ಚಿಕ್ಕಮಗಳೂರು: ಭಾವೈಕ್ಯತೆಯ ಗಣಪತಿ ಪ್ರತಿಷ್ಠಾಪನೆ, ಸಮಿತಿಗೆ ಮುಸ್ಲಿಂ ಮಹಿಳೆ ಅಧ್ಯಕ್ಷೆ!
ಚಿಕ್ಕಮಗಳೂರು, ಸೆಪ್ಟೆಂಬರ್ 08: ಗಣೇಶ ಚತುರ್ಥಿ ಆಚರಣೆ, ಗಣೇಶ ವಿಸರ್ಜನೆ ವಿಚಾರದ ಹಲವು ಕಡೆ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗುತ್ತದೆ. ಆದ್ದರಿಂದ ಹಬ್ಬದ ಸಮಯದಲ್ಲಿ ಪೊಲೀಸರು ಶಾಂತಿ ಸಭೆಗಳನ್ನು ನಡೆಸುತ್ತಾರೆ, ಕಟ್ಟೆಚ್ಚರ ವಹಿಸುತ್ತಾರೆ. ಆದರೆ ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್. ಪುರದಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮಯದಾಯದವರು ಸೇರಿ ಭಾವೈಕ್ಯತೆಯ ಗಣೇಶಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಈ ಮೂಲಕ ಸಮಾಜಕ್ಕೆ ಸೌಹಾರ್ದತೆಯ ಸಂದೇಶವನ್ನು ಸಾರಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಎನ್. ಆರ್.ಪುರ ತಾಲೂಕಿನ ರಾಜೀವ್ ನಗರದಲ್ಲಿ ಪ್ರತಿಷ್ಟಾಪನೆ ಮಾಡಲಾಗಿರುವ ಗಣೇಶ ಮೂರ್ತಿ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಭಾನುವಾರ ಬೆಳಗ್ಗೆ 9 ಗಂಟೆಗೆ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದವರು ಎಲ್ಲರೂ ಒಟ್ಟಾಗಿ ಸೇರಿ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ, ಸಂಭ್ರಮಿಸಿದರು.

ಮುಸ್ಲಿಂ ಮಹಿಳೆಯೇ ಅಧ್ಯಕ್ಷೆ: ವಿನಾಯಕ ಸೇವಾ ಸಮಿತಿ, ರಾಜೀವ್ ನಗರದಲ್ಲಿ ಪ್ರತಿಷ್ಠಾಪನೆ ಮಾಡಿರುವ ಈ ಗಣೇಶನಿಗೆ ಭಾವೈಕ್ಯತೆಯ ಗಣಪ ಎಂದೇ ಹೆಸರಿಡಲಾಗಿದೆ. ಅಲ್ಲದೇ ಈ ಗಣಪತಿ ಸಮಿತಿಗೆ ಅಧ್ಯಕ್ಷೆಯೇ ಮುಸ್ಲಿಂ ಮಹಿಳೆ ಆಗಿರುವುದು ವಿಶೇಷ. ಹಿಂದೂ ಮುಸ್ಲಿಮರ ಮಧ್ಯೆ ಆಗಾಗ್ಗೆ ಅನೇಕ ವಿಚಾರಕ್ಕೆ ಘರ್ಷಣೆಗಳು ನಡೆಯುತ್ತಲೇ ಇರುತ್ತವೆ. ಆದರೆ ಇಂತಹ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ.
ರಾಜೀವ್ ನಗರದಲ್ಲಿ ಪ್ರತಿಷ್ಠಾಪನೆಯಾಗಿರುವ ಗಣೇಶ ಧರ್ಮವನ್ನೂ ಮೀರಿ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಕಳೆದ 14 ವರ್ಷಗಳಿಂದ ಇದೇ ಗ್ರಾಮದ ಮುಸ್ಲಿಂ ಮಹಿಳೆ ಜುಬೇದಾ ಗಣಪತಿ ಸೇವಾ ಸಮಿತಿ ಅಧ್ಯಕ್ಷರಾಗಿ ಹಿಂದೂ ಸಮುದಾಯದರ ಜೊತೆ ಸೇರಿ ಗಣೇಶೋತ್ಸವ ನಡೆಸಿಕೊಂಡು ಬರುತ್ತಿದ್ದಾರೆ.
