ಮೂಡಿಗೆರೆ: KSRTC ಬಸ್ ಮತ್ತು ಕಾರಿನ ನಡುವೆ ಭೀಕರ ಅಪಘಾತ, ತಾಯಿ, ಮಗ ಸಾವು
ಚಿಕ್ಕಮಗಳೂರು, ಆಗಸ್ಟ್, 12: ಸರ್ಕಾರಿ (KSRTC) ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಪರಿಣಾಮ ಕಾರಿನಲ್ಲಿದ್ದ ತಾಯಿ-ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೋರ್ವನ ಸ್ಥಿತಿ ಗಂಭೀರವಾದ ಘಟನೆ ಮೂಡಿಗೆರೆ ತಾಲೂಕಿನ ಮುದ್ರೆಮನೆ ಬಳಿ ನಡೆದಿದೆ.
ಪೂಜಾ ಹಿರೇಮಠ್, ರಾಜಶೇಖರ್ ಹಿರೇಮಠ್ ಮೃತ ದುರ್ದೈವಿಗಳು. ಇನ್ನು ಘಟನೆಯಲ್ಲಿ ಶಿವಯಾಗಯ್ಯ ಹಿರೇಮಠ್ ಗಂಭೀರವಾಗಿದ್ದು, ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇವರೆಲ್ಲರೂ ಮೂಲತಃ ಬೆಂಗಳೂರಿನ ಕೋಣನಕುಂಟೆಯವರು ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಈ ಘಟನೆ ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.

ಧರ್ಮಸ್ಥಳದಿಂದ ಮೂಡಿಗೆರೆ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಕಾರು ಹಾಗೂ ಸಕಲೇಪುರದಿಂದ ಮೂಡಿಗೆರೆ ಕಡೆ ಬರುತ್ತಿದ್ದ ಸರ್ಕಾರಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳಕ್ಕೆ ಮೂಡಿಗೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮರಕ್ಕೆ ಡಿಕ್ಕಿ ಹೊಡೆದ KSRTC ಬಸ್
ಇತ್ತೀಚೆಗಷ್ಟೆ ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ (KSRTC) ಬಸ್ವೊಂದು ರಸ್ತೆ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ನ ಮೇಲೆ ಮರ ಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಸೀಕೆ ಗ್ರಾಮದಲ್ಲಿ ನಡೆದಿತ್ತು.
ಕೆಎಸ್ಆರ್ಟಿಸಿ ಬಸ್ ಬೆಳಗ್ಗೆ 6 ಗಂಟೆಗೆ ಎನ್.ಆರ್.ಪುರದಿಂದ ಮೈಸೂರಿಗೆ ಹೊರಟಿತ್ತು. ಈ ವೇಳೆ ಸುಮಾರು 15 ಕಿಲೋಮೀಟರ್ ದೂರ ಕ್ರಮಿಸಿದಾಗ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರಕ್ಕೆ ಗುದ್ದಿದೆ. ಪರಿಣಾಮ ಮರ ಬಸ್ನ ಮೇಲೆ ಬಿದ್ದು ಕೆಲವು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದವು.
ಬಸ್ನಲ್ಲಿ ಸುಮಾರು 28 ಜನ ಪ್ರಯಾಣಿಕರಿದ್ದು, ಇದರಲ್ಲಿ 10-12 ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿ ಅಪಾಯದಿಂದ ಪಾರಾಗಿದ್ದಾರೆ. ಇನ್ನು ಗಾಯಾಳುಗಳನ್ನು ಎನ್.ಆರ್.ಪುರ ಹಾಗೂ ಬಾಳೆಹೊನ್ನೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿತ್ತು.












Click it and Unblock the Notifications