ಚಿಕ್ಕಮಗಳೂರಿನಲ್ಲಿ ಹಿಂದೂ ಮಹಾ ಗಣಪತಿ; ಮೆರವಣಿಗೆಯಲ್ಲಿ ಡಿಜೆ ಸೌಂಡ್ಗೆ ಸಿ.ಟಿ. ರವಿ ಸ್ಟೆಪ್
ಚಿಕ್ಕಮಗಳೂರು, ಸೆಪ್ಟೆಂಬರ್ 11: ಕಾಫಿನಾಡಿನ ಪ್ರತಿಷ್ಠಿತ ಹಿಂದೂ ಮಹಾ ಗಣಪತಿಯ ವಿಸರ್ಜನಾ ಮೆರವಣಿಗೆಯನ್ನು ಅದ್ಧೂರಿ ನಡೆಸಲಾಗಿದ್ದು, ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಗಣೇಶ ಮೂರ್ತಿ ವಿಸರ್ಜನೆ ಮಾಡಲಾಗಿದೆ. ಮೆರವಣಿಗೆಯಲ್ಲಿ ಯುವಕ, ಯುವತಿಯರು ಕುಣಿದು ಕುಪ್ಪಳಿಸಿದ್ದಾರೆ.
ಕಳೆದ 9 ವರ್ಷಗಳಿಂದ ಚಿಕ್ಕಮಗಳೂರು ನಗರದಲ್ಲಿ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ ಮಾಡುತ್ತಿದ್ದಾರೆ. ಈ ಬಾರಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ಪುಟಾಣಿ ಮಕ್ಕಳು, ಯುವಕ, ಯುವತಿಯರು ಕುಣಿದುಕುಪ್ಪಳಿಸಿ ಗಣಪನಿಗೆ ಸಂಭ್ರಮದ ಬೀಳ್ಕೊಡುಗೆ ನೀಡಿದರು. ಮೆರವಣಿಗೆಯುದ್ದಕ್ಕೂ ಕಾಫಿನಾಡಿನ ಜನ ಗಣೇಶನಿಗೆ ವಿಶೇಷ ಪೂಜೆ, ಮಂಗಳಾರತಿ ಮಾಡಿಸಿ ಸಂಭ್ರಮಿಸಿದರು. ಬಸವನಹಳ್ಳಿ ಓಂಕಾರೇಶ್ವರ ದೇವಸ್ಥಾನದಿಂದ ಹೊರಟ ಮೆರವಣಿಗೆ ಆಶೀರ್ವಾದ ಸರ್ಕಲ್, ವಿಜಯಪುರ ಮುಖ್ಯ ರಸ್ತೆ, ಮಲ್ಲಂದೂರು ರಸ್ತೆ, ಉಪ್ಪಳ್ಳಿ ವೃತ್ತದ ವರೆಗೆ ತೆರಳಿತ್ತು. ಹಿಂದಿರುಗಿ ಬಂದು ಐಜಿ ರಸ್ತೆ, ರಾಘವೇಂದ್ರ ಸ್ವಾಮಿ ಮಠದ ರಸ್ತೆ, ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತ, ಕೆಎಂ ರಸ್ತೆ ಮೂಲಕ ಬಸವನಹಳ್ಳಿ ಕೆರೆ ತಲುಪಿತು.
ಅಲಂಕೃತಗೊಂಡ ಗಣಪ ವಿರಾಜಮಾನನಾಗುತ್ತಿದ್ದಂತೆ ಮಂಗಳವಾದ್ಯದೊಂದಿಗೆ ಮೆರವಣಿಗೆ ಆರಂಭಗೊಂಡಿತು. ಬಿಳಿ ಬಣ್ಣದ ಸಾಂಪ್ರದಾಯಿಕ ಬಟ್ಟೆ ಧರಿಸಿದ ಹಿಂದೂ ಮಹಾ ಗಣಪತಿ ಸಮಿತಿ ಸದಸ್ಯರು ಮೆರವಣಿಗೆಗೆ ವಿಶೇಷ ಕಳೆ ತಂದಿದ್ದರು. ಅಲ್ಲದೆ ಸಂಭ್ರಮದ ಮೆರವಣಿಗೆಗೆ ಭಕ್ತಿ, ಭಾವವನ್ನು ತುಂಬಿದರು.

