ಸಿದ್ದರಾಮಯ್ಯ -ಸುಳ್ಳು ಒಂದೇ ನಾಣ್ಯದ ಎರಡು ಮುಖಗಳು: ಸಿ.ಟಿ.ರವಿ
ಚಿಕ್ಕಮಗಳೂರು, ಜೂ21: ಸಿದ್ದರಾಮಯ್ಯ ಮತ್ತು ಸುಳ್ಳು ಒಂದೇ ನಾಣ್ಯದ ಎರಡು ಮುಖಗಳು. ಸತ್ಯ ಮತ್ತು ಸಿದ್ದರಾಮಯ್ಯ ಎಣ್ಣೆ-ಸಿಗೇಕಾಯಿ ಇದ್ದಂತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯ ಮಾಡಿದರು.
ಪ್ರಧಾನಿ ಮೋದಿ ಯೋಗ ಕಾರ್ಯಕ್ರಮಕ್ಕಾಗಿ ರಾಜ್ಯಕ್ಕೆ ಆಗಮಿಸಿದ್ದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಟೀಕಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, "ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯ ಅವರಂತಹ ನಿಷ್ಟಾವಂತರು ಬೇರೆ ಯಾರೂ ಇಲ್ಲ. ಸುಳ್ಳಿಗೆ ಪ್ರಶಸ್ತಿ ನೀಡುವುದಾದರೆ ಸಿದ್ದರಾಮಯ್ಯ ಬಿಟ್ಟು ಬೇರೆ ಯಾರಿಗೂ ಸಿಗುವುದಿಲ್ಲ," ಎಂದು ಹೇಳಿದರು.

ಮೈಸೂರಿನ ಅರಮನೆ ಮುಂಭಾಗ ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಮೋದಿ ಮೈಸೂರಿಗೆ ಆಗಮನ ವಿರುದ್ಧ ಸಿದ್ದರಾಮಯ್ಯ ಹೇಳಿಕೆಯನ್ನು ಖಂಡಿಸುತ್ತೇನೆ. ಈ ರೀತಿ ಮಾತನಾಡುವುದು ಸರಿಯಲ್ಲ. ಪ್ರಧಾನಿ ಮೋದಿಯವರು ಪ್ರವಾಹ ಬಂದಾಗ ಬರಲಿಲ್ಲ, ಆಕ್ಸಿಜನ್ ಕೊಡಲಿಲ್ಲ, ಈಗ ಯೋಗಕ್ಕೆ ಬಂದಿದ್ದಾರೆ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಸಿ.ಟಿ. ರವಿ, "ಸುಳ್ಳು ಹೇಳುವುದಲ್ಲಿ ಅವರಂತಹಾ ನಿಷ್ಟಾವಂತರು ಬೇರೆ ಯಾರಿಲ್ಲ. ಸುಳ್ಳಿಗೆ ಪ್ರಶಸ್ತಿ ನೀಡುವುದಾದರೆ ಸಿದ್ದರಾಮಯ್ಯ ಬಿಟ್ಟು ಬೇರೆ ಯಾರಿಗೂ ಸಿಗಲ್ಲ. ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ ಆಗಿದ್ದರೂ ಆಕ್ಸಿಜನ್ ಪ್ಲಾಂಟ್ ಹಾಕಿಲ್ಲ. ಪ್ರತಿ ಆಸ್ಪತ್ರೆಗೂ ಆಕ್ಸಿಜನ್ ಪ್ಲಾಂಟ್ ಹಾಕಿದ್ದು ಪಿಎಂ ಕೇರ್ ನಲ್ಲಿ. ತ್ವರಿತ ನಿರ್ಧಾರ ಕೈಗೊಂಡರು. ಇಲ್ಲವಾದರೆ ಸಾವಿನ ಪ್ರಮಾಣ 10 ಪಟ್ಟು ಹೆಚ್ಚಾಗುತ್ತಿತ್ತು," ಎಂದರು.

