ವಿದ್ಯುತ್ ತಗುಲಿ ಆನೆ ಸಾವು, ಕರ್ನಾಟಕದಲ್ಲಿ ಆನೆ ಸಾವಿನ ಅಂಕಿ-ಅಂಶಗಳು
ಚಿಕ್ಕಮಗಳೂರು, ಆಗಸ್ಟ್ 02; ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾನವ ಮತ್ತು ವನ್ಯಜೀವಿಗಳ ಸಂಘರ್ಷ ನಿರಂತರವಾಗಿ ನಡೆಯುತ್ತಿದ್ದು ಇದರ ಪರಿಣಾಮ ಭಾನುವಾರ 23 ವರ್ಷದ ಗಂಡು ಆನೆಯೊಂದು ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದೆ.
ಜಿಲ್ಲೆಯಲ್ಲಿ ಮಾನವ ಮತ್ತು ವನ್ಯಜೀವಿಗಳ ಸಂಘರ್ಷ ನಿರಂತರವಾಗಿ ನಡೆಯುತ್ತಿದೆ. ಈ ಸಂಘರ್ಷಕ್ಕೆ ಪರಿಹಾರ ಒದಗಿಸುವಂತೆ ರೈತರು, ಸಾಕಷ್ಟು ಭಾರೀ ಸರ್ಕಾರದ ಗಮನ ಸೆಳೆದರು. ಸರ್ಕಾರದ ದಿವ್ಯನಿರ್ಲಕ್ಷತನದಿಂದ ವನ್ಯಪ್ರಾಣಿಗಳು ತಮ್ಮ ಪ್ರಾಣ ಕಳೆದುಕೊಳ್ಳುತ್ತಿವೆ.
ದುಬಾರೆಯ 'ಕುಶ' ಬಂಧ ಮುಕ್ತ; ಮತ್ತೆ ಕಾಡಿಗೆ ಹೋದ ಆನೆ!
ಅರಣ್ಯದಂಚಿನ ತೋಟ, ಗದ್ದೆ, ಜಮೀನುಗಳಿಗೆ ಕಾಡು ಪ್ರಾಣಿಗಳು ನುಗ್ಗಿ ಬೆಳೆನಷ್ಟ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಶನಿವಾರ ರಾತ್ರಿ ತಾಲ್ಲೂಕಿನ ಗಾಳಿಪೂಜೆ ಗ್ರಾಮದಲ್ಲಿ ಕಾಡಾನೆಯೊಂದು ಜಮೀನಿಗೆ ನುಗ್ಗಿದ್ದು, ಜಮೀನು ಮಾಲೀಕ ಅಕ್ರಮವಾಗಿ ವಿದ್ಯುತ್ ಅಳವಡಿಸಿದ್ದು, ವಿದ್ಯುತ್ ಸ್ಪರ್ಶಿಸಿ ಆನೆ ಅಸುನೀಗಿದೆ.
ಕುಶ ಆನೆ ಮರಳಿ ಕಾಡಿಗೆ; ಸಚಿವ ಅರವಿಂದ ಲಿಂಬಾವಳಿ
ರೈತರು ತಮ್ಮ ಬೆಳೆಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ವಿದ್ಯುತ್ ಬೇಲಿ ನಿರ್ಮಿಸಿಕೊಳ್ಳುವುದರಿಂದ ಆನೆ ಸೇರಿದಂತೆ ಇತರೆ ಪ್ರಾಣಿಗಳು ತಮ್ಮ ಪ್ರಾಣವನ್ನು ಕಳೆದು ಕೊಳ್ಳುತ್ತಿವೆ. ಹೀಗೆ ಜಿಲ್ಲೆಯಾದ್ಯಂತ ಮಂಗ, ಆನೆ, ಕಾಡೆಮ್ಮೆ, ಕಾಡುಹಂದಿ, ಚಿರತೆ ಮೊದಲಾದ ಪ್ರಾಣಿಗಳಿಗೆ ಜೀವರಕ್ಷಣೆ ಇಲ್ಲದಂತಾಗಿದೆ.
