ದತ್ತಪೀಠಕ್ಕೆ ಸಿಎಂ ಸಿದ್ದರಾಮಯ್ಯ ಆಹ್ವಾನಿಸಿದ ಸಿಟಿ ರವಿ
ಚಿಕ್ಕಮಗಳೂರು, ನವೆಂಬರ್ 21: "ಸಮಯ ಬಂದರೆ ದತ್ತ ಮಾಲೆಯನ್ನೂ ಹಾಕುತ್ತೇವೆ" ಎಂಬ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್. ಡಿ. ಕುಮಾರಸ್ವಾಮಿ ಹೇಳಿಕೆ ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈಗ ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಸೇರಿಸಲಾಗಿದೆ.
ಹೌದು, ಚಿಕ್ಕಮಗಳೂರಿನಲ್ಲಿ ಮಂಗಳವಾರ ಮಾತನಾಡಿದ ಬಿಜೆಪಿ ನಾಯಕ ಸಿ. ಟಿ. ರವಿ ಎಚ್. ಡಿ. ಕುಮಾರಸ್ವಾಮಿ ಜೊತೆ ಸಿದ್ದರಾಮಯ್ಯ, ಜಮೀರ್ ಅಹ್ಮದ್ ಖಾನ್ ಸಹ ದತ್ತಪೀಠಕ್ಕೆ ಬರಲಿ ಎಂದು ಆಹ್ವಾನ ಕೊಟ್ಟಿದ್ದಾರೆ.

ಸಿ. ಟಿ. ರವಿ ಮಾತನಾಡಿ, "ಕುಮಾರಸ್ವಾಮಿ ಜೊತೆ ಸಿದ್ದರಾಮಯ್ಯನವರು ದತ್ತಪೀಠಕ್ಕೆ ಬರಲಿ. ಹಿಂದೂ ಎಂದು ಹೇಳಿಕೊಳ್ಳಲು ಗರ್ವ ಪಡಬೇಕು. ಸಮಾಜ ಇದನ್ನೇ ಕೇಳೋದು. ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಹೇಳಿಕೆ ಸಿದ್ದರಾಮಯ್ಯನವರಿಗೂ ಮಾದರಿ. ನಾನು ಹಿಂದೂ ಅಲ್ವಾ, ನನ್ನ ಹೆಸರಲ್ಲೇ ಸಿದ್ರಾಮ ಇದ್ದಾನೆ ಎಂದಿದ್ದಾರೆ. ನೀವು ಮಾಲೆ ಹಾಕಿಕೊಂಡು ಬಂದರೆ ನಮ್ಮ ಸತ್ಯದ ಹೋರಾಟಕ್ಕೆ ಬಲ ಬರಲಿದೆ" ಎಂದು ಹೇಳಿದರು.
"ನೀವು ಮಾಲೆ ಹಾಕಿದೆ ಮೇಲೆ ಜಮೀರ್ ಅವರು ಮಾಲೆ ಹಾಕೇ ಹಾಕುತ್ತಾರೆ. ಆಗ 5 ದಶಕದ ಹೋರಾಟಕ್ಕೆ ಬಲ ಬರುತ್ತದೆ. ಸತ್ಯವನ್ನು ಎತ್ತಿ ಹಿಡಿದಂತಾಗುತ್ತದೆ. ನಮ್ಮ ಧರ್ಮದ ಪ್ರಕಾರ ನಡೆದುಕೊಳ್ಳಲು ಯಾರಿಗೆ ಏಕೆ ಹೆದರಬೇಕು?" ಎಂದು ಸಿ. ಟಿ. ರವಿ ಪ್ರಶ್ನೆ ಮಾಡಿದ್ದಾರೆ.
"ಯಾರೂ ಎಲೆಕ್ಷನ್ ಟೈಂ ಹಿಂದೂಗಳಾಗಬಾರದು. ಜೀವನ ಪರ್ಯಂತ ಹಿಂದೂಗಳಾಬೇಕು. ಹಿಂದುತ್ವದ ವಿಚಾರ ಬಂದಾಗ ಹಿಂದೆ ನೋಡಲೇಬಾರದು, ಮುಂದಕ್ಕೆ ನೋಡಬೇಕು. ಸಿದ್ದರಾಮಯ್ಯನವರು ಬರಲಿ ಎಂದು ಮನವಿ ಮಾಡುತ್ತೇನೆ" ಎಂದರು.
ಕುಮಾರಸ್ವಾಮಿ ಹೇಳಿಕೆ; ಭಾನುವಾರ ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಗ್ರಾಮದಲ್ಲಿ ಮಾತನಾಡಿದ್ದ ಎಚ್. ಡಿ. ಕುಮಾರಸ್ವಾಮಿ, "ದತ್ತಮಾಲೆ ಹಾಕುವ ಸಮಯ ಬಂದರೆ ದತ್ತಮಾಲೆಯನ್ನು ಹಾಕುತ್ತೀನಿ" ಎಂದು ಹೇಳಿಕೆ ನೀಡಿದ್ದರು.
"ದತ್ತಮಾಲೆ ಏಕೆ ಹಾಕಬಾರದು. ದೇವರ ಕಾರ್ಯಕ್ರಮ, ಹಾಕೋದು ಬಂದರೆ ಹಾಕುತ್ತೇನೆ. ಅದು ಕಾನೂನು ಬಾಹಿರವಾಗಿ ಅಲ್ಲ, ಕಾನೂನು ಬಾಹಿರವಾಗಿ ಯಾವುದನ್ನೂ ಮಾಡಲ್ಲ, ನಮ್ಮ ಸಂಸ್ಕೃತಿ ಉಳಿಸಲು ಕಾನೂನಾತ್ಮಕವಾಗಿ ಏನು ಬೇಕಾದರೂ ಮಾಡುತ್ತೇನೆ" ಎಂದು ತಿಳಿಸಿದ್ದರು.
ಎಚ್. ಡಿ. ಕುಮಾರಸ್ವಾಮಿ ಹೇಳಿಕೆಯನ್ನು ವಿಶ್ವ ಹಿಂದೂ ಪರಿಷತ್, ಬಜರಂಗದಳ ಸ್ವಾಗತಿಸಿದ್ದವು. ಸೋಮವಾರ ವಿಶ್ವ ಹಿಂದು ಪರಿಷತ್ನ ಕಾರ್ಯಕಾರಣಿ ಸದಸ್ಯ ರಘು ಸಕಲೇಶಪುರ ಟ್ವೀಟ್ ಮಾಡಿ ಎಚ್. ಡಿ. ಕುಮಾರಸ್ವಾಮಿ ಹೇಳಿಕೆ ಸ್ವಾಗತಿಸಿದ್ದರು.
"ಮಾನ್ಯ ಕುಮಾರಸ್ವಾಮಿಯವರು ದತ್ತಮಾಲೆಧಾರಣೆ ಮಾಡಲು ನಿರ್ಧರಿಸಿರುವುದು ಸ್ವಾಗತಾರ್ಹ. ನಿಮ್ಮ ರಾಜಕೀಯ ಭವಿಷ್ಯ ಬದಲಾಗಲಿದ್ದು, ಇನ್ನಷ್ಟು ಶಕ್ತಿ ನೀಡಲಿ ಎಂದು ದತ್ತಾತ್ರೇಯ ಸ್ವಾಮಿಯಲ್ಲಿ ಬೇಡುತ್ತೇನೆ" ಎಂದು ಟ್ವೀಟ್ನಲ್ಲಿ ಹೇಳಿದ್ದರು.












Click it and Unblock the Notifications