ಹಗ್ಗ ಜಗ್ಗಾಟದಲ್ಲಿ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನ; ಸಿದ್ದರಾಮಯ್ಯ ಎಂಟ್ರಿ
ಚಿಕ್ಕಮಗಳೂರು, ಜನವರಿ 9: ಚಿಕ್ಕಮಗಳೂರಿನ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಇನ್ನು ಒಂದು ದಿನ ಮಾತ್ರ ಉಳಿದಿದೆ. ಆದರೆ ನಾಳೆ ಶೃಂಗೇರಿಯಲ್ಲಿ ನಡೆಯಲಿರುವ ಈ ಸಾಹಿತ್ಯ ಹಬ್ಬ ಆರಂಭಕ್ಕೂ ಮುನ್ನವೇ ಗೊಂದಲದಲ್ಲಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಕಲ್ಕುಳಿ ವಿಠ್ಠಲ ಹೆಗ್ಡೆ ಅವರನ್ನು ಆಯ್ಕೆ ಮಾಡಿರುವುದು ಹಲವು ವಿರೋಧಗಳನ್ನು ಹುಟ್ಟುಹಾಕಿದೆ. ಜಿಲ್ಲಾ ಉಸ್ತುವಾರಿ ಸಚಿವ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಸಮ್ಮೇಳನಾಧ್ಯಕ್ಷರ ಆಯ್ಕೆಗೆ ವಿರೋಧ ವ್ಯಕ್ತಪಡಿಸಿರುವುದು ಇನ್ನಷ್ಟು ಗೊಂದಲದ ವಾತಾವರಣವನ್ನು ಮೂಡಿಸಿದೆ.
ಆರಂಭಕ್ಕೂ ಮುನ್ನವೇ ಜಿಲ್ಲಾ ನುಡಿ ಜಾತ್ರೆಗೆ ಬಂತು ವಿಘ್ನ
"ಸಾಹಿತ್ಯ ಸಮ್ಮೇಳನಗಳು ಸಂಘರ್ಷಕ್ಕೆ ಎಡೆಮಾಡಿಕೊಡಬಾರದು. ಸಮ್ಮೇಳನ ಅಧ್ಯಕ್ಷರ ಆಯ್ಕೆಗೆ ನನ್ನ ವಿರೋಧವಿದೆ. ಇದು ವ್ಯಕ್ತಿಗತ, ವೈಚಾರಿಕ ವಿರೋಧ ಅಲ್ಲ, ಅಧ್ಯಕ್ಷರು ನಕ್ಸಲ್ ಹಿನ್ನೆಲೆ ಇರುವುದರಿಂದ ವಿರೋಧವಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಬ್ಯಾಲೆಟ್ ಮೇಲೆ ನಂಬಿಕೆ ಇಟ್ಟಿದೆ. ನಕ್ಸಲರು ಬುಲೆಟ್ ಮೇಲೆ ನಂಬಿಕೆ ಇಟ್ಟಿದ್ದಾರೆ, ಹಾಗಾಗಿ ವಿರೋಧ ಮಾಡಲಾಗುತ್ತಿದೆ" ಎಂದು ಹೇಳಿಕೆ ನೀಡಿದ್ದರು.
ಸಮ್ಮೇಳನಕ್ಕೆ ಪರ - ವಿರೋಧ ಇರುವುದರಿಂದ ಜಿಲ್ಲಾಡಳಿತ ಅನುದಾನದ ಬಗ್ಗೆಯೂ ಚರ್ಚೆ ಮಾಡುತ್ತಿದೆ.
ಈ ವಿವಾದಕ್ಕೆ ಟ್ವಿಟರ್ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಎಂಟ್ರಿ ಕೊಟ್ಟಿದ್ದಾರೆ. "ತಮ್ಮ ಪಕ್ಷದ ರಾಜಕೀಯ ಸಿದ್ಧಾಂತ ಒಪ್ಪದಿರುವವರು ಅಧ್ಯಕ್ಷರಾಗಿರುವ ಕಾರಣಕ್ಕೆ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ನಿರಾಕರಿಸಿರುವ ಸಚಿವ ಸಿ.ಟಿ.ರವಿ ನಿರ್ಧಾರ ಕನ್ನಡ ನಾಡು ನುಡಿಗೆ ಬಗೆದ ದ್ರೋಹ" ಎಂದು ಟ್ವೀಟ್ ಮಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನ; ಅಧ್ಯಕ್ಷರ ಆಯ್ಕೆಗೆ ಅಪಸ್ವರ
ಸಮ್ಮೇಳನಾಧ್ಯಕ್ಷರನ್ನು ಬದಲಿಸಲು ಒತ್ತಾಯಿಸಿ ಸಂಘ ಪರಿವಾರದಿಂದ ನಾಳೆ ಶೃಂಗೇರಿ ಬಂದ್ ಗೆ ಕರೆ ನೀಡಲಾಗಿದ್ದು, ಸಾಹಿತ್ಯ ಸಮ್ಮೇಳನದಲ್ಲಿ ಸರ್ಕಾರದ ಹಸ್ತಕ್ಷೇಪ ಖಂಡಿಸಿ ಶೃಂಗೇರಿಯಲ್ಲಿ ಸಾಹಿತಿಗಳು ಇಂದು ನಿರಶನ ಕೈಗೊಂಡಿದ್ದಾರೆ.