ರಾಮನಗರ; ವಿದ್ಯುತ್ ಸ್ಪರ್ಶದಿಂದ ಆನೆ ಸಾವು
ಇಂದು ವಿದ್ಯುತ್ ಸ್ಪರ್ಶಿಸಿ ಆನೆ ಮೃತಪಟ್ಟ ಗಾಳಿಪೂಜೆ ಗ್ರಾಮದ ರೈತರೊರ್ವರು ಅಕ್ರಮವಾಗಿ ವಿದ್ಯುತ್ಬೇಲಿ ನಿರ್ಮಿಸಿದ್ದು, ವಿದ್ಯುತ್ ಸ್ಪರ್ಶಿಸಿ ಆನೆ ಮೃತಪಟ್ಟಿದೆ. ಮಾನವ ಮತ್ತು ಆನೆ ಸಂಘರ್ಷ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಹುತೇಕ ಕಾಣಸಿಗುತ್ತಿದೆ.
"ಕಳೆದ 6-7 ವರ್ಷಗಳಲ್ಲಿ ಗಾಳಿಪೂಜೆ ಗ್ರಾಮದ ಭಾಗದಲ್ಲಿ 7 ಆನೆಗಳು ಮೃತಪಟ್ಟಿವೆ. ಈ ಭಾಗದಲ್ಲಿ ಅರಣ್ಯದಲ್ಲಿ ಆನೆಗಳ ಸಂಚಾರವಿದೆ. ಈ ಭಾಗದ ರೈತರು ಮತ್ತು ಆನೆಗಳ ಸಂಘರ್ಷ ಸಮಸ್ಯೆ ಬಹುವರ್ಷಗಳಿಂದ ಇದೆ. ಜಿಲ್ಲೆಯಲ್ಲಿ ಅರಣ್ಯ ಮತ್ತು ಕಂದಾಯಭೂಮಿ ಜಂಟಿಸರ್ವೇ ಕಾರ್ಯಕ್ಕೆ ಅಂದಿನ ಅರಣ್ಯ ಸಚಿವ ಅನುಮತಿಯನ್ನು ನೀಡಿದ್ದರು. ಆದರೆ ಅದು ಪೂರ್ಣಗೊಂಡಿಲ್ಲ ಇದರಿಂದ ಆನೆ ಮತ್ತು ಮಾನವ ಸಂಘರ್ಷವನ್ನು ತಡೆಯಲು ಸಾಧ್ಯವಾಗುತ್ತಿಲ್ಲ" ಎಂಬ ಅಭಿಪ್ರಾಯ ಸ್ಥಳೀಯರದ್ದು.
ಆನೆಗಳು ಕಾಡಿನಿಂದ ಕಾಫಿ ತೋಟಗಳಿಗೆ ಬಂದಾಗ ಜನರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಸತತ ಪ್ರಯತ್ನಪಟ್ಟು ಆನೆಗಳನ್ನು ಓಡಿಸಲು ಪ್ರಯತ್ನಿಸಿದರು. ಇದು ಈ ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ ಕಾಡಾಂಚಿನ ಪ್ರದೇಶದಲ್ಲಿ ಟ್ರಂಚ್ಗಳನ್ನು ನಿರ್ಮಿಸಿ ಆನೆ ಕಾಲಿಡಾರ್ಗಳನ್ನು ನಿರ್ಮಿಸುವ ಮೂಲಕ ಮಾನವ ಮತ್ತು ಆನೆ ಸಂಘರ್ಷವನ್ನು ತಡೆಗಟ್ಟುವತ್ತಾ ಬಗ್ಗೆ ಚಿಂತನೆ ನಡೆಸಬೇಕೆಂಬುದು ರೈತರ ಆಗ್ರಹವಾಗಿದೆ.
ಕರ್ನಾಟಕದಲ್ಲಿ ಆನೆಗಳ ಸಾವು; ಕೇರಳ, ತಮಿಳುನಾಡು ರಾಜ್ಯಗಳಂತೆ ಕರ್ನಾಟಕದಲ್ಲಿಯೂ ಆನೆಗಳ ಅಸಹಜ ಸಾವಿನ ಪ್ರಕರಣಗಳು ವರದಿಯಾಗುತ್ತವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಆನೆಗಳ ಅಸಹಜ ಸಾವಿನ ಪ್ರಕರಣಗಳು ಕರ್ನಾಟಕದಲ್ಲಿ ಹೆಚ್ಚಿದ್ದು, ಆತಂಕಕ್ಕೆ ಕಾರಣವಾಗಿದೆ.
