ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ಗೆ ಅದ್ದೂರಿ ಸ್ವಾಗತ
ಚಿಕ್ಕಮಗಳೂರು, ಜನವರಿ 08: ರಾಜ್ಯ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಕಡೂರು ಕ್ಷೇತ್ರಕ್ಕೆ ಆಗಮಿಸಿದ ಬಿಜೆಪಿ ಶಾಸಕ ಬೆಳ್ಳಿಪ್ರಕಾಶ್ ಶುಕ್ರವಾರ ಆಗಮಿಸಿದರು. ಬಿಜೆಪಿ ಮಂಡಲದ ಕಾರ್ಯಕರ್ತರು ಅದ್ದೂರಿಯಾಗಿ ಅವರನ್ನು ಸ್ವಾಗತಿಸಿದರು.
ಕಡೂರು ತಾಲೂಕಿನ ಗಡಿಭಾಗವಾದ ಎನ್. ಎಚ್. ರಸ್ತೆಯ ಇಂಗ್ಲಾಪುರ ಗೇಟ್ಬಳಿ ನೂತನ ಅಧ್ಯಕ್ಷರು ಆಗಮಿಸಿದ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಬೈಕ್ ಜಾಥಾದ ಮೂಲಕ ಮೆರವಣಿಗೆ ಪ್ರಾರಂಭಿಸಿದರು.
ಪಟ್ಟಣದ ವೆಂಕಟೇಶ್ವರ ದೇವಾಲಯದ ಬಳಿ ಸಿದ್ದಗೊಂಡಿದ್ದ ಬೆಳ್ಳಿರಥ ಯಾತ್ರೆಯ ತೆರೆದ ವಾಹನದಲ್ಲಿ ಬೆಳ್ಳಿ ಪ್ರಕಾಶ್ ಅವರನ್ನು ಪಕ್ಷದ ಕಚೇರಿಯತ್ತ ಯುವ ಕಾರ್ಯಕರ್ತರು ಸಂಭ್ರಮದಿಂದ ಮೆರವಣಿಗೆಯ ಮೂಲಕ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಒಂದು ಕಿ.ಮೀ.ಗೂ ಹೆಚ್ಚು ನೂರಾರು ವಾಹನಗಳು ಟ್ರಾಫಿಕ್ ಜಾಮ್ನಲ್ಲಿ ಸಿಲುಕಿದವು. ಅಭಿಮಾನಿಗಳು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ ನೂತನವಾಗಿ ಸಹಕಾರಿ ಕ್ಷೇತ್ರದಲ್ಲಿ ಅತ್ಯುನ್ನತ ಹುದ್ದೆ ಅಲಂಕರಿಸಿದ ಕ್ಷೇತ್ರದ ಶಾಸಕರಿಗೆ ಜೈಕಾರ ಕೂಗುತ್ತ ಸಂಭ್ರಮಿಸಿದರು.
ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬೆಳ್ಳಿ ಪ್ರಕಾಶ್, "ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ನನ್ನನ್ನು ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷರನ್ನಾಗಿಸುವ ಮೂಲಕ ಜಿಲ್ಲೆಗೆ ಹಾಗೂ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ" ಎಂದರು.

"ಮುಂದಿನ ದಿನಗಳಲ್ಲಿ ಬ್ಯಾಂಕಿನ ಸರ್ವತೋಮುಖ ಬೆಳವಣಿಗೆಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ಎಲ್ಲಾ ಸಹಕಾರ ಬ್ಯಾಂಕಿನ ಹಾಗೂ ಸಹಕಾರ ಸಂಘಗಳ ಪ್ರಗತಿಗೆ ಉತ್ತೇಜನ ನೀಡಲಾಗುವುದು. ರಾಜ್ಯದ ರೈತ ಕಾರ್ಮಿಕರು ಸ್ವ ಉದ್ಯೋಗದಲ್ಲಿ ತೊಡಗಿಸಿಕೊಂಡಿರುವವರಿಗೆ ವಿಶೇಷವಾದ ಸಹಕಾರ ನೀಡುವ ಮೂಲಕ ಬ್ಯಾಂಕಿನ ಉನ್ನತಿಗೆ ವಿಶೇಷ ಒತ್ತು ನೀಡಲಾಗುವುದು" ಎಂದು ಭವರಸೆ ನೀಡಿದರು.
"ಅಪೆಕ್ಸ್ ಬ್ಯಾಂಕ್ ಅಭಿವೃದ್ದಿ ಸಾಧಿಸಿದಾಗ ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಕ್ಷೇತ್ರದ ಮತದಾರರು ನನ್ನನ್ನು ಶಾಸಕರನ್ನಾಗಿ ಮಾಡಿದ್ದರ ಫಲವಾಗಿ ಹಾಗೂ ಸಹಕಾರ ಸಂಘಗಳ ಅಧ್ಯಕ್ಷರುಗಳ ಸಹಕಾರ, ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ, ಬ್ಯಾಂಕಿನ ಎಲ್ಲಾ ನಿರ್ದೇಶಕರುಗಳ ಸರ್ವಾನುಮತದದ ತೀರ್ಮಾನದಿಂದಾಗಿ ಅಧಿಕಾರ ದೊರೆಯಲು ಸಾಧ್ಯವಾಯಿತು" ಎಂದರು.












Click it and Unblock the Notifications