ಕಾಫಿನಾಡಿನಲ್ಲಿ ದತ್ತಜಯಂತಿ ಸಂಭ್ರಮ, ಚಿಕ್ಕಮಗಳೂರಿನಲ್ಲಿ ಪೊಲೀಸ್ ಹೈ ಅಲರ್ಟ್
ಚಿಕ್ಕಮಗಳೂರು, ಡಿ. 06: ಕರ್ನಾಟಕದ ಅಯೋಧ್ಯೆ ಎಂದೇ ಕರೆಸಿಕೊಳ್ಳೋ ಕಾಫಿನಾಡಿನ ದತ್ತಪೀಠದಲ್ಲಿ ಮೂರು ದಿನಗಳ ಕಾಲ ದತ್ತಜಯಂತಿ ಸಂಭ್ರಮ ಆರಂಭವಾಗಿದೆ. ಮಂಗಳವಾರ ಅನಸೂಯ ಜಯಂತಿ, ನಾಳೆ, ಶೋಭಾಯಾತ್ರೆ ನಡೆಯಲಿದ್ದು, ನಾಡಿದ್ದು ದತ್ತಪಾದುಕೆ ದರ್ಶನ ನಡೆಯಲಿದೆ. ಹಾಗಾಗಿ, ಹಿಂದೂ ಸಂಘಟನೆಗಳು ನಗರವನ್ನ ಕೇಸರಿಮಯವನ್ನಾಗಿಸಿದ್ರೆ, 4,500ಕ್ಕೂ ಅಧಿಕ ಪೊಲೀಸರು ಜಿಲ್ಲೆಯಲ್ಲಿ ಹದ್ದಿನ ಕಣ್ಣಿಟ್ಟಿದ್ದಾರೆ.
ಕಳೆದ 47 ವರ್ಷಗಳಿಂದ ದತ್ತಪೀಠದ ಉಮೇದುವಾರಿಕೆ ಹಾಗೂ ಹಿಂದೂ ಅರ್ಚಕರಿಗಾಗಿ ಹೋರಾಡುತ್ತಿದ್ದ ಹಿಂದೂ ಸಂಘಟನೆಗಳಿಗೆ ಈ ಬಾರಿ ಹಿಂದೂ ಅರ್ಚಕರನ್ನು ಪೂಜೆ ನೋಡುವ ಭಾಗ್ಯ ಲಭಿಸಿದೆ. ಮೂರು ದಿನ ಸರ್ಕಾರ ನೇಮಿಸಿರುವ ತಾತ್ಕಾಲಿಕ ಅರ್ಚಕರಿಂದ ದತ್ತಾತ್ರೇಯ ಸ್ವಾಮಿಗೆ ಪೂಜಾ-ಕೈಂಕರ್ಯಗಳು ನಡೆಯಲಿವೆ. ಸೋಮವಾರ ದತ್ತಪೀಠಕ್ಕೆ ಭೇಟಿ ನೀಡಿದ್ದ ಅರ್ಚಕರಾದ ಶ್ರೀಧರ್ ಹಾಗೂ ಸಂದೀಪ್ ದತ್ತಾತ್ರೇಯ ಸ್ವಾಮಿಗೆ ಪೂಜೆ ಮಾಡಿದ್ದಾರೆ.
ಅಂಜನಾದ್ರಿ ಬೆಟ್ಟಕ್ಕೆ ಪುನೀತ್ ಫೋಟೋ ಜೊತೆ ಭಕ್ತರ ಪಾದಯಾತ್ರೆ!
ಈ ಮಧ್ಯೆ ನಮ್ಮ ಮೊದಲ ಹಂತದ ಹೋರಾಟದಲ್ಲಿ ಜಯ ಕಂಡಿದ್ದೇವೆ. ಇನ್ಮುಂದೆ ದತ್ತಪೀಠವೇ ಬೇರೆ-ದರ್ಗಾವೇ ಬೇರೆ ಎಂಬ ಎರಡನೇ ಹಂತದ ಹೋರಾಟ ಆರಂಭ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ.