ಗುಂಡೇಟು, ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪುವ ಆನೆಗಳ ಸಂಖ್ಯೆಯೇ ಅಧಿಕವಾಗಿದೆ. ಅದರಲ್ಲೂ ಚಿಕ್ಕಮಗಳೂರು, ಹಾಸ, ಸಕಲೇಶಪುರ ಮುಂತಾದ ಪ್ರದೇಶಗಳಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗಿದೆ. ಕಾಫಿ ತೋಟದ ಸುತ್ತ ಹಾಕಿರುವ ವಿದ್ಯುತ್ ತಂತಿಗಳ ಬೇಲಿಯನ್ನು ಸ್ಪರ್ಶಿಸಿ ಆನೆಗಳು ಸಾವನ್ನಪ್ಪುತ್ತವೆ.
ವಿದ್ಯುತ್ ಸ್ಪರ್ಶದಿಂದಲೇ ಕರ್ನಾಟಕದಲ್ಲಿ ವರ್ಷಕ್ಕೆ 10 ರಿಂದ 15 ಆನೆಗಳು ಬಲಿಯಾಗುತ್ತಿವೆ. ಗುಂಡೇಟಿನಿಂದ ಆನೆಗಳು ಸತ್ತರೆ ತನಿಖೆ ನಡೆಸಿ ಎಫ್ಐಆರ್ ದಾಖಲು ಮಾಡಲಾಗುತ್ತದೆ. ಆದರೆ ಇಂತಹ ಪ್ರಕರಣಗಳು ತಾರ್ಕಿಕ ಅಂತ್ಯವನ್ನು ಕಾಣುವುದು ಕಡಿಮೆ.
ಕರ್ನಾಟಕದಲ್ಲಿ 2014-15ರಲ್ಲಿ 15, 2015-16ರಲ್ಲಿ 8, 2016-17ರಲ್ಲಿ 6, 20217-18ರಲ್ಲಿ 10, 2018-19ರಲ್ಲಿ 9 ಮತ್ತು 2019-20ರಲ್ಲಿ 8 ಆನೆಗಳು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿವೆ ಎಂದು ಅಂಕಿ-ಸಂಖ್ಯೆಗಳು ಹೇಳುತ್ತವೆ. ಕಳೆದ 5 ವರ್ಷದಲ್ಲಿ 16 ಆನೆಗಳು ಗುಂಡೇಟು ತಿಂದು ಮೃತಪಟ್ಟಿವೆ.
ಆನೆಗಳು ಕಾರಿಡಾರ್ ದಾಟಿ ಬಂದು ರಸ್ತೆ ಅಪಘಾತದಿಂದ ಸಹ ಮೃತಪಟ್ಟ ಪ್ರಕರಣಗಳು ನಡೆದಿವೆ. 2017 ರಲ್ಲಿ ಒಂದು, 2018ರಲ್ಲಿ 2 ಆನೆಗಳು ಮೃತಪಟ್ಟಿವೆ ಎಂದು ಸರ್ಕಾರದ ಅಂಕಿ ಸಂಖ್ಯೆಗಳು ಹೇಳುತ್ತಿವೆ.
Recommended Video
ಕರ್ನಾಟಕದಲ್ಲಿ 2014-15 ರಿಂದ 2019-20ರ ತನಕ 393 ಆನೆಗಳು ಸಹಜವಾಗಿ ಮೃತಪಟ್ಟಿವೆ. 78 ಆನೆಗಳು ಅಸಹಜವಾಗಿ ಮೃತಪಟ್ಟಿವೆ. ಈ ಪೈಕಿ 2016-17ರಲ್ಲಿ 90 ಆನೆಗಳು ಸಹಜವಾಗಿ ಮೃತಪಟ್ಟಿದ್ದರೆ, 2018-19ರ ಅವಧಿಯಲ್ಲಿ 15 ಆನೆಗಳು ಅಸಹಜವಾಗಿ ಮೃತಪಟ್ಟಿವೆ.