ಶ್ರೀಗಂಧಕ್ಕೆ ಪರಿಹಾರ: ಹೈಕೋರ್ಟ್ ಆದೇಶಕ್ಕೆ ಕಿಮ್ಮತ್ತು ನೀಡದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ
ಚಿಕ್ಕಮಗಳೂರು, ಮಾ.10: ಶ್ರೀಗಂಧ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದು ಹೇಗಾದರೂ ಮಾಡಿ ತಮಗೆ ನ್ಯಾಯ ನೀಡಬೇಕು ಎಂದು ಆಗ್ರಹಿಸಿ ತಾವು ಬೆಳೆದ ಶ್ರೀಗಂಧದ ಮರದ ಬಳಿಯೇ ಕುಳಿತು ಪ್ರತಿಭಟನೆ ನಡೆಸಿದ ಪ್ರಸಂಗ ಚಿಕ್ಕಮಗಳೂರು ಜಿಲ್ಲೆ ತರೀಕರೆ ತಾಲೂಕಿನ ಹಳಿಯೂರು ಗ್ರಾಮದಲ್ಲಿ ನಡೆದಿದೆ.
ಈ ಗ್ರಾಮದ 22 ಮಂದಿ ರೈತರು 8 ವರ್ಷದಿಂದ ಇಲ್ಲಿ ಭೂಮಿ ತೆಗೆದುಕೊಂಡು ಶ್ರೀಗಂಧ ಬೆಳೆದಿದ್ದರು. ಆದರೆ ಇದೀಗ ತರೀಕೆರೆ ಬೈಪಾಸ್ ರಾಷ್ಟ್ರೀಯ ಹೆದ್ದಾರಿಯನ್ನ ನಿರ್ಮಿಸಲು ಇವುಗಳಿಗೆ ಕೊಡಲಿ ಪೆಟ್ಟು ಬೀಳೋ ಸಮಯ ಸನ್ನಿಹಿತವಾಗಿದೆ. ಆರು ವರ್ಷದ ಹಿಂದೆಯೇ ಈ ಜಾಗಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ನೋಟಿಫಿಕೇಶನ್ ಮಾಡಿದ್ದಾರೆ. ಈ ವೇಳೆ ಕೇವಲ ಭೂಮಿಗೆ ಮಾತ್ರ ಅತಿ ಕಡಿಮೆ ಬೆಲೆ ಕಟ್ಟಿ ಪರಿಹಾರ ನೀಡಿದ್ದಾರೆ. ಆದರೆ ಅದೇ ಭೂಮಿಯಲ್ಲಿ ಬೆಳೆದಿದ್ದ ಶ್ರೀಗಂಧದ ಮರಗಳಿಗೆ ಪರಿಹಾರದ ಹಣ ನೀಡಲು ಪ್ರಾಧಿಕಾರ ಮೀನಾಮೇಷ ಎಣಿಸುತ್ತಿದ್ದು, ರೈತರು ಅಡಕತ್ತರಿಯಲ್ಲಿ ಸಿಲುಕಿಕೊಂಡಿದ್ದಾರೆ.
ಮೊದಲು ಶ್ರೀಗಂಧದ ಬೆಳೆಗೆ ಬೆಲೆ ಫಿಕ್ಸ್ ಮಾಡಲು ಹಾವು ಏಣಿ ಆಟವನ್ನ ಪ್ರಾಧಿಕಾರ ಮಾಡಿತ್ತು. ಸರ್ಕಾರಿ, ಖಾಸಗಿ ಎಜೆನ್ಸಿ ಎಂದು ವರ್ಷಗಟ್ಟಲ್ಲೇ ಸಮಯ ದೂಡುತ್ತಲೇ ಬಂತು. ಕೊನೆಗೆ ಶ್ರೀಗಂಧ ಮರದ 30 ವರ್ಷದ ಜೀವಿತಾವಧಿಯನ್ನ ಗಮನದಲ್ಲಿಟ್ಟುಕೊಂಡು ಒಂದು ಮರಕ್ಕೆ 2 ಲಕ್ಷದ 44 ಸಾವಿರ ರೂಪಾಯಿಯನ್ನ ನೀಡುವಂತೆ ಹೈಕೋರ್ಟ್ ಸೂಚಿಸಿದೆ. ಆದರೂ ಅರಣ್ಯ ಇಲಾಖೆ ದಿನಕ್ಕೊಂದು ವರದಿ ತಯಾರಿಸುತ್ತಾ ಶ್ರೀಗಂಧ ಬೆಳೆದ ರೈತರಿಗೆ ಯಾಮಾರಿಸುತ್ತಲೇ ಬರುತ್ತಿದೆ.

ಹತ್ತು ವರ್ಷದ ಒಂದು ಮರಕ್ಕೆ ಕೇವಲ 1176ರೂಪಾಯಿ ನೀಡುವುದಾಗಿ ಹೇಳಿದೆ. ಎಲ್ಲಿಯ 2 ಲಕ್ಷ, ಎಲ್ಲಿಯ 1 ಸಾವಿರ..? ಇವರು ಕೊಡುವ ಪರಿಹಾರ ಯಾವುದಕ್ಕೂ ಸಾಕಾಗುವುದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯ ಆದೇಶ ಮಾಡಿದ್ದರು ರೈತರನ್ನ ಸತಾಯಿಸುತ್ತಿರೋ ಅಧಿಕಾರಿಗಳ ನಡೆ ಪ್ರಶ್ನಿಸಿ ಅನಿರ್ಧಿಷ್ಟಾವಧಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ಇನ್ನು ಈ ಬಗ್ಗೆ ನೊಂದ ರೈತ ವಿಶುಕುಮಾರ್ ಮಾತಾನಾಡಿ, 'ಹೈಕೋರ್ಟ್ ಆದೇಶ ಮಾಡಿದ್ದರು ಇವರು ಹಣ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ರಾಷ್ಟ್ರೀಯ ಪ್ರಾಧಿಕಾರದ ಅಧಿಕಾರಿಗಳು ದಿನಕ್ಕೊಂದು ತಮಗೆ ಬೇಕಾದ ರೀತಿಯಲ್ಲಿ ವರದಿ ತಯಾರಿಸಿ ನಮ್ಮಗೆ ಅನ್ಯಾಯ ಮಾಡುತ್ತಿದ್ದಾರೆ. ಇವಾಗ ರೂಪಾಯಿ ಲೆಕ್ಕದಲ್ಲಿ ಶ್ರೀಗಂಧ ಪರಿಹಾರ ಹಣವನ್ನ ವರದಿ ತಯಾರಿಸಿದ್ದಾರೆ. ಲಕ್ಷ ನೀಡುವ ಜಾಗದಲ್ಲಿ 450 ರಿಂದ 500 ರೂಪಾಯಿ ನೀಡುವುದಾಗಿ ಪರಿಹಾರದ ಪಟ್ಟಿ ತಯಾರಿಸಿದ್ದಾರೆ. ಇವರು ಕೊಡುವ ಹಣದಲ್ಲಿ ವಿಷವು ಕೂಡ ಖರೀದಿ ಮಾಡೋಕೆ ಆಗೋಲ್ಲ, ಇವರು ಪರಿಹಾರ ಕೊಡಲಿ ಇಲ್ಲದಿದ್ದರೆ ನಾವು ಉಗ್ರವಾದ ಹೋರಾಟ ಮಾಡುತ್ತೇವೆ, ಇಲ್ಲದಿದ್ದರೆ ಇದೆ ವಿಷ ಕುಡಿದು ಸಾಯುತ್ತೇವೆ' ಎಂದು ಆಳಲು ತೋಡಿಕೊಂಡರು.

ಇನ್ನು ಈ ಬಗ್ಗೆ ನೊಂದ ಮಹಿಳೆ ರಾಜೇಶ್ವರಿ ಮಾತಾನಾಡಿ, 'ನಾವು ಇದನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದೇವೆ, ಹತ್ತು ವರ್ಷದ ಹಿಂದೆ ಒಡವೆ ಅಡವಿಟ್ಟು ಈ ಜಾಗ ಖರೀದಿ ಮಾಡಿ ಶ್ರೀಗಂಧ ಬೆಳೆದಿದ್ದೇವೆ. ಇದರಿಂದ ಒಳ್ಳೆಯ ಪರಿಹಾರದ ಹಣ ಬರುತ್ತದೆ ಅಂದುಕೊಂಡರೆ ಇವಾಗ ಪರಿಹಾರ ಕೊಡೋಕೆ ಹಿಂದೇಟು ಹಾಕುತ್ತಿದ್ದಾರೆ. ಮನೆ ಬಾಡಿಗೆ ಕಟ್ಟಿಕೊಂಡು, ಸಾಲದ ಹಣಕ್ಕೆ ಬಡ್ಡಿ ಕಟ್ಟಿ ಜೀವನ ಸಾಗಿಸುತ್ತಿದ್ದೇವೆ. ಹತ್ತು ದಿನದಿಂದ ಇದೇ ಜಾಗದಲ್ಲಿ ಪ್ರತಿಭಟನೆ ಮಾಡುತ್ತಿದ್ದರು ಯಾವ ಅಧಿಕಾರಿಗಳು ಇತ್ತ ಗಮನಿಸಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಅಭಿವೃಧಿ ಹೆಸರಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆಗೆ ಶ್ರೀಗಂಧ ಮರಗಳು ಬಲಿಯಾಗೋದು ಪಕ್ಕಾ ಆಗಿದೆ. ಶ್ರೀಗಂಧ ಬೆಳಿಯಬೇಕು, ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕು ಎಂಬ ರೈತರ ಕನಸಂತೂ ಭಗ್ನವಾಗಿದೆ.












Click it and Unblock the Notifications