ಬಿಜೆಪಿ ಸರಕಾರಕ್ಕೆ ಕಣ್ಣು, ಕಿವಿ, ಹೃದಯವಿಲ್ಲ: ಡಿ.ಕೆ.ಶಿವಕುಮಾರ್
ಚಿಕ್ಕಮಗಳೂರು, ನ.29: ಬಿಜೆಪಿ ಸರಕಾರಕ್ಕೆ ಕಣ್ಣು, ಕಿವಿ, ಹೃದಯವೇ ಇಲ್ಲ. ಜನರಿಗೆ ತೊಂದರೆ ಕೊಡೊ ಭಾವನೆ, ಭ್ರಷ್ಟಾಚಾರ ಹಾಗೂ ಪರ್ಸಂಟೇಜ್ ಬಿಟ್ಟರೆ ಆ ಪಕ್ಷದಲ್ಲಿ ಬೇರೇನೂ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಮಂಗಳವಾರ ನಗರದ ಅಡ್ಯಂತಾಯ ರಂಗಮಂದಿಯದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಬೃಹತ್ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್, "ಬಿಜೆಪಿ ಸರಕಾರ 3 ಬಾರಿ ನಡೆಸಿದ ಆಡಳಿತದಲ್ಲಿ ಜನರ ಬದುಕು ಬದಲಾವಣೆ ಮಾಡಲು ಸಾಧ್ಯವಾಗಿಲ್ಲ. ಪೆಟ್ರೋಲ್, ಡೀಸೆಲ್, ಗ್ಯಾಸ್, ಗೊಬ್ಬರ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ" ಎಂದು ಕಿಡಿ ಕಾರಿದರು.
ಮಲೆನಾಡಿನ ರೈತರು ಹಾಗೂ ಎಲ್ಲಾ ವರ್ಗದ ಜನರ ರಕ್ಷಣೆಗೆ ಕಾಂಗ್ರೆಸ್ ಪಕ್ಷ ನಿಲ್ಲಲಿದೆ: ಡಿಕೆಶಿ
"ಈಗ ಬಿಜೆಪಿಯ ಅಧಿಕಾರ ಮುಗಿಯುತ್ತಾ ಬಂದಿದೆ. ಇಲ್ಲಿಯವರೆಗೆ ಅಧಿಕಾರವಿದ್ದಾಗಲೇ ಜನರ ಬದುಕು ಹಸನು ಮಾಡಲು ಇವರಿಗೆ ಸಾಧ್ಯವಾಗಿಲ್ಲ. ಇನ್ನು ಅಧಿಕಾರ ಕಳೆದುಕೊಳ್ಳುವ ಸಮಯದಲ್ಲಿ ಸಾಧ್ಯವೇ" ಎಂದು ಪ್ರಶ್ನಿಸಿದರು.
ಬಿಜೆಪಿ ಕಾಂಗ್ರೆಸ್ನಂತೆ ಒಂದೂ ಜನಪರ ಕಾರ್ಯಕ್ರಮ ಮಾಡಿಲ್ಲ
"ಕಾಂಗ್ರೆಸ್ ಜಾತಿ ಮೇಲಿಲ್ಲ. ನೀತಿ ಮೇಲಿದೆ. ಇಂದಿರಾಗಾಂಧಿ, ರಾಜೀವ್ ಗಾಂಧಿ, ನೆಹರು, ಲಾಲ್ ಬಹದ್ದೂರು ಶಾಸ್ತ್ರಿ ಪ್ರಧಾನಿಯಾಗಿದ್ದಾಗ ಬಡವರಿಗೆ ನಿವೇಶನ, ಜಮೀನ್, ಬಗರ್ ಹುಕಂ ಸಾಗುವಳಿ ಸಕ್ರಮ, ಸಾಲ ಮನ್ನ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮ ಮಾಡಿದ್ದು, ಅದರ ಪ್ರಯೋಜನ ದೇಶದ ಜನರು ಪಡೆದಿದ್ದಾರೆ" ಎಂದರು.
"ಅಂತಹ ಒಂದೇ ಒಂದು ಕಾರ್ಯಕ್ರಮ ಬಿಜೆಪಿ ಮಾಡಲಿಲ್ಲ. ಕೇವಲ ಭಾವನೆಗಳು, ಕೋಮು ಗಲಭೆಯಲ್ಲೇ ಬಿಜೆಪಿಗರು ಕಾಲ ಕಳೆದಿದ್ದಾರೆ. ಇದು ಜನರ ಅಭಿವೃದ್ಧಿಯಲ್ಲ" ಎಂದು ಆರೋಪಿಸಿದರು.
ಮೂಡಿಗೆರೆಯಲ್ಲಿ ಅಭ್ಯರ್ಥಿಯನ್ನು ಗೆಲ್ಲಿಸುವ ಕರ್ತವ್ಯ ನಿಮ್ಮದು
"ಜನರ ಬದುಕು ಹಸನಾಗಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಮತ್ತು ನನ್ನ ಪರವಾಗಿ ನಿಲ್ಲುವ ಯಾವುದೇ ಅಭ್ಯರ್ಥಿ ನಿಲ್ಲಿಸಿದರೂ ಅವರನ್ನು ಗೆಲ್ಲಿಸಿಕೊಡುವ ಕರ್ತವ್ಯ ನಿಮ್ಮದು" ಎಂದು ಜನರಲ್ಲಿ ಮನವಿ ಮಾಡಿದರು.