9 ತಿಂಗಳಲ್ಲಿ ಎಲ್ಲರಿಗೂ ಎರಡು ಡೋಸ್ ಲಸಿಕೆ ಹಾಕಲಾಗಿದೆ. ಸಿದ್ದರಾಮಯ್ಯನವರು ಕೊರೋನಾ ಲಸಿಕೆ ಹಾಕಿಸಿಕೊಂಡಿಲ್ವಾ? ಆ ಡೋಸೇಜ್ ಇರದಿದ್ದರೆ, ಸಿದ್ದರಾಮಯ್ಯಗೆ ಸಿಗದಿದ್ದರೆ ಏನಾಗುತ್ತಿತ್ತು ಎಂದು ಊಹೆ ಮಾಡಿಕೊಳ್ಳಲಿ ಎಂದು ಪ್ರಶ್ನೆ ಮಾಡಿದರು.
ರಾಜಕೀಯ ಬಿಕ್ಕಟ್ಟಿಗೆ ಅಲ್ಲಿನ ಸರ್ಕಾರವೇ ಹೊಣೆ
ಸದ್ಯ ಮಹಾರಾಷ್ಟ್ರದಲ್ಲಿ ಸೃಷ್ಟಿಯಾಗಿರುವ ರಾಜಕೀಯ ಬಿಕ್ಕಟ್ಟಿಗೆ ಅಲ್ಲಿನ ಸರ್ಕಾರವೇ ಹೊಣೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜನ ಮಾತ್ರವಲ್ಲ, ಮಹಾರಾಷ್ಟ್ರ ಸರ್ಕಾರದ ಬಗ್ಗೆ ಮೂರು ಪಕ್ಷದ ಶಾಸಕರು ಭ್ರಮನಿರಸರಾಗಿದ್ದಾರೆ. ಶಾಸಕರುಗಳೇ ಹತಾಶರಾಗಿ ಸರ್ಕಾರ ತೊಲಗಿ ಎಂದು ಶಾಸಕರು ಬಯಸಿದ್ದಾರೆ. ಇದು ಯಾವ ತಾಳಮೇಳವೂ ಇಲ್ಲದ ಅಪವಿತ್ರ ಮೈತ್ರಿ ಸರ್ಕಾರ ಎಂದಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, "ಫಡ್ನವೀಸ್ ನೇತೃತ್ವದ ಬಿಜೆಪಿ ಸರ್ಕಾರ ಬರಬೇಕೆಂದು ಚುನಾವಣೆ ಸಂದರ್ಭದಲ್ಲೇ ಅಪೇಕ್ಷೆ ಇತ್ತು. 2019 ಜನ ಮತ ಹಾಕಿದ್ದು ಮೋದಿ, ಫಡ್ನವಿಸ್ ನೇತೃತ್ವದ ಸರ್ಕಾರಕ್ಕೆ ಆದರೆ ಅಲ್ಲಿ ಅಪವಿತ್ರ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದರಿಂದ ಶಾಸಕರೇ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಮಹಾರಾಷ್ಟ್ರ ಸರ್ಕಾರ ತತ್ವಹೀನ ಸರ್ಕಾರ, ಇದಕ್ಕೆ ಸಿದ್ಧಾಂತ, ಅಭಿವೃದ್ಧಿ ಯೋಜನೆಗಳು ಇಲ್ಲವೇ ಇಲ್ಲ. ಈ ಸರ್ಕಾರ ಬೀಳಲಿ ಅಂತ ಜನರು ಹಾಗೂ ಶಾಸಕರೇ ಬಯಸಿದ್ದಾರೆ ಎಂಬುದ ರಾಜಕೀಯ ಬೆಳವಣಿಗೆಯಿಂದ ಸ್ಪಷ್ಟವಾಗಿದೆ," ಎಂದು ಹೇಳಿದರು.












Click it and Unblock the Notifications