ಚಿಕ್ಕಮಗಳೂರು; ಒಂದೇ ದಿನ 4 ಕೋವಿಡ್ ಪ್ರಕರಣ ಪತ್ತೆ
ಚಿಕ್ಕಮಗಳೂರು, ಡಿಸೆಂಬರ್ 20; ಕರ್ನಾಟಕದಲ್ಲಿ ಸದಾಕಾಲ ಪ್ರವಾಸಿಗರು ಆಗಮಿಸುವ ಜಿಲ್ಲೆ ಚಿಕ್ಕಮಗಳೂರು. ಜಿಲ್ಲೆಯಲ್ಲಿ ಮತ್ತೆ ಕೊರೊನಾ ಆತಂಕ ಆರಂಭವಾಗಿದೆ. ಒಂದೇ ದಿನ ನಾಲ್ಕು ಹೊಸ ಪ್ರಕರಣ ಪತ್ತೆಯಾಗಿದೆ. ರಾಜ್ಯಾದ್ಯಂತ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ.
ಆರೋಗ್ಯ ಇಲಾಖೆ ಸೂಚನೆ ಮೇರೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿದಾಗ ನಾಲ್ವರ ವರದಿ ಪಾಸಿಟಿವ್ ಬಂದಿದೆ. ಚಿಕ್ಕಮಗಳೂರು ತಾಲೂಕಿನವರಾದ ನಾಲ್ಕು ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಇಬ್ಬರು ಕಾಲೇಜು ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.

ನಾಲ್ವರು ಸೋಂಕಿತರ ಪೈಕಿ ಇಬ್ಬರು ಹೆಂಗಸರು ಹಾಗೂ ಇಬ್ಬರು ಗಂಡಸರು. ಆದರೆ ಪತ್ತೆಯಾಗಿರುವ ಸೋಂಕು ಕೊರೊನಾ ರೂಪಾಂತರಿ ತಳಿ JN-1 ಇರಬಹುದಾ? ಎಂಬ ಬಗ್ಗೆ ಆರೋಗ್ಯ ಇಲಾಖೆ ಮೂಲಗಳು ಖಚಿತಪಡಿಸಿಲ್ಲ. ಇದರ ಪತ್ತೆಗೆ ಸ್ಯಾಂಪಲ್ ಅನ್ನು ಬೆಂಗಳೂರಿಗೆ ಕಳುಹಿಸಲಾಗಿದೆ.
ಹೋಂ ಐಸೋಲೇಷನ್; ಜಿಲ್ಲಾ ಆರೋಗ್ಯ ಅಧಿಕಾರಿಗಳು ಹೆಚ್ಚಿನ ವಿವರಗಳಿಗಾಗಿ ಕಾಯುತ್ತಿದ್ದಾರೆ. ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡ ನಂತರ ಪಾಸಿಟಿವ್ ಬಂದವರಿಗೆ ಹೋಂ ಐಸೋಲೇಷನ್ನಲ್ಲಿರುವಂತೆ ವೈದ್ಯರು ಸೂಚಿಸಿದ್ದಾರೆ.
ಬೆಂಗಳೂರಿನಿಂದ ವರದಿ ಬಂದ ಬಳಿಕ ಜಿಲ್ಲೆಯ ನಾಲ್ವರಲ್ಲಿ ಪತ್ತೆಯಾದ ಕೊರೋನಾ ಸೋಂಕು ಕೋವಿಡ್ ರೂಪಾಂತರಿ JN-1 ಎಂಬುದೇ? ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಖಚಿತಪಡಿಸಬೇಕಿದೆ.
ಕಾಫಿನಾಡಿಗೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಾರೆ. ಈಗ ವರ್ಷಾಂತ್ಯ, ದತ್ತ ಜಯಂತಿ ಹಿನ್ನಲೆಯಲ್ಲಿ ಹೆಚ್ಚಿನ ಜನರು ಬರುತ್ತಾರೆ. ಈಗ 4 ಕೊರೊನಾ ಪ್ರಕರಣ ಪತ್ತೆಯಾಗಿರುವುದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಪ್ರವಾಸಿಗರು ಹೋಟೆಲ್, ಲಾಡ್ಜ್, ರೆಸಾರ್ಟ್ಗಳಲ್ಲಿ ವಾಸ್ತವ್ಯ ಹುಡುತ್ತಾರೆ ಇದರಿಂದಾಗಿ ಕೋವಿಡ್ ಹರಡುತ್ತದೆ ಎಂಬುದು ಜನರ ಆತಂಕ.
ಚಿಕ್ಕಮಗಳೂರು ಭಾಗದ ಗಿರಿ ಭಾಗದಲ್ಲಿನ ಸಾಧಾರಣ ಮಳೆಗೆ ಗಿರಿಯ ಪ್ರಕೃತಿ ಸೌಂದರ್ಯ ಇಮ್ಮಡಿಗೊಂಡಿದೆ. ಹಾಗಾಗಿ, ಇಲ್ಲಿನ ಸೌಂದರ್ಯ ಸವಿಯುವದಕ್ಕೆ ರಾಜ್ಯ ಸೇರಿದಂತೆ ಹೊರರಾಜ್ಯದಿಂದ ನಿತ್ಯ ನೂರಾರು ಪ್ರವಾಸಿಗರು ಭೇಟಿ ಕೊಡುತ್ತಾರೆ. ಮತ್ತೆ ಕೊರೊನಾ ಬಗ್ಗೆ ಚರ್ಚೆ ನಡೆಯುತ್ತಿರುವುದರಿಂದ ಜಿಲ್ಲೆ ಹಾಗೂ ಜಿಲ್ಲೆಯ ಪ್ರವಾಸೋದ್ಯಮದ ಮೇಲೆ ಕರಿ ಛಾಯೆ ಆವರಿಸಿದೆ.












Click it and Unblock the Notifications