ಚಿಕ್ಕಮಗಳೂರು; ಆನೆ ದಾಳಿಗೆ ಮತ್ತೊಂದು ಬಲಿ, ಸಚಿವರು, ಶಾಸಕರ ವಿರುದ್ಧ ಆಕ್ರೋಶ
ಚಿಕ್ಕಮಗಳೂರು, ನವೆಂಬರ್ 23: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಜೀವ ಬಲಿಯಾಗಿದೆ. ಆನೆ ನಿಗ್ರಹ ಪಡೆಯ ಸದಸ್ಯನೇ ಆನೆ ದಾಳಿಯಿಂದ ಸಾವನ್ನಪ್ಪಿದ್ದಾನೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆನೆ ತುಳಿತದಿಂದಾಗಿ ಆನೆ ನಿಗ್ರಹ ಪಡೆಯ ಸದಸ್ಯನೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬೈರಾಪುರ ಗ್ರಾಮದಲ್ಲಿ ನಡೆದಿದೆ. ಕಾರ್ತಿಕ್ ಗೌಡ (26) ಮೃತ ದುರ್ದೈವಿ. ಕಾರ್ತಿಕ್ ಗೌಡ ಮೂಡಿಗೆರೆ ತಾಲೂಕಿನ ಗೌಡಹಳ್ಳಿ ನಿವಾಸಿಯಾಗಿದ್ದು, ಸರ್ಕಾರ ರಚಿತ ಆನೆ ನಿಗ್ರಹ ಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ಬೈರಾಪುರದಲ್ಲಿ ಆನೆ ಓಡಿಸುವಾಗ ಆನೆ ದಾಳಿ ಮಾಡಿದೆ.

20 ದಿನದ ಹಿಂದೆ ಆಲ್ದೂರಿನಲ್ಲಿ ವೀಣಾ ಎಂಬ ಕಾರ್ಮಿಕ ಮಹಿಳೆ ಆನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದಳು. ಒಂದೂವರೆ ತಿಂಗಳ ಹಿಂದೆ ಆಲ್ದೂರು ಸಮೀಪ ಚಿನ್ನಿ ಎಂಬುವರು ಸಾವನ್ನಪ್ಪಿದ್ದರು. ಇದೀಗ ಆನೆ ನಿಗ್ರಹ ಪಡೆಯ ಸದಸ್ಯನೇ ಆನೆ ದಾಳಿಯಿಂದ ಸಾವನ್ನಪ್ಪಿದ್ದು, ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಅಲ್ಲೇ ಇದ್ದ ಕಾಡಾನೆ; ಆನೆ ನಿಗ್ರಹ ಪಡೆಯ ಸದಸ್ಯ ( ವಾಚರ್) ಕಾರ್ತಿಕ್ ಗೌಡ ಮೇಲೆ ದಾಳಿ ಮಾಡಿದ ಬಳಿಕವೂ ಆನೆ ಅಲ್ಲೇ ಇತ್ತು. ಪಟಾಕಿ ಸಿಡಿಸಿದ ಮೇಲೆ ಕಾಡಾನೆ ಸ್ಥಳದಿಂದ ಓಡಿದೆ. ಆನೆ ದಾಳಿಗೆ ಸಿಲುಕಿ ಕಾರ್ತಿಕ್ ಗೌಡ ಮೃತಪಟ್ಟರೆ, ಅರಣ್ಯ ಇಲಾಖೆ ಡಿಆರ್ಎಫ್ಓ ಕಿರಣ್ಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಾರ್ತಿಕ್ ಗೌಡ ಮೃತದೇಹ ಮೂಡಿಗೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿದೆ. ಆನೆ ದಾಳಿ ಸಿಲುಕಿ ಸಾವನ್ನಪ್ಪಿದ ಪ್ರಕರಣದ ಬಗ್ಗೆ ಜನರು ಆಕ್ರೋಶಗೊಂಡಿದ್ದು, ರಾಜ್ಯ ಸರ್ಕಾರದ ವಿರುದ್ದ ಜನರು ಪ್ರತಿಭಟನೆ ನಡೆಸಲು ತಯಾರಿ ನಡೆಸಿದ್ದಾರೆ.
ಕಾಡಾನೆ ದಾಳಿಯಿಂದ ನಿರಂತರವಾಗಿ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಮೂಡಿಗೆರೆಯಲ್ಲಿ ಗುರುವಾರ ಪ್ರತಿಭಟನೆ ನಡೆಸಲು ಕಾಫಿ ಬೆಳೆಗಾರರು, ವಿವಿಧ ಸಂಘ-ಸಂಸ್ಥೆಗಳು ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಿವೆ. ಆಸ್ಪತ್ರೆ ಮುಂಭಾಗವೇ ಜನರು ಪ್ರತಿಭಟನೆ ನಡೆಸಲು ಸಜ್ಜಾಗಿರುವ ಕಾರಣ ಮುಂಜಾಗ್ರತ ಕ್ರಮವಾಗಿ ಮೂಡಿಗೆರೆ ಪಟ್ಟಣದಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ.
ಸಚಿವರ ವಿರುದ್ಧ ಆಕ್ರೋಶ; ಕಾಡಾನೆ ದಾಳಿಗೆ ನಿರಂತರವಾಗಿ ಜನರು ಸಾವನ್ನಪ್ಪುತ್ತಿದ್ದರೂ ಜನರಿಗೆ ಸಾಂತ್ವನ ಹೇಳಲು, ಶಾಶ್ವತ ಪರಿಹಾರ ಕಲ್ಪಿಸಲು ಜಿಲ್ಲಾ ಉಸ್ತುವಾರಿ ಸಚಿವರೇ ನಾಪತ್ತೆಯಾಗಿದ್ದಾರೆ ಎಂದು ಜನರು ಸಚಿವ ಕೆ. ಜೆ. ಜಾರ್ಜ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ತಿಂಗಳ ಅವಧಿಯಲ್ಲಿ ಮೂವರು ಆನೆ ದಾಳಿಗೆ ಬಲಿಯಾಗಿದ್ದರೂ ಸಹ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ. ಜೆ. ಜಾರ್ಜ್ ನಾಪತ್ತೆಯಾಗಿದ್ದಾರೆ. ಮೃತಪಟ್ಟಿರುವ ಸಂತ್ರಸ್ತರ ಕುಟುಂಬಕ್ಕೆ ಸಾಂತ್ವಾನ ಹೇಳಲು ಸಹ ಸಚಿವರು ಬಂದಿಲ್ಲ. ಕಾಫಿನಾಡಿನಲ್ಲಿರುವ ಕಾಫಿತೋಟಕ್ಕೆ ಮಾತ್ರ ಸಚಿವರು ಸೀಮಿತವಾಗಿದ್ದಾರೆ ಎಂದು ಜನರು ದೂರಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರೂ ಸಹ ಜಿಲ್ಲೆಗೆ ಅರಣ್ಯ, ಜಿಲ್ಲಾಉಸ್ತುವಾರಿ ಸಚಿವರು ಬಂದಿಲ್ಲ. ಸ್ಥಳೀಯ ಶಾಸಕಿ ನಯನಾ ಮೋಟಮ್ಮ ಸಹ ತೆಲಂಗಾಣದಲ್ಲಿ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications