ದತ್ತ ಪೀಠದಲ್ಲಿ ದತ್ತಾತ್ರೇಯ ಮಂದಿರ ನಿರ್ಮಾಣ; ಶೋಭಾ ಕರಂದ್ಲಾಜೆ
ಚಿಕ್ಕಮಗಳೂರು, ಡಿಸೆಂಬರ್ 27: "ನಮ್ಮ ಸರ್ಕಾರದ ಅವಧಿಯಲ್ಲಿಯೇ ದತ್ತ ಪೀಠದ ವಿವಾದಕ್ಕೆ ಮುಕ್ತಿ ಸಿಗಲಿದೆ. ಈ ಪೀಠದಲ್ಲಿ ದತ್ತಾತ್ರೇಯ ಮಂದಿರ ನಿರ್ಮಾಣ ವಾಗುತ್ತದೆ" ಎಂದು ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಭಾನುವಾರ ಇನಾಂ ದತ್ತಾತ್ರೇಯ ಪೀಠದಲ್ಲಿ ನಡೆಯಲಿರುವ ದತ್ತಜಯಂತಿಗೆ ಚಾಲನೆ ನೀಡಲಾಯಿತು. ಚಿಕ್ಕಮಗಳೂರು ನಗರದಲ್ಲಿ ಮಹಿಳೆಯರಿಂದ ಸಂಕೀರ್ತನಾ ಯಾತ್ರೆ ನಡೆಯಿತು. ನಗರದ ಬೋಳರಾಮೇಶ್ವರ ದೇವಾಲಯದಿಂದ ಕಾಮಧೇನು ಗಣಪತಿ ದೇವಾಲಯದವರೆಗೆ ಮೆರವಣಿಗೆ ಸಾಗಿತು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಶ್ಯಾಮಲ ಕುಂದೂರು, ಚಿತ್ರನಟಿ ತಾರ ಮುಂತಾದವರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.

ಮಾಧ್ಯಮಗಳ ಜೊತೆ ಮಾತನಾಡಿದ ಶೋಭಾ ಕರಂದ್ಲಾಜೆ, "ದತ್ತಪೀಠದ ಮುಕ್ತಿಗೆ ಕಾನೂನಿನ ಅಡೆತಡೆಗಳಿವೆ. ಈ ಬಗ್ಗೆ ನಮ್ಮ ಕಾನೂನು ತಜ್ಞರು ಪರಿಶೀಲನೆ ಮಾಡುತ್ತಿದ್ದಾರೆ. ರಾಮಮಂದಿರದಂತೆ ದತ್ತಪೀಠದಲ್ಲಿ ದತ್ತಮಂದಿರ ನಿರ್ಮಾಣವಾಗಲಿದೆ" ಎಂದು ಹೇಳಿದರು.
"ಜಗತ್ತಿನಲ್ಲಿ ದತ್ತಭಕ್ತರಿದ್ದಾರೆ, ದತ್ತಪಾದುಕೆ ಇರುವುದು ಚಿಕ್ಕಮಗಳೂರಿನಲ್ಲಿ. ದತ್ತಪೀಠ ನಮ್ಮದಾಗಬೇಕು ಎಂಬುದು ಸಂಕಲ್ಪವಾಗಿದೆ. ಮುಂದಿನ ದಿನದಲ್ಲಿ ದತ್ತಪೀಠ ನಮ್ಮದಾಗುವ ವಿಶ್ವಾಸವಿದೆ" ಎಂದರು.
ಇನಾಂ ದತ್ತಾತ್ರೇಯ ಪೀಠದಲ್ಲಿ ಮೂರು ದಿನಗಳ ಕಾಲ ದತ್ತ ಜಯಂತಿ ನಡೆಯಲಿರುವ ಹಿನ್ನಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.
1 ಎಸ್ಪಿ, 6 ಎ.ಎಸ್ಪಿ, 10 ಡಿವೈಎಸ್ಪಿ, 34 ಸಿಪಿಐ, 129 ಪಿಎಸ್ಐ, 122 ಎಎಸ್ಐ 1594 ಪೇದೆಗಳು, 11 ಕೆಎಸ್ಆರ್ಪಿ ತುಕಡಿ, 20 ಡಿಎಆರ್ ತುಕಡಿ ನಿಯೋಜನೆ ಮಾಡಲಾಗಿದೆ.
100ಕ್ಕೂ ಹೆಚ್ಚು ಕಡೆ ಸಿಸಿಟಿವಿ, 25 ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಮಾಡಲಾಗುತ್ತಿದೆ. ಪ್ರತಿ ವಾಹನದ ಮೇಲೂ ಪೊಲೀಸ್ ಪಡೆ ನಿಗಾವಹಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಣ್ಗಾವಲು ಇಟ್ಟಿದೆ.












Click it and Unblock the Notifications