ಕಡೂರಿನಲ್ಲಿ ಮೈಲಾರ ಲಿಂಗನ ಭವಿಷ್ಯ; ರಾಜ್ಯ ರಾಜಕಾರಣಕ್ಕೆ ಎಚ್ಚರಿಕೆಯ ಸಂದೇಶ?
ಚಿಕ್ಕಮಗಳೂರು, ಅಕ್ಟೋಬರ್ 9: "ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ. ಪಂಜರದ ಗಿಳಿಗಳು ಹಾರಿ ಹೋದಾವು. ಕಟ್ಟಿದ ಕೋಟೆ ಪರರದಾಯಿತು. ಉತ್ತಮ ಮಳೆ ಸುರಿಸಿದಾವು. ಸರ್ವರು ಎಚ್ಚರದಿಂದಿರಬೇಕು" ಎಂದು ಚಿಕ್ಕಮಗಳೂರಿನಲ್ಲಿ ಮೈಲಾರಲಿಂಗ ಸ್ವಾಮಿಯ ಕಾರ್ಣೀಕ ನುಡಿದಿದೆ. ಈ ನುಡಿಗಳು ಯಾವುದಕ್ಕೆ ಸಂಬಂಧಪಟ್ಟಿದ್ದು ಎಂದು ಜನರಲ್ಲಿ ಈಗಾಗಲೇ ಚರ್ಚೆ ಆರಂಭಗೊಂಡಿದೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಬೀರೂರಿನ ಸರಸ್ವತಿಪುರಂನಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ಧ ಶ್ರೀ ಮೈಲಾರಲಿಂಗಸ್ವಾಮಿಯ ಕಾರ್ಣೀಕ ಇಂದು ಮುಂಜಾನೆ ಐದು ಗಂಟೆಗೆ ಸಂಪನ್ನಗೊಂಡಿದೆ. ರಾಷ್ಟ್ರ ಮತ್ತು ರಾಜ್ಯದ ಆಗುಹೋಗುಗಳ ಮೇಲೆ ಶ್ರೀ ಮೈಲಾರಲಿಂಗಸ್ವಾಮಿ ಧಶರಥ ಪೂಜಾರರ ಬಾಯಲ್ಲಿ ಬಂದ ಕಾರ್ಣೀಕದ ನುಡಿಗಳು ಹಲವು ಪ್ರಶ್ನೆಗಳನ್ನು ಹುಟ್ಟಿ ಹಾಕಿವೆ. ಬುಧವಾರ ಬೆಳಗಿನ ಜಾವ 5 ಗಂಟೆಗೆ ಇಲ್ಲಿನ ಮಹಾನವಮಿ ಬಯಲಿನಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬೆಣ್ಣೆ ಮೆತ್ತಿದ ದೊಡ್ಡಬಿಲ್ಲಯ್ಯನನ್ನ ಏರಿದ ದಶರಥ ಪೂಜಾರರು ಕಾರ್ಣಿಕದ ನುಡಿಗಳನ್ನಾಡಿದರು. ಅದರ ಅರ್ಥವೇನು? ಇಲ್ಲಿದೆ ವಿವರ

ರಾಜ್ಯ ರಾಜಕಾರಣದ ಬಗ್ಗೆಯೇ ನುಡಿದಿದ್ದೇ?
ಈ ಬಾರಿ ಗೊರವಯ್ಯ ನುಡಿದ ಕಾರ್ಣಿಕ ರಾಜ್ಯ ರಾಜಕಾರಣದ ಮುಂದಿನ ಬೆಳವಣಿಗೆಗಳ ಬಗ್ಗೆ ಬೆಳಕು ಚೆಲ್ಲಿದಂತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ ಎಂದು ಪ್ರತಿ ಬಾರಿಯಂತೆ ಕಾರ್ಣಿಕದ ಮಾತನ್ನು ಆರಂಭಿಸಿದ್ದು, ಪಂಜರದ ಗಿಳಿಗಳು ಹಾರಿಹೋದಾವು, ಕಟ್ಟಿದ ಕೋಟೆ ಪರರ ಪಾಲಾಯಿತು ಎಂಬ ಗೊರವಯ್ಯ ನುಡಿದಿದ್ದಾರೆ. ಇದು ರಾಜ್ಯ ರಾಜಕಾರಣಕ್ಕೆ ಎಚ್ಚರಿಕೆಯ ಸಂದೇಶದ ಮುನ್ನುಡಿ ಎಂಬ ಮಾತುಗಳು ಕೇಳಿ ಬರ್ತಿದೆ.

