ಕ್ಯಾನ್ಸರ್ಗೆ ಕಾರಣವಾಗುವ ರಸಾಯನಿಕ ಕೃಷಿ ಬೇಡ: ಚಿಕ್ಕಮಗಳೂರಿನಲ್ಲಿ ಕೆ. ಅಣ್ಣಾಮಲೈ ಮನವಿ
ಚಿಕ್ಕಮಗಳೂರು, ಜನವರಿ, 20: ಕ್ಯಾನ್ಸರ್ನಂತಹ ಮಾರಕ ರೋಗಗಳಿಗೆ ಕಾರಣವಾಗುತ್ತಿರುವ ರಸಾಯನಿಕ ಕೃಷಿ ಬಿಟ್ಟು ಸಾಂಪ್ರದಾಯಿಕ ಸಾವಯವ ಕೃಷಿ ಪದ್ಧತಿಗೆ ರೈತರು ಮಾರು ಹೋಗುವಂತೆ ಪ್ರೇರೇಪಣೆ ನೀಡುವುದು ಎಲ್ಲರ ಜವಾಬ್ದಾರಿ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾಮಲೈ ಚಿಕ್ಕಮಗಳೂರಿನಲ್ಲಿ ಮನವಿ ಮಾಡಿದರು.
ಆಲೂಗಡ್ಡೆ ಬೆಳೆಗೆ ಆವರಿಸಿದ ಅಂಗಮಾರಿ ರೋಗ: ಚಿಕ್ಕಬಳ್ಳಾಪುರ ಜಿಲ್ಲೆಯ ಅನ್ನದಾತ ಕಂಗಾಲು
ಚಿಕ್ಕಮಗಳೂರು ಹಬ್ಬದ ಜ್ವಾನ ವೈಭವ ಮೇಳದಲ್ಲಿ ಗುರುವಾರ ಆಯೋಜಿಸಿದ್ದ ಎತ್ತಿನಗಾಡಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಅವರು, ಸಿರಿಧಾನ್ಯ ನಡಿಗೆ ವಿಚಾರಗೊಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಕೆಯಿಂದ ಆಹಾರ ಧಾನ್ಯಗಳ ವಿಷಯುಕ್ತವಾಗುತ್ತಿವೆ. ಇಂತಹ ಆಹಾರ ಸೇವನೆಯಿಂದ ಮಾರಕ ರೋಗಗಳು ಮನುಷ್ಯ ಕುಲವನ್ನು ಕಾಡುತ್ತಿವೆ ಎಂದು ಅಧ್ಯಯನ ವರದಿಗಳು ತಿಳಿಸುತ್ತಿವೆ. ಇಂತಹ ಅಪಾಯಕಾರಿ ಬೆಳವಣಿಗೆಯಿಂದ ದೂರ ಹೋಗಲು ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಮತ್ತೆ ಮರು ಹೋಗುವುದು ಸದ್ಯದ ಪರಿಹಾರ ಎಂದು ಸಲಹೆ ಮಾಡಿದರು.
ಸಾಂಪ್ರದಾಯ ಕೃಷಿ ಪದ್ಧತಿಗೆ ಹೆಚ್ಚು ಒತ್ತು ನೀಡಿ
ಸಾಂಪ್ರದಾಯ ಕೃಷಿ ಜೊತೆಗೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಅಮೇರಿಕದಲ್ಲಿ ಶೇಕಡಾ 2ರಷ್ಟು, ಭಾರತದಲ್ಲಿ ಶೇಕಡಾ 60ರಷ್ಟು ಜನ ಕೃಷಿ ಮಾಡುತ್ತಿದ್ದಾರೆ. ಆದರೆ, ಆಧುನಿಕ ತಂತ್ರಜ್ಞಾನದಿಂದ ಅಮೇರಿಕದಲ್ಲಿ ಕೃಷಿ ಲಾಭದಾಯಕವಾಗಿದೆ. ಭಾರತದಲ್ಲಿ ಸಾವಯವ ಹಾಗೂ ತಂತ್ರಜ್ಞಾನ ಒಟ್ಟೊಟ್ಟಿಗೆ ಅಳವಡಿಸಿಕೊಂಡು ಕೃಷಿ ಮಾಡಿದರೆ ಆರೋಗ್ಯ ಆಹಾರ ಜನರಿಗೆ ಲಭ್ಯವಾಗಲಿದೆ ಎಂದರು.
ಶಾಸಕ ಸಿ.ಟಿ. ರವಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರಿಮಿನಾಶಕ ಬಳಕೆಯಿಂದ ಕೃಷಿ ವೆಚ್ಚ ಹೆಚ್ಚಾಗಿರುವುದಲ್ಲದೆ ಕಳೆಯ ಜೊತೆ ಬೆಳೆಯೂ ನಾಶವಾಗುತ್ತಿದೆ. ರಸಾಯನಿಕ ಬಳಕೆಯಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿರುವುದು ಆತಂಕ ಮೂಡಿಸಿದೆ. ಆಧುನಿಕರಿಗೆ ಮೊಸರು ಬೇಕು, ಆದರೆ ಕೃಷಿ ಬೇಡ ಎನ್ನುವ ಮನಸ್ಥಿತಿ ಇದೆ. ಹಿಂದಿನ ಕಾಲದಲ್ಲಿ ದೊಡ್ಡ ಕೊಟ್ಟಿಗೆ ಇದ್ದರೆ ಮಾತ್ರ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕೊಡುತ್ತಿದ್ದರು. ಈಗ ಕೊಟ್ಟಿಗೆ ಇದ್ದರೆ ಹೆಣ್ಣು ಕೊಡುವುದಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಸಾಪ್ಟ್ವೇರ್, ಕೈಗಾರಿಕೆಗಳಿಂದ ಆಹಾರ ಧಾನ್ಯ ಉತ್ಪಾದನೆ ಸಾಧ್ಯವಿಲ್ಲ ಎಂದು ಹೇಳಿದರು.