ಜನವರಿ 3 ಶಿಕ್ಷಕಿ ದಿನಾಚರಣೆ ಎಂದು ಘೋಷಣೆ ಮಾಡಲಿ: ಚಿಕ್ಕಮಗಳೂರಿನಲ್ಲಿ ಡಾ.ಲತಾ ಆಗ್ರಹ
ಚಿಕ್ಕಮಗಳೂರು, ನವೆಂಬರ್, 25: ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಅವರು ಜನವರಿ 3 ರಂದು ಜನಿಸಿದ್ದಾರೆ. ಆದ್ದರಿಂದ ಈ ದಿನವನ್ನು ರಾಜ್ಯ ಸರ್ಕಾರ ಶಿಕ್ಷಕಿಯರ ದಿನಾಚರಣೆಯನ್ನಾಗಿ ಆಚರಿಸಲು ಆದೇಶ ಹೊರಡಿಸಬೇಕು ಎಂದು ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಸಂಸ್ಥಾಪನಾ ರಾಜ್ಯಾಧ್ಯಕ್ಷೆ ಡಾ.ಲತಾ ಎಸ್.ಮುಳ್ಳೂರ ಚಿಕ್ಕಮಗಳೂರಿನಲ್ಲಿ ಆಗ್ರಹಿಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಶಿಕ್ಷಕಿಯರ ಕ್ಷೇಮಾಭಿವೃದ್ಧಿಗಾಗಿ ಈ ಸಂಘವನ್ನು ರಚಿಸಿದ್ದೇವೆ. 5 ಜಿಲ್ಲೆಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಸಂಘಟನೆ ಕಾರ್ಯನಿರ್ವಹಿಸುತ್ತಿದೆ. ಶಿಕ್ಷಕಿಯರು ಪ್ರಸ್ತುತ ಕಾಲದಲ್ಲಿ ಎದುರಿಸುತ್ತಿರುವ ಎಲ್ಲ ರೀತಿಯ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುವುದು ಸೇರಿದಂತೆ, ಶಿಕ್ಷಕಿರಯ ಸಬಲೀಕರಣವೇ ಸಂಘದ ಉದ್ದೇಶ ಆಗಿದೆ ಎಂದರು.
ಕುಂದೂರಿನಲ್ಲಿ ಅರಣ್ಯ ಇಲಾಖೆಯ ಕಳ್ಳಬೇಟೆ ನಿಗ್ರಹ ಶಿಬಿರ ಧ್ವಂಸ, ಜನಾಕ್ರೋಶ
ಜನವರಿ 3 ದೇಶದ ಮೊದಲ ಶಿಕ್ಷಕಿಯಾಗಿರುವ ಸಾವಿತ್ರಿಬಾಯಿ ಪುಲೆ ಅವರ ಜನ್ಮದಿನವಾಗಿದೆ. ಆ ದಿನವನ್ನು ಶಿಕ್ಷಕಿಯರ ದಿನಾಚರಣೆ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಬೇಕು. ಸರ್ಕಾರಿ ನೌಕರರ ಭವಿಷ್ಯಕ್ಕೆ ಮಾರಕವಾಗಿರುವ ಹೊಸ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಪದ್ಧತಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ರಾಜ್ಯಾದ್ಯಂತ ಅನುದಾನಿತ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಶೇಕಡಾ 65ರಿಂದ 70ರಷ್ಟು ಮಹಿಳಾ ಶಿಕ್ಷಕಿಯರು ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಕಿಯರ ವರ್ಗಾವಣೆ ಸಂಬಂಧ ಸರ್ಕಾರ ಶಿಕ್ಷಕಿ ಸ್ನೇಹಿ ವರ್ಗಾವಣೆ ನೀತಿಯನ್ನು ಜಾರಿ ಮಾಡಬೇಕು. ಖಾಸಗಿ ಶಾಲೆಗಳ ಮಾದರಿಯಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸಬೇಕು ಎಂದರು.
ಚಿಕ್ಕಮಗಳೂರು ಜಿಲ್ಲೆಯಲ್ಲೂ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ಅಸ್ತಿತ್ವಕ್ಕೆ ಬಂದಿದೆ. ನವೆಂಬರ್ 26ರ ಶನಿವಾರ ಬೆಳಗ್ಗೆ 10:30ಕ್ಕೆ ನಗರದ ಕುವೆಂಪು ಕಲಾಮಂದಿರದಲ್ಲಿ ಸಂಘದ ಜಿಲ್ಲಾ ಮತ್ತು ಎಲ್ಲಾ ತಾಲೂಕು ಸಂಘಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಇದೇ ವೇಳೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಸಂಬಂಧ ಶಿಕ್ಷಕಿಯರಿಗೆ ಶೈಕ್ಷಣಿಕ ಕಾರ್ಯಗಾರವನ್ನೂ ಕೂಡ ಆಯೋಜಿಸಲಾಗಿದೆ ಎಂದರು.
ಈ ವೇಳೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಶಾಸಕ ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಸೇರಿದಂತೆ ಅನೇಕರು ಭಾಗವಹಿಸುವ ಸಾಧ್ಯತೆಯಿದೆ ಎಂದು ತಿಳಿಸಿದರು.