ತರೀಕೆರೆ: 75 ಕೆಜಿ ಕೇಕ್ ಕತ್ತರಿಸಿ ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು
ಚಿಕ್ಕಮಗಳೂರು, ಆಗಸ್ಟ್ 2 : ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿಗಳು 75 ಕೆ.ಜಿ.ತೂಕದ ಕೇಕ್ ಕತ್ತರಿಸಿ ಸಿದ್ದರಾಮಯ್ಯನವರಿಗೆ ಶುಭ ಕೋರಿದ್ದಾರೆ.
ತರೀಕೆರೆ ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ ಗೋಪಿಕುಮಾರ್ ಮಂಗಳವಾರ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಬರುವ ತರೀಕೆರೆ ಪಟ್ಟಣದ ಗಾಂಧಿ ವೃತ್ತದಲ್ಲಿ 75 ಕೆ.ಜಿ. ತೂಕದ ಕೇಕ್ ಕತ್ತರಿಸಿ ಸಿದ್ದರಾಮಯ್ಯಗೆ ಶುಭಕೋರಿದ್ದಾರೆ. ಇದೇ ವೇಳೆ, ಸಿದ್ದು ಹುಟ್ಟುಹಬ್ಬದ ಅಂಗವಾಗಿ ತರೀಕೆರೆ ಪುರಸಭೆಯ 23 ಜನ ಸದಸ್ಯರಿಗೂ ಪಕ್ಷಾತೀತವಾಗಿ ಸನ್ಮಾನಿಸಿದ್ದಾರೆ.
ಜೊತೆಗೆ ಬುಧವಾರ ಸಿದ್ದರಾಮಯ್ಯನವರ ಹುಟ್ಟುಹಬ್ಬದ ಅಂಗವಾಗಿ ದಾವಣಗೆರೆಯಲ್ಲಿ ನಡೆಯುವ ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೂ ಗೋಪಿಕುಮಾರ್ ಸಾವಿರಕ್ಕೂ ಅಧಿಕ ಜನರನ್ನ ದಾವಣಗೆರೆಗೆ ಕರೆದೊಯ್ಯುತ್ತಿದ್ದಾರೆ. ಈಗಾಗಲೇ ಎರಡು ಬಸ್ ಹಾಗೂ ಎರಡು ಟಿಟಿ ವಾಹನಗಳಲ್ಲಿ ಸಿದ್ದು ಅಭಿಮಾನಿಗಳು ತುಂಬಿದ್ದು ಮತ್ತಷ್ಟು ಜನ ತಮ್ಮ ಸ್ವಂತ ವಾಹನದಲ್ಲಿ ದಾವಣಗೆರೆಗೆ ತೆರಳಲಿದ್ದಾರೆ.

ಕಾಂಗ್ರೆಸ್ ಮುಖಂಡರಾದ ಉಮ್ಮರ್ ಫಾರುಕ್, ಮಿರ್ಜಾ ಇಸ್ಮಾಯಿಲ್, ಧರ್ಮರಾಜ್, ಪ್ರಕಾಶ್ ವರ್ಮಾ ಸೇರಿದಂತೆ 250ಕ್ಕೂ ಅಧಿಕ ಜನ ರಸ್ತೆ ಮಧ್ಯೆ ಜಮಾಯಿಸಿ ಸಿದ್ದರಾಮಯ್ಯರ ಹುಟ್ಟುಹಬ್ಬ ಆಚರಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿ ಸಿದ್ದರಾಮಯ್ಯ ಪರ ಘೋಷಣೆ ಕೂಗಿದರು.
ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ
ಸಿದ್ದರಾಮಯ್ಯರ ಜನ್ಮದಿನವನ್ನಾಚರಿಸಿದ ಅಭಿಮಾನಿಗಳು ಇದೇ ಸಂದರ್ಭದಲ್ಲಿ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು. ಈಗಾಗಲೆ ಸಿಎಂ ಅಭ್ಯರ್ಥಿ ವಿಚಾರವಾಗಿ ಕಾಂಗ್ರೆಸ್ನಲ್ಲಿ ಗೊಂದಲ ಮೂಡಿದೆ. ಒಂದು ಕಡೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದರೆ, ಮತ್ತೊಂದು ಕಡೆ ಸಿದ್ದರಾಮಯ್ಯ 2ನೇ ಬಾರಿ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಹೀಗಿರುವಾಗ ಅವರ ಅಭಿಮಾನಿಗಳು ಅವಕಾಶ ಸಿಕ್ಕಾಗಲೆಲ್ಲಾ ಸಿದ್ದರಾಮಯ್ಯ ಪರ ಘೋಷಣೆ ಕೂಗುತ್ತಿರುವುದು ಮತ್ತಷ್ಟು ಗೊಂದಲ ಮೂಡಿಸಬಹುದೇ ಎನ್ನುವುದನ್ನು ಕಾದು ನೋಡಬೇಕಾಗಿದೆ.












Click it and Unblock the Notifications