ಗಣೇಶನ ಜೊತೆ ನಿಂತಿರುವ ಪುನೀತ್ ರಾಜ್ಕುಮಾರ್ ಮೂರ್ತಿಗೆ ಹೆಚ್ಚಿದ ಬೇಡಿಕೆ
ಚಿಕ್ಕಮಗಳೂರು, ಆಗಸ್ಟ್, 30: ನಟ ಡಾ.ಪುನೀತ್ ರಾಜ್ಮಾರ್ ಅವರ ಹೆಗಲ ಮೇಲೆ ಕೈಹಾಕಿ ನಿಂತಿರುವ ಗಣೇಶನ ಮೂರ್ತಿಗೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಬೇಡಿಕೆ ಹೆಚ್ಚಾಗಿದೆ. ತರೀಕೆರೆ ಪಟ್ಟಣದ ಕುಂಬಾರ ಬೀದಿಯಲ್ಲಿ ಹತ್ತಾರು ವರ್ಷಗಳಿಂದ ವಿವಿಧ ರೀತಿಯಯಲ್ಲಿ ಗಣಪತಿ ಮೂರ್ತಿಯನ್ನು ತಯಾರು ಮಾಡುತ್ತಿದ್ದಾರೆ. ಈ ವರ್ಷ ಪುನೀತ್ ಅಗಲಿಕೆಯಿಂದ ಅವರ ಅಭಿಮಾನಿ ಆದ ಕಲಾವಿದ ಚಂದ್ರು ಹಾಗೂ ಪ್ರಸನ್ನ ಎಂಬುವವರು ಈ ಅದ್ಭುತ ಮೂರ್ತಿಯನ್ನು ನಿರ್ಮಿಸಿದ್ದಾರೆ.
ತರೀಕೆರೆ ಪಟ್ಟಣದ ಮೋಹಿತ್ ಕುಮಾರ್ ಎಂಬುವವರು ಈ ಗಣೇಶ ಮೂರ್ತಿಯನ್ನು ಹೇಳಿ ಮಾಡಿಸಿದ್ದಾರೆ. ಗಣೇಶನ ಜೊತೆ ಪುನೀತ್ ರಾಜ್ಕುಮಾರ್ ನಿಂತಿದ್ದು, ಈ ಮೂರ್ತಿಗೆ ಬೇಡಿಕೆ ಹೆಚ್ಚಾಗಿದೆ. ಯುವಕರು ಈ ಮೂರ್ತಿ ನಮಗೆ ಬೇಕು ಎಂದು ಮೂರ್ತಿ ತಯಾರಕರ ಬಳಿ ಪಟ್ಟು ಹಿಡಿದಿದ್ದಾರೆ. ಸುಮಾರು 10 ಸಾವಿರ ರೂಪಾಯಿ ಮೌಲ್ಯದ ಈ ಗಣಪತಿಗೆ ಮೋಹಿತ್ ಕುಮಾರ್ ಅವರು ಈಗಾಗಲೇ ಮುಂಗಡ ಹಣವನ್ನು ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡುತ್ತಿರುವ ಯುವಕರು 15-20 ಸಾವಿರ ರೂಪಾಯಿ ಕೊಡುತ್ತೇವೆ ಈ ಮೂರ್ತಿಯನ್ನು ನಮಗೆ ಕೊಡಿ ಎಂದು ಒತ್ತಾಯಿಸಿದ್ದಾರೆ. ಆದರೆ ಚಂದ್ರು ಅವರು ಇದನ್ನ ಯಾರಿಗೂ ನೀಡಿಲ್ಲ.

