮೀನು, ಜಾಗದ ಆಸೆಗೆ ಕಷ್ಟಪಟ್ಟು ಹಣ ನೀಡಿದವರು ಮಾತ್ರ ನಮ್ಮ ಹಣ ವಾಪಸ್ ಬರುತ್ತೋ ಇಲ್ವೋ ಎಂದು ಕಣ್ಬಾಯ್ ಬಿಡುವಂತಾಗಿದೆ.
ಹಕ್ಕು ಪತ್ರ ನೀಡಲು ಲಂಚದ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಶೃಂಗೇರಿ ತಹಶೀಲ್ದಾರ ಅಂಬುಜ ಹಾಗೂ ಗ್ರಾಮ ಲೆಕ್ಕಿಗ ಸಿದ್ದಪ್ಪ ಅವರು ಎಸಿಬಿ ಬಲೆಗೆ ಬಿದ್ದಿದ್ದು, ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ ಎಸಿಬಿ ಅಧಿಕಾರಿಗಳು ನಂತರದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಅವರು ಹಕ್ಕುಪತ್ರ ಮಾಡಿಕೊಡಲು 60 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಎಸಿಬಿ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications