ರಾಹುಲ್ ಕಾಲಿಟ್ಟಿದ್ದಾರೆ ಕಾಂಗ್ರೆಸ್ಗೆ ಸೋಲು ಕಟ್ಟಿಟ್ಟ ಬುತ್ತಿ; ಶೋಭಾ
ಚಿಕ್ಕಮಗಳೂರು, ಮಾರ್ಚ್ 02: " ರಾಹುಲ್ ಗಾಂಧಿ ಕಾಲಿಟ್ಟಲ್ಲೆಲ್ಲಾ ಕಾಂಗ್ರೆಸ್ ನೆಲಕಚ್ಚುತ್ತಿದೆ. ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲೂ ಕಾಂಗ್ರೆಸ್ಸಿಗೆ ಸೋಲು ಕಟ್ಟಿಟ್ಟ ಬುತ್ತಿ" ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಮಂಗಳವಾರ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದರು. "ಪದೇ-ಪದೇ ಸೋಲುವುದರಿಂದ ಕಾಂಗ್ರೆಸ್ಸಿಗರಿಗೆ ಬುದ್ಧಿ ಭ್ರಮಣೆಯಾಗಿದೆ ಅವರಿಗೆ ಚಿಕಿತ್ಸೆಯ ಅಗತ್ಯವಿದೆ ಎಂದು ಅನ್ನಿಸುತ್ತದೆ" ಎಂದರು.
"ನೀವು ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷವಾಗೂ ಉಳಿದಿಲ್ಲ. ವಂಶಾಡಳಿತ, ದುರಾಡಳಿತ, ಭ್ರಷ್ಟಾಚಾರದಿಂದಾಗಿ ಜನರಿಂದಲೇ ನಾಶವಾಗಿದ್ದೀರಾ. ಯಾವ ರಾಜ್ಯದಲ್ಲೂ ಕಾಂಗ್ರೆಸ್ ಅಸ್ತಿತ್ವ ಉಳಿಯುವುದಿಲ್ಲ" ಎಂದು ಭವಿಷ್ಯ ನುಡಿದರು.

"ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ ನಾನಾ ರೀತಿಯ ನಾಟಕ ಮಾಡುತ್ತಾರೆ. ಲೋಕಸಭೆ ಚುನಾವಣೆ ನಡೆದಾಗ ವಿದೇಶಕ್ಕೆ ಓಡಿ ಹೋಗುತ್ತಾರೆ. ಈಗ ಚುನಾವಣೆಗಾಗಿ ನೀರಿಗಿಳಿಯೋದು, ಹಾಡೋದು, ಡ್ಯಾನ್ಸ್ ಮಾಡೋದು ಮಾಡುತ್ತಿದ್ದಾರೆ" ಎಂದು ಲೇವಡಿ ಮಾಡಿದರು.
"ಕಾಂಗ್ರೆಸ್ ನಾವಿಕನಿಲ್ಲದ ದೋಣಿಯಂತಾಗಿದೆ. ದೆಹಲಿಯಲ್ಲೂ ಲೀಡರ್ಗಳಿಲ್ಲ, ರಾಜ್ಯದಲ್ಲೂ ನಾಯಕರಿಲ್ಲ. ಪಕ್ಷದಲ್ಲಿನ ಪರಸ್ಪರರ ಕಾದಾಟಕ್ಕೆ ಮೈಸೂರು ಪಾಲಿಕೆ ಚುನಾವಣೆ ಉದಾಹರಣೆಯಾಗಿದೆ" ಎಂದು ಹೇಳಿದರು.
"ಈಗಾಗಲೇ ಜನರು ಕಾಂಗ್ರೆಸ್ನಿಂದ ಬೇಸತ್ತು ಬಿಜೆಪಿ ಬೆಂಬಲಿಸಿದ್ದಾರೆ. ಮುಂದಿನ ದಿನಗಳಲ್ಲೂ ದೇಶ, ರಾಜ್ಯದಲ್ಲಿ ಬಿಜೆಪಿ ಅಧಿಕಾರ ಪಡೆಯಲಿದೆ. ಕಾಂಗ್ರೆಸ್ನವರು ಕಿತ್ತಾಡುತ್ತಲೇ ಇರಲಿ" ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.
ರಾಹುಲ್ ಹೇಳಿದ್ದೇನು?; ತಮಿಳುನಾಡು ವಿಧಾನಸಭೆ ಚುನಾವಣೆ ಪ್ರಚಾರ ನಡೆಸುವಾಗ ರಾಹುಲ್ ಗಾಂಧಿ ತಿರುನೇಲ್ವಿಯ ಸೇಂಟ್ ಕ್ಸೇವಿಯರ್ಸ್ ಕಾಲೇಜಿನ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ್ದರು.
ಆಗ, "74 ವರ್ಷಗಳ ಹಿಂದೆ ಬ್ರಿಟಿಷರನ್ನು ಭಾರತದಿಂದ ತೊಲಗಿಸಿದ್ದೇವೆ. ಈಗ ನರೇಂದ್ರ ಮೋದಿ ಸರ್ಕಾರವನ್ನು ಇಳಿಸುವುದು ಅಷ್ಟೇನು ಕಷ್ಟವಲ್ಲ" ಎಂದು ಹೇಳಿಕೆ ನೀಡಿದ್ದರು.
ತಮಿಳುನಾಡು ವಿಧಾನಸಭೆ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿದೆ. ಎಲ್ಲಾ 234 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಏಪ್ರಿಲ್ 6ರಂದು ಚುನಾವಣೆ ನಡೆಯಲಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications