ಸ್ಟಾರ್ಡಂ ನನ್ನ ತಲೆಗೇರಿತ್ತು, ಕಾಯಿಲೆ ದೊಡ್ಡ ಪಾಠ ಕಲಿಸಿತು ಎಂದ ಸಮಂತಾ! ವಿಜಯ್ ಸಿಎಂ ಆಗೋದು ಇವ್ರಿಗೆ ಮೊದಲೇ ಗೊತ್ತಿತ್ತಂತೆ!
ಮಾ ಇಂಟಿ ಬಂಗಾರಂ ಅನ್ನೋ ಸಿನಿಮಾದಲ್ಲಿ ಹುಲಿಯಂತೆ ಸಾಹಸ ಪರಾಕ್ರಮ ಮೆರೆದ ಸಮಂತಾ ರುತ್ ಪ್ರಭು ಸದ್ಯಕ್ಕೆ ಸಿನಿಮಾ ಗೆಲ್ಲಿಸುವ ಹುಮ್ಮಸ್ಸಿನಲ್ಲಿದ್ದಾರೆ. ಸಿನಿಮಾ ಪ್ರಚಾರ ಮಾಡುತ್ತಲೇ ತನಗಿದ್ದ ಸ್ಟಾರ್ಡಂ ಎಡಿಕ್ಷನ್, ವಿಚಿತ್ರ ರೋಗ ಬಂದು ಎಲ್ಲ ಬದಲಾದ ಬಗೆಯ ಬಗ್ಗೆ ಮಾತನಾಡಿದ್ದಾರೆ. ವಿಜಯ್ ಸಿಎಂ ಆಗೋ ಸೂಚನೆ ಇವ್ರಿಗೆ ಮೊದಲೇ ಸಿಕ್ಕಿತ್ತಂತೆ.
ಸಮಂತಾ ರುತ್ ಪ್ರಭು ಅವರು ತಮ್ಮ ಲೈಫ್ ಮತ್ತು ಕೆರಿಯರ್ ಬಗ್ಗೆ ಆಡಿರುವ ಮಾತುಗಳು ಈಗ ಸಖತ್ ವೈರಲ್ ಆಗ್ತಿವೆ. ಮಯೋಸೈಟಿಸ್ ಅನ್ನೋ ಕಾಯಿಲೆ ಬಂದ ಮೇಲೆ ಅವರ ಯೋಚನೆಗಳು ಹೇಗೆ ಬದಲಾದವು, ಸಿನಿಮಾ ರಂಗದ ಸ್ಟಾರ್ಡಮ್ ಕ್ರೇಜ್ ಅವರ ತಲೆಗೆ ಹೇಗೆ ಏರಿತ್ತು ಅನ್ನೋದನ್ನೆಲ್ಲಾ ಅವರು ಯಾವುದೇ ಮುಚ್ಚುಮರೆ ಇಲ್ಲದೆ ಒಪ್ಪಿಕೊಂಡಿದ್ದಾರೆ.

ಬಾಲಿವುಡ್ ಮತ್ತು ಸೌತ್ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದ ಸಮಂತಾ, ತಮ್ಮ ಹೊಸ ತೆಲುಗು ಸಿನಿಮಾ 'ಮಾ ಇಂಟಿ ಬಂಗಾರಂ' ಪ್ರಚಾರದ ವೇಳೆ ಹಳೇ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಆರಂಭದಲ್ಲಿ ಸಿನಿಮಾ ರಂಗಕ್ಕೆ ಬಂದಾಗ ಅವರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇತ್ತು. ಒಂದು ಸಣ್ಣ ಊರಿನಿಂದ ಬಂದು ಇಷ್ಟೊಂದು ದೊಡ್ಡ ಮಟ್ಟದ ಸ್ಟಾರ್ ಆಗುತ್ತೇನೆ ಎಂದು ಅವರು ಲೈಫ್ನಲ್ಲಿ ಅಂದುಕೊಂಡಿರಲೇ ಇಲ್ಲವಂತೆ. ಜನ ಥಿಯೇಟರ್ನಲ್ಲಿ ಅವರ ಹೆಸರು ಕೂಗಿ ಜೈಕಾರ ಹಾಕುತ್ತಿದ್ದರೆ, ಸಮಂತಾಗೆ ಅದೊಂದು ದೊಡ್ಡ ಕಿಕ್ ಕೊಡುತ್ತಿತ್ತು.