ಮೆರವಣಿಗೆಯಲ್ಲಿ ವೀರ ಸಾವರ್ಕರ್ ಭಾವಚಿತ್ರ
ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಜೊತೆಗೆ ಸಾವರ್ಕರ್ ಅವರ ಭಾವಚಿತ್ರ ಗಮನ ಸೆಳೆಯಿತು. ನೂರಾರು ಭಕ್ತರು ಸಾವರ್ಕರ್ ಭಾವಚಿತ್ರದೊಂದಿಗೆ ಫೊಟೋ ತೆಗೆಸಿಕೊಂಡರು. ಮೆರವಣಿಗೆ ಮುಂಚೂಣಿಯಲ್ಲಿ ಸಾಗಿಬಂದ ಬೃಹತ್ ಹನುಮಂತನ ಸ್ತಬ್ಧ ಚಿತ್ರ ವಿಶೇಷವಾಗಿತ್ತು. ಅದರೊಂದಿಗೆ ವೀರಗಾಸೆ, ಡೊಳ್ಳು ತಂಡಗಳು ಮೆರವಣಿಗೆಗೆ ರಂಗು ತುಂಬಿದವು. ದಾರಿ ಉದ್ಧಕ್ಕೂ ಡಿಜೆ ಸದ್ದಿಗೆ ಸಹಸ್ರಾರು ಮಂದಿ ಏಕ ಕಾಲದಲ್ಲಿ ಹೆಜ್ಜೆ ಹಾಕಿದ ದೃಶ್ಯ ಆಕರ್ಷಕವಾಗಿತ್ತು. ಯುವತಿಯರ ಗುಂಪೊಂದು ನೃತ್ಯ ಮಾಡಿ, ಕುಣಿದು ಕುಪ್ಪಳಿಸಿ ಗಮನ ಸೆಳೆದಿತು. ಗಣಪತಿ ಬಪ್ಪ ಮೋರಯಾ, ವಿನಾಯಕನಿಗೆ ಜಯವಾಗಲಿ ಎನ್ನುವ ಘೋಷಣೆಗಳು ಮುಗಿಲು ಮುಟ್ಟಿದವು.

ಡಿಜೆಗೆ ಸ್ಟೇಪ್ ಹಾಕಿದ ಸಿ.ಟಿ ರವಿ ಪತ್ನಿ ಪಲ್ಲವಿ
ಹಿಂದೂ ಮಹಾಸಭಾ ಗಣಪತಿ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ಚಿಕ್ಕಮಗಳೂರು ಶಾಸಕ ಸಿ.ಟಿ ರವಿ ಯುವಕರೊಂದಿಗೆ ಡಿಜೆ ಸೌಂಡ್ಗೆ ಸ್ಟೆಪ್ ಹಾಕಿದರು. ಬೆಂಗಳೂರಿನಿಂದ ಆಗಮಿಸಿದ ಸಿ.ಟಿ ರವಿ ಮೆರವಣಿಗೆಯಲ್ಲಿ ಭಾಗಿಯಾಗಿ ಯುವಕರೊಂದಿಗೆ ಕುಣಿಯುವ ಮೂಲಕ ಎಲ್ಲರ ಗಮನ ಸೆಳೆದರು. ಇದೇ ವೇಳೆಯಲ್ಲಿ ಯುವಕರು ಸಿ.ಟಿ.ರವಿಯನ್ನು ಹೊತ್ತು ಹೆಜ್ಜೆ ಹಾಕಿದರು. ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮೆರವಣಿಗೆಯಲ್ಲಿ ಭಾಗವಹಿಸಿ ಹಿಂದೂ ಗಣಪತಿ ಸಮಿತಿ ಸದಸ್ಯರ ಜೊತೆ ವಾದ್ಯಕ್ಕೆ ಹೆಜ್ಜೆ ಹಾಕಿದರು. ಇನ್ನು ಶಾಸಕ ಸಿ.ಟಿ.ರವಿ ಪತ್ನಿ ಪಲ್ಲವಿ ಸಿ.ಟಿ.ರವಿ ಕೂಡ ಡಿಜೆ ಸೌಂಡ್ಗೆ ಸ್ಟೆಪ್ ಹಾಕಿ ಎಲ್ಲರ ಗಮನ ಸೆಳೆದರು. ಅವರು ಯುವರೊಂದಿಗೆ ಸೇರಿ ಡ್ಯಾನ್ಸ್ ಮಾಡಿ ಸಂಭ್ರಮಿಸಿದರು.
ಮೆರವಣಿಗೆ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮೆರವಣಿಗೆ ಉದ್ಧಕ್ಕೂ ದಾರಿಗಳಲ್ಲಿ ಪೊಲೀಸ್ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದರು. ಮುಂಜಾಗ್ರತೆಯಾಗಿ ಮಧ್ಯಾಹ್ನವೇ ಮೆರವಣಿಗೆ ಸಾಗಿಬರುವ ಬೀದಿಗಳಲ್ಲಿ ಪೊಲೀಸ್ ಪಥಸಂಚಲನ ನೆಡಸಲಾಗಿತ್ತು. ಹೀಗೆ ಚಿಕ್ಕಮಗಳೂರಿನಲ್ಲಿ ಹಿಂದೂ ಮಹಸಭಾ ಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡಲಾಗಿದ್ದು, ಅದರಲ್ಲೂ ಬಿಜೆಪಿ ನಾಯಕರು ಡಿಜೆ ಸೌಂಡ್ಗೆ ಸ್ಟೆಪ್ ಹಾಕಿರುವುದು ಹೆಚ್ಚಾಗಿ ಗಮನ ಸೆಳೆದಿದೆ. ಅಲ್ಲದೇ ಯುವಕ, ಯುವತಿಯರು ಹೆಜ್ಜೆ ಹಾಕಿ ಮೆರವಣಿಗೆಯ ರಂಗನ್ನು ಹೆಚ್ಚಿಸಿದ್ದಾರೆ.












Click it and Unblock the Notifications