ಈ ಬಾರಿಯೂ ಗಣೇಶನ ಮೂರ್ತಿಯನ್ನು ತಂದು ಭಾನುವಾರ ಬೆಳಗ್ಗೆ ಪ್ರತಿಷ್ಠಾಪಿಸಿ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದ ಮಕ್ಕಳನ್ನು ಒಂದು ಕಡೆ ಸೇರಿಸಿ ಯಾವುದೇ ತಾರತಮ್ಯವಿಲ್ಲದೇ ಎಲ್ಲರೂ ಒಟ್ಟಾಗಿ ಪೂಜೆ ಸಲ್ಲಿಸಲಾಗಿದೆ. ಮಕ್ಕಳಿಗೂ ಸಹ ಭಾವೈಕ್ಯತೆ ಸಂದೇಶವನ್ನು ಸಾರಲಾಗಿದೆ.
ಭಾನುವಾರ ಬೆಳಗ್ಗೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಮಕ್ಕಳು, ಹಿರಿಯರು ಒಂದಾಗಿ ಸೇರಿ ಗಣಪತಿ ಬಪ್ಪ ಮೋರಿಯ, ಗಣಪತಿ ಬಪ್ಪ ಮೋರಿಯ ಎಂದು ಘೋಷಣೆ ಕೂಗಿದರು. ರಾಜೀವ್ ನಗರದ ಗಣಪತಿಗೆ ಜೈ ಜೈ ಎಂದು ಘೋಷಣೆಗಳನ್ನು ಮೊಳಗಿಸಿದರು.
ರಾಜೀವ್ ನಗರದ ಗಣಪತಿ ಸೇವಾ ಸಮಿತಿ ಅಧ್ಯಕ್ಷೆ ಜುಬೇದಾ ಮಾತನಾಡಿ ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳನ್ನು ಕೋರಿದರು. ಪ್ರತಿ ವರ್ಷದಂತೆ ಈ ವರ್ಷವೂ ನಾವು ರಾಜೀವ್ ನಗರದಲ್ಲಿ ಭಾವೈಕ್ಯತೆಯ ಗಣಪತಿಯನ್ನು ಪ್ರತಿಷ್ಠಾಪಿಸಿದ್ದೇವೆ ಎಂದರು.
14 ವರ್ಷಗಳಿಂದ ನಾವು ರಾಜೀವ್ ನಗರದಲ್ಲಿ ಗಣಪತಿ ಸೇವಾ ಸಮಿತಿ ಮೂಲಕ ಗಣಪತಿ ಪ್ರತಿಷ್ಠಾಪನೆ ಮಾಡಿ ಪೂಜಿಸುತ್ತಿದ್ದೇವೆ. ಯಾವ ಧರ್ಮದ ಭೇದವಿಲ್ಲದೇ ಎಲ್ಲರೂ ಗಣೇಶನನ್ನು ಪೂಜಿಸುತ್ತಾರೆ. ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮಯದಾಯದವರು ಸೇರಿ ಪ್ರತಿವರ್ಷ ಹಬ್ಬ ಆಚರಣೆ ಮಾಡುತ್ತೇವೆ ಎಂದರು.
ಈ ಮಕ್ಕಳಲ್ಲಿ ಸಹ ಈ ಕುರಿತು ತಿಳುವಳಿಕೆ ಮೂಡಿಸುತ್ತಿದ್ದೇವೆ. ಕ್ರಿಶ್ಚಿಯನ್ ಸಮುದಾಯದವರು ಸಹ ಈ ಗಣಪತಿ ಸೇವಾ ಸಮಿತಿಯ ಸದಸ್ಯರಾಗಿದ್ದಾರೆ. ಸರ್ವರಿಗೂ ದೇವರು ಒಳಿತನ್ನು ಮಾಡಲಿ ಎಂದು ಶುಭ ಹಾರೈಸಿದರು.












Click it and Unblock the Notifications