ಸ್ಟಾರ್ಡಂಗೆ ಅಡಿಕ್ಟ್
ಇದೇ ಖುಷಿಯಲ್ಲಿ ಅವರು ತಮಗೆ ತಿಳಿಯದಂತೆ 'ಸ್ಟಾರ್ಡಮ್' ಅನ್ನೋದಕ್ಕೆ ಅಡಿಕ್ಟ್ ಆಗಿಬಿಟ್ಟರು. ಕೈತುಂಬಾ ಸಿನಿಮಾಗಳು, ಸಾಲು ಸಾಲು ಹಿಟ್ಸ್ ಸಿಗುತ್ತಿದ್ದಾಗ ಜನ ಇವರನ್ನು 'ಗೋಲ್ಡನ್ ಲೆಗ್' ಅಂತ ಕರೆಯೋಕೆ ಶುರು ಮಾಡಿದರು. ಆ ಹೊತ್ತಲ್ಲಿ ಸಮಂತಾ ಸಿನಿಮಾ ಒಪ್ಪಿಕೊಂಡರೆ ಸಾಕು ಅದು ಗ್ಯಾರಂಟಿ ಸೂಪರ್ ಹಿಟ್ ಅನ್ನೋ ರೇಂಜ್ ಇತ್ತು. ಈ ಇಮೇಜ್ ಉಳಿಸಿಕೊಳ್ಳಲು ಅವರು ವರ್ಷಕ್ಕೆ ಐದಾರು ಸಿನಿಮಾಗಳನ್ನು ಬ್ಯಾಕ್-ಟು-ಬ್ಯಾಕ್ ಒಪ್ಪಿಕೊಳ್ಳುತ್ತಾ ಹಗಲು ರಾತ್ರಿ ಓಡುತ್ತಲೇ ಇದ್ದರು. ಆದರೆ ಈಗ ತಿರುಗಿ ನೋಡಿದರೆ ಅವರಿಗೆ ತಾನು ಆ ಮಟ್ಟಿಗೆ ಕಷ್ಟಪಡಬೇಕಿರಲಿಲ್ಲ ಅನಿಸುತ್ತದೆಯಂತೆ. , ಆ ದಿನಗಳಲ್ಲಿ ತಾನು ಹೆಮ್ಮೆ ಪಡದಂತಹ, ಕೇವಲ ದುಡ್ಡು ಮತ್ತು ಹೆಸರಿಗಾಗಿ ಮಾಡಿದ ಎಷ್ಟೋ ಕಳಪೆ ಸಿನಿಮಾಗಳು ಕೂಡ ಇವೆ ಎಂದು ಸಮಂತಾ ಬೇಸರದಿಂದ ಒಪ್ಪಿಕೊಂಡಿದ್ದಾರೆ. ಬರೀ ಬ್ಲಾಕ್ಬಸ್ಟರ್ ಹಿಟ್ಸ್ ಕೊಡುವುದರಲ್ಲೇ ಬ್ಯುಸಿಯಾಗಿದ್ದ ಅವರಿಗೆ, ತಮ್ಮ ನಟನೆಯನ್ನು ಸುಧಾರಿಸಿಕೊಳ್ಳಬೇಕು ಅಥವಾ ಸಿನಿಮಾಗೆ ನಟಿಯಾಗಿ ಏನು ಕಾಂಟ್ರಿಬ್ಯೂಷನ್ ಕೊಡುತ್ತಿದ್ದೇನೆ ಎಂದು ಯೋಚಿಸುವ ತಾಳ್ಮೆಯೇ ಇರಲಿಲ್ಲವಂತೆ.