ಬಿಎಸ್ ವೈ, ಸಿದ್ದರಾಮಯ್ಯಗೆ ಎಚ್ಚರಿಕೆಯ ಸಂದೇಶ?
ಪಂಜರದ ಗಿಳಿಗಳು ಹಾರಿ ಹೋದಾವು ಎಂಬ ಮಾತಿಗೆ, ಈಗಾಗಲೇ ಬಿಜೆಪಿ ಅನರ್ಹ ಶಾಸಕರನ್ನು ಕರೆದುಕೊಂಡು ಬಂದಿದ್ದು, ಈ ಶಾಸಕರು ಮತ್ತೆ ಬಿಜೆಪಿ ಬಿಟ್ಟು ಹೋಗಬಹುದು ಎಂಬುದು ಮೈಲಾರನ ಕಾರ್ಣಿಕದ ನುಡಿ ಎನ್ನಲಾಗಿದೆ. ಇನ್ನು ಕಟ್ಟಿದೆ ಕೋಟೆ ಪರರ ಪಾಲಾಯಿತು ಎಂಬುದು ಸಿದ್ದರಾಮಯ್ಯ ಕಟ್ಟಿದ ಕಾಂಗ್ರೆಸ್ ಕೋಟೆಗೆ ಮತ್ತೋರ್ವ ನಾಯಕನಾಗುವ ಸಂಭವದ ಎಚ್ಚರಿಕೆಯನ್ನೂ ನೀಡಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

ಉತ್ತಮ ಮಳೆ ಸುರಿಸಿದಾವು
ಇಡೀ ಚಿಕ್ಕಮಗಳೂರು ಜಿಲ್ಲೆ ಎರಡು ತಿಂಗಳಿನ ಹಿಂದೆ ಸುರಿದ ಮಳೆಯಿಂದ ತತ್ತರಿಸಿಹೋಯಿತು. ಜನರು ಮನೆ, ಹೊಲ ಗದ್ದೆಗಳನ್ನು ಕಳೆದುಕೊಂಡರು. ಪ್ರವಾಹದಿಂದಾಗಿ ಜನರು ಬೀದಿ ಪಾಲಾಗಬೇಕಾಯಿತು. ಆದರೆ ಕಡೂರು ಬೀರೂರಿನಲ್ಲಿ ಅಷ್ಟಾಗಿ ಮಳೆಯಾಗಿಲ್ಲ. ಹಾಗಾಗಿ ಇಲ್ಲಿ ಮುಂದೆ ಉತ್ತಮ ಮಳೆಯಾಗುತ್ತದೆ, ಸಮೃದ್ಧಿಯ ದಿನಗಳು ಎದುರಾಗುತ್ತದೆ ಎಂದು ಕಾರ್ಣೀಕ ನುಡಿದಿರುವುದರಿಂದ ಜನರು ಸಂತಸಗೊಂಡಿದ್ದಾರೆ.

ಹುಟ್ಟಿದ ಕೂಸೂ ಅಳು ನಿಲ್ಲಿಸುತ್ತದೆ
ಮಹಾನವಮಿ ಬಯಲಿನಲ್ಲಿ ಮೈಲಾರಲಿಂಗ ಕುಣಿತ ಅದ್ಬುತವಾಗಿರುವುದನ್ನು ನೋಡಲು ಭಕ್ತರು ಸಾವಿರಾರು ಸಂಖ್ಯೆಯಲ್ಲಿ ನಾ ಮುಂದು ತಾ ಮುಂದು ಎನ್ನುತ್ತಿರುತ್ತಾರೆ. ನಂತರ ಮೈಲಾರಲಿಂಗ ಸ್ವಾಮಿ ಪೂಜಾರರನ್ನು ಕಾರ್ಣಿಕ ನುಡಿಯಲು ಪ್ರೇರೆಪಿಸುತ್ತಿದ್ದಂತೆ ಗೊರವಯ್ಯನವರ ಢಮರುಗ ಶಬ್ದ ಭಕ್ತಿಯ ಅಲೆಯಲ್ಲಿ ತೇಲಿಸುತ್ತದೆ. ಮಹಾನವಮಿ ಬಯಲಿನಲ್ಲಿ ಅಂಬನ್ನು ಮೂರು ಬಾರಿ ಪ್ರದಕ್ಷಿಣೆ ಹಾಕಿ ಜಯಘೋಷ ಮೊಳಗಿ ಕಾರ್ಣಿಕ ನುಡಿಯುವ ಸಮಯ ಬಂದಾಗ ಹುಟ್ಟಿದ ಕೂಸು ಸಹ ಅಳು ನಿಲ್ಲಿಸುತ್ತದೆ ಎಂಬ ಮಾತಿದೆ. ಇಲ್ಲಿ ನುಡಿಯುವ ಕಾರ್ಣಿಕ ಕೇಳಲು ಸಾವಿರಾರು ಭಕ್ತರು ಆಗಮಿಸುತ್ತಾರೆ. ಮೈಲಾರಲಿಂಗನ ಕಾರ್ಣಿಕ ಕೇಳಿ ಅಂಬನ್ನು ಹೊಡೆದಾಗ ದಸರಾ ಮುಕ್ತಾಯವಾಗುತ್ತದೆ...












Click it and Unblock the Notifications