ದಿವ್ಯ ಸಪ್ತತಿ ಪೂರ್ತಿ ಮಹೋತ್ಸವ; ಶೃಂಗೇರಿಗೆ ಭಕ್ತರ ಭೇಟಿಗೆ ಅವಕಾಶವಿಲ್ಲ
ಚಿಕ್ಕಮಗಳೂರು, ಏಪ್ರಿಲ್ 11; ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಶೃಂಗೇರಿಯಲ್ಲಿ ನಡೆಯುವ 'ದಿವ್ಯ ಸಪ್ತತಿ ಪೂರ್ತಿ ಮಹೋತ್ಸವ'ಕ್ಕೆ ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದೆ. ಮಠದ ಕಡೆಯಿಂದ ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಲಾಗಿದೆ.
ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರ ವರ್ಧಂತಿಯ ಸಂದರ್ಭ ಶೃಂಗೇರಿಯಲ್ಲಿ ವಿವಿಧ ವಿಶೇಷ ಧಾರ್ಮಿಕ ಮಹೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಲಾಗುತ್ತದೆ.
ಮಠದ ಆಡಳಿತಾಧಿಕಾರಿ ವಿ. ಆರ್. ಗೌರಿ ಶಂಕರ್ ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಈ ಮಹೋತ್ಸವದ ಸಂದರ್ಭದಲ್ಲಿ ಆಹ್ವಾನಿತರಿಗೆ ಮಾತ್ರ ಪ್ರವೇಶವನ್ನು ನೀಡಲಾಗುತ್ತದೆ. ಸಾರ್ವಜನಿಕರಿಗೆ ಮತ್ತು ಭಕ್ತರಿಗೆ ಈ ಸಂದರ್ಭದಲ್ಲಿ ಪ್ರವೇಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಭಕ್ತರ ಅನುಕೂಲಕ್ಕಾಗಿ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳನ್ನು ಶ್ರೀ ಶಂಕರ ಚಾನೆಲ್ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಭಕ್ತರು ಮನೆಯಲ್ಲಿಯೇ ಕುಳಿತು ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳಬಹುದು. ವರ್ಧಂತಿ ದಿನವೂ ಸಹ ಯಾವುದೇ ವಿಶೇಷ ದರ್ಶನ ಇರುವುದಿಲ್ಲ. ಭಕ್ತರು ಇದನ್ನು ಗಮನಿಸಿ ಸಹಕಾರ ನೀಡಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.
ಸೇವೆಯನ್ನು ಮಾಡಿಸಲು ನೋಂದಣಿ ಮಾಡಿಸಿದ ಭಕ್ತರಿಗೆ ಪ್ರಸಾದವನ್ನು ಅಂಚೆ ಮತ್ತು ಕೋರಿಯರ್ ಮೂಲಕ ಕಳಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.












Click it and Unblock the Notifications