ಚುನಾವಣೆ ಸಮೀಸುತ್ತಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾದ್ಯಂತ ಖಾಕಿ ಪಡೆ 4, 500 ಪೊಲೀಸರೊಂದಿಗೆ ಹೈ ಅಲರ್ಟ್ ಘೋಷಿಸಿದ್ದು, ಓರ್ವ ಎಸ್ಪಿ, ನಾಲ್ವರು ಎ.ಎಸ್.ಪಿ. 17 ಡಿವೈಎಸ್ಪಿ, 39 ಇನ್ಸ್ಪೆಕ್ಟರ್, 156 ಸಬ್ ಇನ್ಸ್ಪೆಕ್ಟರ್, 285 ಎಎಸ್ಐ, 2050 ಕಾನ್ಸ್ಟೇಬಲ್, 200 ಲೇಡಿ ಪೋಲೀಸ್, 500 ಹೋಂ ಗಾರ್ಡ್, 15 ಕೆ.ಎಸ್.ಆರ್.ಪಿ, 25 ಡಿ.ಆರ್ ಸೇರಿ ಒಟ್ಟು 4500 ಪೊಲೀಸರು, 150ಕ್ಕೂ ಹೆಚ್ಚು ಸಿಸಿಟಿವಿಗಳು ಕಾರ್ಯನಿರ್ವಹಿಸಲಿವೆ. ಮಂಗಳೂರು, ಉಡುಪಿ, ಶಿವಮೊಗ್ಗ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಹೆಚ್ಚುವರಿ ಪೊಲೀಸರು ಬಂದೋಬಸ್ತ್ಗೆ ಬೆನ್ನೆಲುಬಾಗಿದ್ದಾರೆ.
ನಗರ ಸೇರಿದಂತೆ ಜಿಲ್ಲಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯದಂತೆ 25 ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದೆ. ಹಲವರಿಂದ ಬಾಂಡ್ ಬರೆಸಿಕೊಂಡಿದ್ದಾರೆ. ಸಮಾಜದ ಶಾಂತಿ ಕದಡಿ, ಸಾರ್ವಜನಿಕರ ನೆಮ್ಮದಿ ಹಾಳು ಮಾಡಿದ್ರೆ ನಿರ್ಧಾಕ್ಷಣ್ಯವಾಗಿ ಕಠಿಣ ಕ್ರಮ ಕೈಗೊಳ್ಳೋದಾಗಿ ಡಿಸಿ ಹಾಗೂ ಎಸ್ಪಿ ಖಡಕ್ಕಾಗಿ ಎಚ್ಚರಿಸಿದ್ದಾರೆ.
ಗುರುವಾರದವರೆಗೆ ಕಾಫಿನಾಡು ಚಿಕ್ಕಮಗಳೂರು ಬೂದಿಮುಚ್ಚಿದ ಕೆಂಡದಂತಿರಲಿದೆ. ಜಿಲ್ಲಾಡಳಿತ ಖುಡ ಶ್ರದ್ಧಾ ಭಕ್ತಿಯಿಂದ ಶಾಂತಿಯುತವಾಗಿ ಪೂಜೆ-ಕೈಂಕರ್ಯಗಳನ್ನ ಮುಗಿಸಿಕೊಳ್ಳುವಂತೆ ಮನವಿ ಮಾಡಿದೆ.
ಈ ಮಧ್ಯೆ ಮೂರ್ನಾಲ್ಕು ತಿಂಗಳಲ್ಲಿ ಚುನಾವಣೆ ಇರೋದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ತಲೆನೋವಾಗಿದೆ. ಸದ್ಯ ಸದಾ ತಣ್ಣಗಿರೋ ಕಾಫಿನಾಡಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೆ ದತ್ತಜಯಂತಿ ಮುಗಿಯಲಿ ಅನ್ನೋದು ಚಿಕ್ಕಮಗಳೂರಿಗರ ಆಶಯ.