ಮತಗಟ್ಟೆಯಲ್ಲಿ ಕಾಂಗ್ರೆಸ್-ಬಿಜೆಪಿ ಮಾತಿನ ಜಟಾಪಟಿ: ಅವಾಜ್ ಹಾಕಿದ ತಮ್ಮಯ್ಯಗೆ ವಲಸೆ ಹಕ್ಕಿ ಎಂದ ಬಿಜೆಪಿಗರು
ಚಿಕ್ಕಮಗಳೂರು, ಮೇ 10: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತದಾನದ ದಿನವೂ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವಿನ ಕಿತ್ತಾಟ ಮುಂಡುವರಿಸಿದೆ. ಬಸವನಹಳ್ಳಿ ಶಾಲೆ ಮತಗಟ್ಟೆ ಮುಂಭಾಗದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಇದೀಗ ಕಾಂಗ್ರೆಸ್ ಅಭ್ಯರ್ಥಿ ಎಚ್.ಡಿ ತಮ್ಮಯ್ಯ ಕೂಡ ಜಗಳಕ್ಕಿಳಿದಿದ್ದಾರೆ.
ಚಿಕ್ಕಮಗಳೂರು ನಗರದ ಬಸವನಹಳ್ಳಿ ಶಾಲೆ ಮತಗಟ್ಟೆಯ ಬಳಿ ಬಿಜೆಪಿ ಕಾರ್ಯಕರ್ತರು ಕೇಸರಿ ಶಾಲು ಧರಿಸಿ ಓಡಾಡಿದ್ದನ್ನು ಕಾಂಗ್ರೆಸ್ ಕಾರ್ಯಕರ್ತರು ಖಂಡಿಸಿದ್ದಾರೆ. ಇದೇ ವಿಚಾರಕ್ಕೆ ಗಲಾಟೆ ಆರಂಭವಾಗಿದ್ದು, ನಗರಸಭೆ ಅಧ್ಯಕ್ಷ ವೇಣುಗೋಪಾಲ್ 'ಇದು ಹಿಂದುತ್ವದ ಶಾಲು ನಿಮ್ಮ ಅಪ್ಪನ ಮನೆಯ ಶಾಲಲ್ಲ' ಎಂದು ಕಾಂಗ್ರೆಸ್ ಕಾರ್ಯಕರ್ತನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು ಗುಂಪುಗಳನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.

ಬಳಿಕ ಬಸವನಹಳ್ಳಿ ಶಾಲೆ ಮತಗಟ್ಟೆಯ ಬಳಿಗೆ ಬಂದ ಕಾಂಗ್ರೆಸ್ ಅಭ್ಯರ್ಥಿ ಎಚ್.ಡಿ ತಮ್ಮಯ್ಯ ನಮ್ಮ ಕಾರ್ಯಕರ್ತರ ವಿಷಯಕ್ಕೆ ಯಾಕೆ ಬಂದೆ ಎಂದು ಬಿಜೆಪಿ ಮುಖಂಡನಿಗೆ ಪ್ರಶ್ನಿಸಿದ್ದಾರೆ. ಈ ವೇಳೆ ನಗರದ ಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಹಾಗೂ ಎಚ್.ಡಿ ತಮ್ಮಯ್ಯ ನಡುವೆ ಮಾತಿನ ಚಕಮಕಿ ನಡೆದಿದೆ.
ನಗರಸಭೆ ಅಧ್ಯಕ್ಷನಿಗೆ ನನ್ನ ಋಣದಲ್ಲಿದ್ದೀಯಾ ಎಂದ ಎಚ್.ಡಿ ತಮ್ಮಯ್ಯ ಯಾಕೋ? ನಮ್ಮ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದೆಯಂತೆ? ಇವೆಲ್ಲಾ ಚೆನ್ನಾಗಿರಲ್ಲ. ನೀನು ಬದುಕುತ್ತಿರುವುದು ನನ್ನ ಭಿಕ್ಷೆಯಲ್ಲಿ, ಇದು ಮತ್ತೆ ಪುನರಾವರ್ತನೆ ಆದರೆ ಚೆನ್ನಾಗಿರಲ್ಲ ಎಂದು ಅವಾಜ್ ಹಾಕಿದ್ದಾರೆ. ಈ ವೇಳೆ ಮತಗಟ್ಟೆ ಮುಂದೆಯೇ ತಮ್ಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದ ಬಿಜೆಪಿ ಕಾರ್ಯಕರ್ತರು ವಲಸೆ ಹಕ್ಕಿಗೆ ಧಿಕ್ಕಾರ ಎಂದು ಕೂಗಿ ಸೋಲ್ತೀಯಾ..! ಸೋತ ಮೇಲೆ ಮತ್ತೆ ಇಲ್ಲಿಗೆ ಬರಬೇಕು ಎಂದು ವ್ಯಂಗ್ಯವಾಡಿದ್ದಾರೆ.












Click it and Unblock the Notifications