ತಾನೊಬ್ಬಳೇ ನಂಬರ್ ಒನ್
ಯಶಸ್ಸಿನ ತುತ್ತತುದಿಯಲ್ಲಿ ತೇಲುತ್ತಿದ್ದಾಗ, ಕೆರಿಯರ್ಗೆ ಕೊನೆಯೇ ಇಲ್ಲ, ತಾನೊಬ್ಬಳೇ ನಂಬರ್ ಒನ್ ಅಂದುಕೊಳ್ಳುವ ಅಹಂಕಾರ ತಲೆಗೆ ಏರಿತ್ತಂತೆ. ಇಂತಹ ಟೈಮ್ನಲ್ಲಿ ಅಂದರೆ 2022ರಲ್ಲಿ ಅವರಿಗೆ ಮಯೋಸೈಟಿಸ್ ಅನ್ನೋ ಅಪರೂಪದ ಆಟೋ ಇಮ್ಯೂನ್ ಸಮಸ್ಯೆ ಶಾಕ್ ನೀಡಿತು. ಈ ಸಮಸ್ಯೆ ಬಂದಾಗ ಸಮಂತಾ ಅಕ್ಷರಶಃ ಏನೂ ತೋಚದೇ ಕುಳಿತುಬಿಟ್ಟಿದ್ದರು. ಆದರೆ ಈ ಬ್ರೇಕ್ ಅವರ ಕಣ್ಣು ತೆರೆಸಿತು. ಸಿನಿಮಾ ಲೈಫ್ ಅಂದರೆ ಎಲ್ಲವೂ ಅಲ್ಲ, ಈ ರೇಸ್ಗೆ ಒಂದು ಫಿನಿಶಿಂಗ್ ಲೈನ್ ಇದ್ದೇ ಇರುತ್ತದೆ ಮತ್ತು ಚಿತ್ರರಂಗದಲ್ಲಿ ಯಾರೂ ಪರ್ಮನೆಂಟ್ ಅಲ್ಲ ಅನ್ನೋ ಕಹಿ ಸತ್ಯ ಅವರಿಗೆ ಅರ್ಥವಾಯಿತು. ಈ ವಿರಾಮದ ನಂತರ ಸಮಂತಾ ತನ್ನ ಲೈಫ್ ಸ್ಟೈಲ್ ಅನ್ನು ಕಂಪ್ಲೀಟ್ ಆಗಿ ಬದಲಾಯಿಸಿಕೊಂಡಿದ್ದಾರೆ. ಈಗ ಬರೀ ಕಮರ್ಷಿಯಲ್ ಸಿನಿಮಾಗಳ ಹಿಂದೆ ಓಡದೆ, ಸ್ವಂತ ಪ್ರೊಡಕ್ಷನ್ ಹೌಸ್ ಆರಂಭಿಸಿ ಒಳ್ಳೆಯ ಕಂಟೆಂಟ್ ಇರುವ ಸಿನಿಮಾಗಳನ್ನು ಮಾಡುತ್ತಿದ್ದೇನೆ ಅಂತಾರೆ ಸಮಂತಾ.
ಹೊಸ ಸಿನಿಮಾ ಮಾ ಇಂಟಿ ಬಂಗಾರಂ ರಿಲೀಸ್ ಖುಷಿಯಲ್ಲಿ ಸಮಂತಾ ಇತ್ತೀಚೆಗೆ ಚೆನ್ನೈಗೆ ಹೋದಾಗ ತಮಿಳುನಾಡಿನ ಹೊಸ ಮುಖ್ಯಮಂತ್ರಿ ಮತ್ತು ನಟ ದಳಪತಿ ವಿಜಯ್ ಅವರನ್ನು ಭೇಟಿ ಮಾಡಿದ್ದಾರೆ. ವಿಜಯ್ ಜೊತೆ ಮೂರು ಸಿನಿಮಾಗಳಲ್ಲಿ ನಟಿಸಿರುವ ಸಮಂತಾಗೆ ಅವರ ಮೇಲೆ ಮೊದಲಿನಿಂದಲೂ ದೊಡ್ಡ ಗೌರವ ಇತ್ತು. 'ವಿಜಯ್ ಕೇವಲ ಸಿನಿಮಾ ಹೀರೋ ಆಗಿ ಮಾತ್ರ ಉಳಿಯುವವರಲ್ಲ, ಅವರಿಗೆ ಇದಕ್ಕಿಂತ ದೊಡ್ಡ ಜವಾಬ್ದಾರಿ ಸಿಕ್ಕೇ ಸಿಗುತ್ತದೆ ಎಂದು ನನಗೆ ಮೊದಲೇ ಅನಿಸುತ್ತಿತ್ತು' ಎಂದು ಸಮಂತಾ ಹೇಳಿದ್ದಾರೆ.
ಸಿನಿಮಾ ರಂಗದಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದಾಗಲೇ, ಎಲ್ಲವನ್ನೂ ಬಿಟ್ಟು ರಾಜಕೀಯದಂತಹ ಕಠಿಣ ಕ್ಷೇತ್ರಕ್ಕೆ ಹೆಜ್ಜೆ ಇಟ್ಟ ವಿಜಯ್ ಅವರ ಧೈರ್ಯವನ್ನು ನೋಡಿ ಸಮಂತಾ ಸಖತ್ ಇಂಪ್ರೆಸ್ ಆಗಿದ್ದಾರೆ. ಯಾರಿಗೊತ್ತು, ಮುಂದೊಂದು ದಿನ ಇವರು ರಾಜಕೀಯಕ್ಕಿಳಿದರೂ ಅಚ್ಚರಿ ಇಲ್ಲ.
(ಬರಹ: ಭವಾನಿ ಭಟ್)














Click it and Unblock the Notifications