1952 ರಿಂದ ಇಲ್ಲಿಯವರೆಗೆ ಕಾಂಗ್ರೆಸ್ ಆಡಳಿತ ನಡೆಸಿದ ಎಲ್ಲಾ ಮುಖ್ಯಮಂತ್ರಿಗಳು ಅನೇಕ ಜನಪರ ಯೋಜನೆ ಜಾರಿ ಮಾಡುವ ಮೂಲಕ ರೈತರು ಸೇರಿದಂತೆ ಜನ ಸಾಮಾನ್ಯರ ಬದುಕು ಕಟ್ಟಿಕೊಡುವ ಕೆಲಸ ಮಾಡಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್ ಹೇಳಿದರು.
ಸ್ವಾರ್ಥ, ಪ್ರತಿಷ್ಟೆ ಬಿಟ್ಟು ಕಾಂಗ್ರೆಸ್ ಗೆಲುವಿಗೆ ಕೆಲಸ ಮಾಡಬೇಕು
"ಬಿಜೆಪಿಯವರು ಕೇವಲ ಭಾವನೆ ಸಂಬಂಧಿಸಿದ ವಿಚಾರ ಬಿಟ್ಟರೆ ಬದುಕು ಕಟ್ಟಿಕೊಡುವ ಒಂದೇ ಒಂದು ಕೆಲಸ ಮಾಡಿಲ್ಲ. ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ಜನ ಸಾಮಾನ್ಯರ, ರೈತರ ಬದುಕು ಹೀನಾಯವಾಗಿದೆ. ಸರ್ಫೇಸಿ ಕಾಯಿದೆಯಲ್ಲಿ ಪ್ರಭಾವಿ ಬೆಳೆಗಾರರೇ ನಲುಗಿ ಹೋಗುವಂತಹ ಪರಿಸ್ಥಿತಿ ತಂದಿಟ್ಟಿದ್ದಾರೆ. ಇನ್ನು ಸಾಮಾನ್ಯ ರೈತರ ಗತಿ ಏನು" ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್ ಪ್ರಶ್ನಿಸಿದರು.
ಆಕಾಂಕ್ಷಿಗಳು ಕೇವಲ ಫ್ಲೇಕ್ಸ್ ಹಾಕಿಕೊಂಡರೆ ಅದಕ್ಕೆ ಕೇವಲ ಒಂದು ದಿನ ಮಾತ್ರ ಆಯಸ್ಸು. ಆದರೆ ಜನರೊಂದಿಗೆ ನಿರಂತರ ಸಂಪರ್ಕ ಹೊಂದಿದವರು ಮಾತ್ರ ದೀರ್ಘ ಕಾಲ ಆಯಸ್ಸು ಹೊಂದಲು ಸಾಧ್ಯವಿದೆ. ಸ್ವಾರ್ಥ, ಪ್ರತಿಷ್ಟೆಯನ್ನು ಬಿಟ್ಟು, ಎಲ್ಲರೂ ಒಗ್ಗೂಡಿಕೊಂಡು ಜಿಲ್ಲೆಯ 5 ಕ್ಷೇತ್ರವನ್ನು ಗೆಲ್ಲಿಸುವ ಕೆಲಸ ಮಾಡಲು ಪ್ರತಿಯೊಬ್ಬ ಕಾರ್ಯಕರ್ತರು ಮುಂದಾಗಬೇಕೆಂದು ಮನವಿ ಮಾಡಿದರು.
ಅವರ ತಟ್ಟೆಯಲ್ಲಿ ದೊಡ್ಡ ಹೆಗ್ಗಣವಿದೆ, ಮೊದಲು ನೋಡಿಕೊಳ್ಳಲಿ
ಇನ್ನು, "ನನ್ನ ಮೇಲೆ ಯಾವುದೇ ರೌಡಿಶೀಟರ್ ಕೇಸ್ ಇಲ್ಲ ಯಡಿಯೂರಪ್ಪನ್ನು ಜೈಲಿಗೆ ಹೋಗಿ ಬಂದಿದ್ದಾರೆ. ಅಮಿತ್ ಶಾ ಕೂಡ ಜೈಲಿಗೆ ಹೋಗಿ ಬಂದಿದ್ದಾರೆ. ನಾನು ಜೈಲಿಗೆ ಹೋಗಿ ಬಂದಿದ್ದೇನೆ. ರಾಜಕೀಯ ಪ್ರೇರಿತವಾಗಿ ನನ್ನನ್ನ ಜೈಲಿಗೆ ಹಾಕಿದ್ದು, ಭ್ರಷ್ಟಾಚಾರ ಮಾಡಿ ಹೋಗಿಲ್ಲ. ಅವರ ತಟ್ಟೆಯಲ್ಲಿ ದೊಡ್ಡ ಹೆಗ್ಗಣ ಬಿದ್ದಿದೆ, ಅದನ್ನ ಮೊದಲು ನೋಡಿಕೊಳ್ಳಲಿ. ಮತದಾನದ ಹಕ್ಕನ್ನೇ ಮಾರಲು ಹೊರಟವರು ಬಿಜೆಪಿಯವರು" ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿ ಕಾರಿದ್ದಾರೆ.