ಗಣೇಶನ ಜೊತೆಗಿರುವ ಅಪ್ಪು ಮೂರ್ತಿಗೆ ಹೆಚ್ಚಿದ ಬೇಡಿಕೆ
ಇನ್ನೂ ತರೀಕೆರೆ ಪಟ್ಟಣದ ಕುಂಬಾರ ಬೀದಿಯ ಪುಟ್ಟಣ್ಣ ಎಂಬ ಕಲಾವಿದ ಕೂಡ ಗಣಪತಿ ಜೊತೆ ಅಪ್ಪು ಇರುವ ಮೂರ್ತಿಯನ್ನು ತಯಾರಿಸಿದ್ದಾರೆ. ಈ ಮೂರ್ತಿ ಕೂಡ ಅದ್ಭುತವಾಗಿ ಮೂಡಿ ಬಂದಿದೆ. ಗಣಪತಿಯ ಎಡ ಭಾಗದಲ್ಲಿ ಗೌರಿ ಇರುವಂತೆ ಸ್ಥಳ ಬಿಟ್ಟಿದ್ದು, ಬಲ ಭಾಗದಲ್ಲಿ ಪುನೀತ್ ರಾಜ್ಕುಮಾರ್ ಇರುವಂತೆ ಮೂರ್ತಿಯನ್ನು ರಚಿಸಿದ್ದಾರೆ. ಇವರು ಹತ್ತಾರು ವರ್ಷಗಳಿಂದ ಗಣಪತಿ ಮೂರ್ತಿ ಮಾಡಿಕೊಂಡು ಬರುತ್ತಿದ್ದು, ಈ ವರ್ಷದ ಅಪ್ಪು ಮೂರ್ತಿಗೆ ಭಾರಿ ಬೇಡಿಕೆ ಬಂದಿದೆ.
|
ಅಪ್ಪು ಅಭಿಮಾನಿಗಳಿಂದ ಹಬ್ಬಕ್ಕೆ ಭರ್ಜರಿ ತಯಾರಿ
ಮಳೆಯ ಆರ್ಭಟದ ನಡುವೆಯೂ ಗಣೇಶ ಹಬ್ಬದ ತಯಾರಿ ಜೋರಾಗಿದೆ. ಮಹಾಮಾರಿ ಕೊರೊನಾ ಕಳೆದ ಎರಡು-ಮೂರು ವರ್ಷಗಳಿಂದ ಗಣೇಶ ಹಬ್ಬಕ್ಕೆ ಕರಿನೆರಳು ಬೀರಿತ್ತು. ಇದರಿಂದ ಸರಿಯಾಗಿ ಹಬ್ಬವನ್ನು ಆಚರಣೆ ಮಾಡಿರಲಿಲ್ಲ. ಈ ಬಾರಿ ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಮಾಡಲು ಜನರು ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇತ್ತ ಅಪ್ಪು ಅಭಿಮಾನಿಗಳೂ ಕೂಡ ಗಣೇಶನೊಂದಿಗೆ ಪುನೀತ್ ಮೂರ್ತಿ ಇಟ್ಟು ಪೂಜೆ ಮಾಡುವುದಕ್ಕೆ ಸಜ್ಜಾಗಿದ್ದಾರೆ. ರಾಜ್ಯ, ದೇಶ, ವಿದೇಶದಲ್ಲಿರುವ ಅಪ್ಪು ಅಭಿಮಾನಿಗಳು ನಾಳೆಯಿಂದ ಅಪ್ಪು ಜೊತೆಗಿರುವ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲು ತುದಿಗಾಲಲ್ಲಿ ನಿಂತಿದ್ದಾರೆ.

ಟ್ವಿಟರ್ನಲ್ಲಿ ಅಪ್ಪು ಚತುರ್ಥಿ ಟ್ರೆಂಡಿಂಗ್ ಶುರು
ಈಗಾಗಲೇ ಅಪ್ಪು ಚತುರ್ಥಿ ಆಚರಣೆ ಮಾಡಲು ಕರೆ ನೀಡಲಾಗಿದೆ. ಫ್ಯಾನ್ಸ್ ಕರೆ ನೀಡುತ್ತಿದ್ದಂತೆ ಟ್ವಿಟರ್ನಲ್ಲಿ ಪುನೀತ್ ಚತುರ್ಥಿ ಟ್ರೆಂಡಿಂಗ್ ಶುರುವಾಗಿದೆ. ಗಣೇಶ ಮೂರ್ತಿ ಜೊತೆಗೆ ಪುನೀತ್ ರಾಜ್ಕುಮಾರ್ ಇರುವ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಂದು ಹಾಗೂ ನಾಳೆ ದೇಶಾದ್ಯಂತ ಗೌರಿ-ಗಣೇಶ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ.

ರಾರಾಜಿಸುತ್ತಿರುವ 'ರಾಜಕುಮಾರ'
ಸಾರ್ವಜನಿಕ ಉತ್ಸವ ಮಾಡುತ್ತಿರುವವರು ಸ್ಪರ್ಧೆಗೆ ಬಿದ್ದವರಂತೆ ಸುಂದರವಾದ, ಎತ್ತರದ ಗಣೇಶ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸುತ್ತಿದ್ದಾರೆ. ಈ ಬಾರಿ ರಾಜ್ಯದಲ್ಲಿ ಗಣೇಶ ಚತುರ್ಥಿ ಜೊತೆಗೆ ಪುನೀತ್ ಚತುರ್ಥಿ ಕೂಡ ಆಚರಿಸಲಾಗುತ್ತಿರುವುದು ವಿಶೇಷವಾಗಿದೆ. ಗಣೇಶ ಮೂರ್ತಿ ಜೊತೆ ಪುನೀತ್ ರಾಜ್ಕುಮಾರ್ ಇರುವ ಫೋಟೊಗಳೂ ಇದೀಗ ಎಲ್ಲೆಡೆ ಸದ್ದು ಮಾಡುತ್ತಿವೆ.












Click it and Unblock the Notifications